ರಟ್ಟೀಹಳ್ಳಿ: ಪಟ್ಟಣದ ಸರಕಾರಿ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ್ದ 108 ಆಂಬ್ಯುಲೆನ್ಸ್ ವಾಹನದಲ್ಲಿನ ವೈದ್ಯಕೀಯ ಉಪಕರಣಗಳು ಸೇರಿ ಎರಡ್ಮೂರು ಕಡೆ ಸುಮಾರು ₹ 5 ಲಕ್ಷ ಮೌಲ್ಯದ ಬೆಲೆಬಾಳುವ ವೈದ್ಯಕೀಯ ಉಪಕರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಗುರುವಾರ ಬೆಳಗಿನ ಜಾವ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆದಿದ್ದಾರೆ.
ಈತನು ಜ. 21ರಂದು ಮಧ್ಯರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಪಟ್ಟಣದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ 108 ವಾಹನದಲ್ಲಿನ ಮಾನಿಟರ್, ವೆಂಟಿಲೇಟರ್, ಇನ್ಫೂಜನ್ ಸಿರೇಂಜ್ ಪಂಪ್ ಸೇರಿದಂತೆ ಸುಮಾರು ₹2.58 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿ, ಆ ವಸ್ತುಗಳನ್ನು ₹2 ಲಕ್ಷಕ್ಕೆ ಬೇರೆಯವರಿಗೆ ಮಾರಾಟ ಮಾಡಿದ್ದಾನೆ.
ಇದೇ ರೀತಿ ಹಾವೇರಿ ನಗರದಲ್ಲೂ ಜ. 28ರಂದು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ರಾಣಿಬೆನ್ನೂರ ತಾಲೂಕಿನ ಕುಪ್ಪೇಲೂರ ಗ್ರಾಮದ ಆಸ್ಪತ್ರೆಯ ಆಂಬ್ಯುಲೆನ್ಸನಲ್ಲಿನ ಬೆಲೆ ಬಾಳುವ ವೈದ್ಯಕೀಯ ವಸ್ತುಗಳು ಕಳ್ಳತನವಾಗಿದ್ದು, ಈತನೇ ಕೃತ್ಯ ಮಾಡಿರುವ ಶಂಕೆ ಇದ್ದು, ತನಿಖೆ ನಡೆಸಲಾಗುತ್ತಿದೆ.ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಮತ್ತೋರ್ವ ಆರೋಪಿ ಸದ್ಯ ತಲೆ ಮರೆಸಿಕೊಂಡಿದ್ದು, ಆತನನ್ನು ಆದಷ್ಟು ಬೇಗ ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುವುದು ಎಂದು ತನಿಖಾಧಿಕಾರಿ ತಿಳಿಸಿದರು. ಆರೋಪಿತನು ಹಾವೇರಿ ಪಟ್ಟಣದಲ್ಲಿ ಖಾಸಗಿ ಆಂಬ್ಯುಲೆನ್ಸಗಳನ್ನು ನಡೆಸುತ್ತಿದ್ದು, ಸಾಲ ಹೆಚ್ಚಾದ್ದರಿಂದ ಆಂಬ್ಯು ಲೆನ್ಸಗಳನ್ನು ಮಾರಾಟ ಮಾಡಿ ಕಳ್ಳತನಕ್ಕೆ ಕೈ ಹಾಕಿ ಪೊಲೀಸರ ಅತಿಥಿಯಾಗಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ಒಂಟಗೋಡಿ, ಉಪ ವರಿಷ್ಠಾಧಿಕಾರಿ ಶಿರಕೋಳ, ರಾಣಿಬೆನ್ನೂರ ಡಿ.ವೈ.ಎಸ್ಪಿ ಲೋಕೇಶ ಜಿ., ಹಿರೇಕೆರೂರ ಪ್ರಭಾರ ಸಿಪಿಐ ಸಿದೇಶ ಎಂ.ಡಿ. ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪಿ.ಎಸ್.ಐ. ರಮೇಶ ಪಿ.ಎಸ್. ಹಾಗೂ ಪಿಎಸ್ಐ ಚಂದ್ರಶೇಖರ ವಿಭೂತಿ ನೇತೃತ್ವದ ಎಎಸ್ಐ ಡಿ.ಬಿ. ಗುತ್ಯಾಳರ, ಡಿ.ಎಸ್. ದೊಡ್ಡಮನಿ, ಹರೀಶ ಹಲಗೇರಿ, ಕುಮಾರ ಕೋಣ್ತಿ, ಮಂಜುನಾಥ ಗೋಣೆಪ್ಪನವರ, ಶಫಿವುಲ್ಲಾ ದೊಡ್ಡಮನಿ, ರಿಯಾಜ್ ದೊಡ್ಡಮನಿ, ಮಾಲತೇಶ ನ್ಯಾಮತಿ, ರವಿ ಅಲಳಗೇರಿ, ಎಂ.ಎಸ್. ಲಿಂಗದಹಳ್ಳಿ, ಬಸವರಾಜ ಬಾಗೋಡಿ ಹಾಗೂ ಜಿಲ್ಲಾ ಡಿ.ಆರ್. ವಿಭಾಗದ ಸತೀಶ ಮಾರಕಟ್ಟಿ, ಮಾರುತಿ ಹಾಲವಾಣಿ ತಂಡಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.