ಡಿ.ಆರ್.ರಾಜು ಉದಾರ ಚರಿತ್ರೆಯ ಅಪರೂಪದ ಕರ್ಮಜೀವಿ: ಡಾ.ಎಂ. ವೀರಪ್ಪ ಮೊಯಿಲಿ

KannadaprabhaNewsNetwork | Published : Nov 25, 2024 1:01 AM

ಸಾರಾಂಶ

ಬ್ಲಾಕ್ ಕಾರ್ಕಳ ಹಾಗೂ ಬ್ಲಾಕ್ ಕಾಂಗ್ರೆಸ್ ಹೆಬ್ರಿ ಜಂಟಿಯಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ಇತ್ತೀಚೆಗೆ ನಿಧನರಾದ ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಡಿ ಆರ್ ರಾಜು ಅವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಸ್ವರ್ಗೀಯ ಡಿ. ಆರ್.ರಾಜು ಒಬ್ಬ ಉದಾರ ಚರಿತ್ರೆಯ ಅಪರೂಪದ ಕರ್ಮಜೀವಿ. ಅವರು ತಮ್ಮ ಬದುಕಿನಲ್ಲಿ ಪ್ರತಿಪಾದಿಸಿಕೊಂಡು ಬಂದ ಸಮಾಜಮುಖೀ ಕೆಲಸಗಳ ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಬದ್ಧತೆಯಾಗಿದೆ. ಆ

ಮೂಲಕ ಅಗಲಿದ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರೋಣ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯಿಲಿ ಹೇಳಿದ್ದಾರೆ.ಅವರು ಬ್ಲಾಕ್ ಕಾರ್ಕಳ ಹಾಗೂ ಬ್ಲಾಕ್ ಕಾಂಗ್ರೆಸ್ ಹೆಬ್ರಿ ಜಂಟಿಯಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಇತ್ತೀಚೆಗೆ ನಿಧನರಾದ ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಡಿ ಆರ್ ರಾಜು ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದಿ.ರಾಜು ಕಾಂಗ್ರೆಸ್ ಪಕ್ಷದ ಒಬ್ಬ ಅತಿ ನಿಷ್ಠಾವಂತ ಕರ್ತವ್ಯನಿಷ್ಟ ಜನಪರ ಚಿಂತನೆಯ ಕಾರ್ಯಸಾಧಕ ನಾಯಕರಾಗಿದ್ದರು. ಕಾಂಗ್ರೆಸ್ ಪ್ರತಿಪಾದಿಸಿಕೊಂಡು ಬಂದ ಶಾಂತಿ ಸೌಹಾರ್ದತೆ ಅವರ ಬದುಕಿನ ಜೀವಾಳವಾಗಿತ್ತು. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ನಾಯಕ ಉದಯ್ ಶೆಟ್ಟಿ ಮಾತನಾಡಿ ದಿ. ರಾಜು ಸಮಾಜದ ಸರ್ವಾಂಗೀಣ ಚಿಂತೆನೆ ಉಳ್ಳವರು ಸಮಾಜದ ಸರ್ವ ವ್ಯಕ್ತಿಗಳನ್ನು ಹೊಂದಿಕೊಂಡ ಜೀವನ ಸಾಧನೆ ಮಾಡಿದವರು ಕೊರೋನಾ ಕಷ್ಟ ಕಾಲದ ಸಂದರ್ಭದಲ್ಲಿ ಅವರು ಮಾಡಿದ ಜನಸೇವೆ ಅವಿಸ್ಮರಣೀಯ ಅವರ ಅಗಲಿಕೆ ನನಗೆ ಪಕ್ಷ ಸಂಘಟನೆಯ ವಿಚಾರವಾಗಿಯೂ ಅಪಾರ ನಷ್ಟ ಉಂಟು ಮಾಡಿದೆ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುದ್ರಾಡಿ ಮಂಜುನಾಥ ಪೂಜಾರಿ, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಹಿರಿಯ ನ್ಯಾಯವಾದಿ ಶೇಖರ ಮಡಿವಾಳ, ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ನುಡಿ ನಮನ ಸಲ್ಲಿಸಿ ಮೃತರ ಗುಣಗಾನ ಮಾಡಿದರು.

ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಅಧ್ಯಕ್ಷರಾದ ಶುಭದ ರಾವ್ ಹಾಗೂ ಗೋಪಿನಾಥ್ ಭಟ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಉಪಾಧ್ಯಕ್ಷ ಸುಧಾಕರ್ ಕೋಟ್ಯಾನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗಡೆ, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಬ್ಲಾಕ್ ಸಮಿತಿಯ ಪದಾಧಿಕಾರಿಗಳು ವಿವಿಧ ಘಟಕಗಳ ಅಧ್ಯಕ್ಷರು, ಗ್ರಾಮೀಣ ಸಮಿತಿಯ ಅಧ್ಯಕ್ಷರು, ಚುನಾಯಿತ ಜನಪ್ರತಿನಿಧಿಗಳು ಇದ್ದರು.

Share this article