ಗ್ಯಾರಂಟಿ ಉತ್ಸವ ಬಗ್ಗೆ ಮಾತನಾಡುವ ನೈತಿಕತೆ ದಢೇಸ್ಗೂರಗಿಲ್ಲ

KannadaprabhaNewsNetwork |  
Published : Feb 20, 2026, 02:30 AM IST
19ಕೆಪಿಎಲ್23 ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ  ಶ್ರೀನಿವಾಸ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಕ್ಷೇತ್ರದಲ್ಲಿ ಇವರ ಹಿಂದೆ ನಾಲ್ಕು ಜನರು ಬರುತ್ತಿಲ್ಲ. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾಮಗಾರಿ ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ

ಕೊಪ್ಪಳ: ಗ್ಯಾರಂಟಿ ಉತ್ಸವ ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಿತವಾಗಿ ಫಲಾನುಭವಿಗಳು ನಿರೀಕ್ಷೆ ಮೀರಿ ಆಗಮಿಸಿದ್ದಾರೆ. ಆಸನಗಳು ಸಾಲದ್ದಕ್ಕೆ ಕಲ್ಯಾಣ ಮಂಟಪದ ಹೊರ ಮೈದಾನದಲ್ಲಿ ಖುರ್ಚಿ ಹಾಕಿಸಿದ್ದೇವೆ. ಇಷ್ಟಾದರೂ ಬಿಜೆಪಿ ಜಿಲ್ಲಾಧ್ಯಕ್ಷ ದಢೇಸ್ಗೂರು ಹತಾಶೆ ಭಾವನೆಯಿಂದ ಹುರುಳಿಲ್ಲದ ಆರೋಪ ಮಾಡಿದ್ದಾರೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಬಸವರಾಜ ದಢೇಸ್ಗೂರು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕ್ಷೇತ್ರದಲ್ಲಿ ಇವರ ಹಿಂದೆ ನಾಲ್ಕು ಜನರು ಬರುತ್ತಿಲ್ಲ. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾಮಗಾರಿ ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಚಿವ ಶಿವರಾಜ ತಂಗಡಗಿ ಹಗಲಿರಳು ಶ್ರಮಿಸಿ ಕ್ಷೇತ್ರದ ಅಭಿವೃದ್ಧಿ ಮಾಡುವುದನ್ನು ನೋಡಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು.

ಗ್ಯಾರಂಟಿ ಉತ್ಸವ ಯಶಸ್ವಿಯಾಗಿ ನಡೆದಿದೆ. ಸರ್ಕಾರಿ ಕಾರ್ಯಕ್ರಮ ಆಗಿದ್ದರಿಂದ ಪಕ್ಷದ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಹಾಗೂ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ ಪ್ರವಾಸಿ ಮಂದಿರದಲ್ಲಿಯೇ ಗ್ಯಾರಂಟಿ ಸಮಿತಿಯ ಅಧ್ಯಕ್ಷರನ್ನು ಸ್ವಾಗತಿಸಿದರು. ಹೀಗಾಗಿ, ಅವರು ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಬೇರೆ ಕೆಲಸದಿಂದ ಆಗಮಿಸಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ, ಆದರೆ, ನಿಮ್ಮ ಪರಿಸ್ಥಿತಿ ಏನಾಗಿದೆ ಹೇಳಿ ಎಂದು ಪ್ರಶ್ನಿಸಿದರು.

ಅಟ್ರಾಸಿಟಿ ಕೇಸ್ ಕುರಿತು ಆರೋಪ ಮಾಡಿದ್ದರಲ್ಲ, ಇದೆಲ್ಲವೂ ಸುಳ್ಳು, ನೀವು ಶಾಸಕರಾಗಿದ್ದಾಗಿನ ಕತೆ ತೆಗೆದರೇ ದೊಡ್ಡದಿದೆ. ಸಚಿವ ಶಿವರಾಜ ತಂಗಡಗಿ ಎಂದೂ ಹಸ್ತಕ್ಷೇಪ ಮಾಡುವುದಿಲ್ಲ. ಎಲ್ಲರೂ ಸಹಬಾಳ್ವೆಯಿಂದ ಇರಲಿ ಎನ್ನುವ ದೊಡ್ಡ ಗುಣ ಹೊಂದಿದ್ದಾರೆ ಎಂದರು.

ವೀಡಿಯೋ ಬಿಡುಗಡೆ ಮಾಡಿದ್ದರಲ್ಲ, ಅದರಲ್ಲಿ ಏನೂ ಹುರುಳಿಲ್ಲ. ಸಚಿವರ ಬಳಿ ಯಾವುದೋ ಕಾರ್ಯಕ್ಕೆ ಬಂದಿದ್ದ ವ್ಯಕ್ತಿಯೋರ್ವ ಉದ್ಧಟತನದಿಂದ ವರ್ತಿಸಿದ್ದರಿಂದ ಸಚಿವರು ಉತ್ತರಿಸಿದ್ದಾರೆ ಅಷ್ಟೇ ಎಂದರು.

ನೀವು ಶಾಸಕರಾಗಿದ್ದಾಗ ಮಾತನಾಡಿದ್ದ ವೀಡಿಯೋ, ಪಿಎಸ್ ಐ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಾಗ ನೀವು ಆಡಿದ ಮಾತು, ಅಷ್ಟೇ ಯಾಕೆ ನಿಮ್ಮ ಅದೆಷ್ಟೋ ಆಡಿಯೋ, ವೀಡಿಯೋ ಇವೆ ಎನ್ನುವುದನ್ನು ಒಮ್ಮೆ ನೋಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನಕಗಿರಿ ಕ್ಷೇತ್ರದ ಮತದಾರರಿಗೆ ಅವರ ಬಗ್ಗೆ ಗೊತ್ತಿದೆ, ಆ ಕಾರಣಕ್ಕಾಗಿಯೇ 48 ಸಾವಿರ ಮತಗಳ ಅಂತರದಿಂದ ನಿಮ್ಮನ್ನು ಸೋಲಿಸಿದ್ದಾರೆ. ಈ ಬಾರಿ ಚುನಾವಣೆ ಬಂದಾಗ ನಿಮ್ಮ ಠೇವಣಿಯೂ ಉಳಿಯುವುದಿಲ್ಲ, ಬೇಕಾದರೇ ನಾವೆಲ್ಲ ರಕ್ತದಲ್ಲಿ ಬರೆದು ಕೊಡುತ್ತೇವೆ ಎಂದು ಸವಾಲು ಹಾಕಿದರು.

50 ಎಕರೆ ಜೂಜು ಕಟ್ಟುವ ಮಾತನಾಡುತ್ತಿರಲ್ಲ, ಇದು ಕಾನೂನು ಬಾಹೀರ ಅಲ್ಲವೇ. ಜೂಜಾಡುವುದು ತಪ್ಪು ಎಂದು ಗೊತ್ತಿದ್ದರೂ ಸವಾಲು ಹಾಕುವ ನಿಮ್ಮ ಮೇಲೆ ಯಾಕೆ ಕೇಸ್ ಹಾಕಬಾರದು ಎಂದು ಪ್ರಶ್ನೆ ಮಾಡಿದರು. ಗ್ಯಾರಂಟಿ ಉತ್ಸವದಲ್ಲಿ ಸಚಿವರು ಯಾವುದೇ ಸುಳ್ಳು ಹೇಳಿಲ್ಲ, ಫಲಾನುಭವಿಗಳ ಲೆಕ್ಕ ನೀಡಿದ್ದಾರೆ. ಬೇಕಾದರೆ ನಿಮಗೂ ಒಂದು ಕಾಪಿ ಕಳುಹಿಸಿ ಕೊಡುವುದಾಗಿ ಹೇಳಿದರು.

ಅಟ್ರಾಸಿಟಿ ಕೇಸ್ ಯಾರು ಇದ್ದಾಗ ಎಷ್ಟಾಗಿವೆ ಎಂದು ಲೆಕ್ಕ ತೆಗೆದು ನೋಡಿ, ನಿಮಗೆ ಗೊತ್ತಾಗುತ್ತದೆ ಸತ್ಯ. ನಿಮ್ಮ ಮೇಲೆ ಕೇಸ್ ಆಗಿದೆ ಎಂದರೆ ನೀವೇನಾದರೂ ತಪ್ಪು ಮಾಡಿರಬೇಕು. ಪೊಲೀಸರು ಕ್ರಮಕೈಗೊಳ್ಳುವುದು, ಸಚಿವರಲ್ಲ ಎಂದರು.

ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಗೊಂಡಬಾಳ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಬಾಲಚಂದ್ರ, ಸದಸ್ಯರಾದ ಮಂಜುನಾಥ ಗೊಂಡಬಾಳ ಹಾಗೂ ಅನ್ನದಾನ್ಯಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟಿ ಕೋಟಿ ಆದಾಯವಿದ್ದರೂ ಬಯಲಲ್ಲೇ ಸ್ನಾನ, ಬಹಿರ್ದೆಸೆ!
ಬ್ಯಾಡಗಿ ಮೆಣಸಿನಕಾಯಿ ದರ ಎಂದಿನಂತೆ ಸ್ಥಿರ