ಪ್ರತಿನಿತ್ಯ ಯೋಗಾಸನ ಮುಖ್ಯ: ಡಾ.ರಾಘವೇಂದ್ರ ದುರ್ಗೋಜಿ

KannadaprabhaNewsNetwork | Published : Jun 23, 2024 2:11 AM

ಸಾರಾಂಶ

ದೈನಂದಿನ ಬದುಕಿನಲ್ಲಿ ನಿತ್ಯವೂ ಒತ್ತಡದ ವಾತಾವರಣವಿದ್ದು, ಸದೃಢ ಆರೋಗ್ಯ ಹೊಂದುವುದು ಮರೆತು ಬಿಟ್ಟಿದ್ದೇವೆ. ಈ ಒತ್ತಡದ ಜೀವನ ಶೈಲಿಯಿಂದ ಹೊರಬರಲು ದಿನನಿತ್ಯ ಯೋಗಾಭ್ಯಾಸ ಮಾಡುವುದು ಮುಖ್ಯವಾಗಿದೆ. ಅನಾರೋಗ್ಯ ಸಮಸ್ಯೆಗಳಿಗೆ ಯೋಗ, ಧ್ಯಾನ, ಪ್ರಾಣಾಯಾಮ ಸರಿಯಾದ ಮಾರ್ಗ ಎಂದು ಹರಿಹರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ತುರ್ತು ಅಪಘಾತ ಚಿಕಿತ್ಸಾ ವಿಭಾಗದ ಪ್ರಸಿದ್ಧ ವೈದ್ಯಾಧಿಕಾರಿ ಡಾ.ರಾಘವೇಂದ್ರ ದುರ್ಗೋಜಿ ಅಭಿಪ್ರಾಯಪಟ್ಟಿದ್ದಾರೆ.

- ಆದರ್ಶ ಯೋಗ ಪ್ರತಿಷ್ಠಾನದಿಂದ ಅಂತಾರಾಷ್ಟ್ರೀಯ ವಿಶ್ವಯೋಗ ದಿನಾಚರಣೆ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ ದೈನಂದಿನ ಬದುಕಿನಲ್ಲಿ ನಿತ್ಯವೂ ಒತ್ತಡದ ವಾತಾವರಣವಿದ್ದು, ಸದೃಢ ಆರೋಗ್ಯ ಹೊಂದುವುದು ಮರೆತು ಬಿಟ್ಟಿದ್ದೇವೆ. ಈ ಒತ್ತಡದ ಜೀವನ ಶೈಲಿಯಿಂದ ಹೊರಬರಲು ದಿನನಿತ್ಯ ಯೋಗಾಭ್ಯಾಸ ಮಾಡುವುದು ಮುಖ್ಯವಾಗಿದೆ. ಅನಾರೋಗ್ಯ ಸಮಸ್ಯೆಗಳಿಗೆ ಯೋಗ, ಧ್ಯಾನ, ಪ್ರಾಣಾಯಾಮ ಸರಿಯಾದ ಮಾರ್ಗ ಎಂದು ಹರಿಹರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ತುರ್ತು ಅಪಘಾತ ಚಿಕಿತ್ಸಾ ವಿಭಾಗದ ಪ್ರಸಿದ್ಧ ವೈದ್ಯಾಧಿಕಾರಿ ಡಾ.ರಾಘವೇಂದ್ರ ದುರ್ಗೋಜಿ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ದೇವರಾಜ ಅರಸು ಬಡಾವಣೆ ಸಿ ಬ್ಲಾಕ್‌ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನದ ಶ್ರೀ ಮಹಾಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರ ಇಲ್ಲಿ ಆಯೋಜಿಸಲಾಗಿದ್ದ 10ನೇ ವರ್ಷದ ಅಂತಾರಾಷ್ಟ್ರೀಯ ವಿಶ್ವಯೋಗ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಜೀವನ ಸಾರ್ಥಕಪಡಿಸಿಕೊಳ್ಳಬೇಕಾದರೆ ನಿತ್ಯವೂ ಯೋಗ ಸಾಧನೆ ಮಾಡಬೇಕು. ಇಂದಿನ ಜೀವನಶೈಲಿಗೆ ಯೋಗವು ಅತ್ಯಂತ ಅವಶ್ಯಕವಾದ ಸಾಧನವಾಗಿದೆ ಎಂದರು.

ಅಧ್ಯಾತ್ಮ ಚಿಂತಕ, ಹರಿಹರದ ಕೆ.ರವೀಂದ್ರ ಮಾತನಾಡಿ, ಮನಸ್ಸು, ಶರೀರ ಮತ್ತು ಆತ್ಮ ಈ ಮೂರರ ಸಮ್ಮಿಲನ ಆಗಬೇಕು. ಇವುಗಳನ್ನು ಸರಿದಾರಿಗೆ ಕೊಂಡೊಯ್ಯುವ ಸಾಧನವೇ ಯೋಗ. ನಮ್ಮೊಳಗಿರುವ ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಯೋಗದ ಮಾರ್ಗ, ನಮ್ಮ ಆತ್ಮವು ನಮ್ಮ ಹಿಡಿತಕ್ಕೆ ಸಿಕ್ಕರೆ ಇಡೀ ಜಗತ್ತನ್ನೇ ಆಳಬಹುದು. ಅಂತಹ ಅದ್ಭುತಶಕ್ತಿ ಆತ್ಮಕ್ಕೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯೋಗಗುರು ಡಾ.ರಾಘವೇಂದ್ರ ಗುರೂಜಿ, ಯೋಗ ಶಿಕ್ಷಕ ಲಲಿತ್‌ಕುಮಾರ್ ವಿ. ಜೈನ್, ಎಚ್.ಮಂಜುನಾಥ, ಮಂಗಳಗೌರಿ, ಸಂದೀಪ್ ಒಡೋನಿ, ಭರತ್ ಒಡೋನಿ, ಎಚ್.ಸಂತೋಷ್, ಸಿ.ಚೇತನ್, ಶ್ವೇತಾ ಒಡೆಯರ್, ವೇದಾವತಿ ಡಿ.ಎಂ.ಎಸ್., ಮಹಾಂತೇಶ್, ಚಂದ್ರು, ಜ್ಯೋತಿಲಕ್ಷ್ಮೀ ರಾಜೇಶ್ವರಿ ಇನ್ನಿತರರು ಭಾಗವಹಿಸಿದ್ದರು.

- - - -21ಕೆಡಿವಿಜಿ42ಃ:

ದಾವಣಗೆರೆಯಲ್ಲಿ ಆದರ್ಶ ಯೋಗ ಪ್ರತಿಷ್ಠಾನದಿಂದ ನಡೆದ ಯೋಗ ದಿನ ಕಾರ್ಯಕ್ರಮವನ್ನು ಡಾ.ರಾಘವೇಂದ್ರ ದುರ್ಗೋಜಿ ಉದ್ಘಾಟಿಸಿದರು.

Share this article