ರಾಮನಗರ: ರಾಜ್ಯದ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೆ ನಾಡಿನಾದ್ಯಂತ ಭಾರಿ ಸಿದ್ಧತೆಗಳು ನಡೆಯುತ್ತಿದ್ದು, ಹಾಲು ಉತ್ಪಾದಕ ರೈತರು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಕೆಎಂಎಫ್ ಮಾಜಿ ಅಧ್ಯಕ್ಷ ಹಾಗೂ ಬಮೂಲ್ ನಿರ್ದೇಶಕ ಪಿ.ನಾಗರಾಜು ಮನವಿ ಮಾಡಿದರು.
ಮೊದಲಿನಿಂದಲೂ ಡಿ.ಕೆ.ಶಿವಕುಮಾರ್ ಅವರು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ಹೈನುಗಾರಿಕೆಗೆ ಸದಾ ಬೆಂಬಲ ನೀಡುತ್ತಾ ಬಂದಿದ್ದಾರೆ. ತಮ್ಮ ನೆಚ್ಚಿನ ನಾಯಕ ಅಧಿಕಾರ ವಹಿಸಿಕೊಳ್ಳುತ್ತಿರುವ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ರೈತರು ಹಾಗೂ ಹಾಲು ಉತ್ಪಾದಕರು ರಾಜಧಾನಿಗೆ ಸ್ವಯಂ ಪ್ರೇರಿತರಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಹಾಲಿನ ದರ ಹೆಚ್ಚಳ, ಸರ್ಕಾರದ ಕಡೆಯಿಂದ ಸಿಗುವ ಪ್ರೋತ್ಸಾಹ ಧನ (ಸಬ್ಸಿಡಿ) ಬಿಡುಗಡೆ ಮತ್ತು ಹೈನುಗಾರಿಕೆಗೆ ಅಗತ್ಯವಿರುವ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮಹತ್ವದ ನಿರ್ಧಾರಗಳು ಹೊರಬೀಳಲಿವೆ ಎಂಬ ಆಶಾಭಾವನೆಯೊಂದಿಗೆ ಹಾಲು ಉತ್ಪಾದಕರು ಇದ್ದಾರೆ ಎಂದು ತಿಳಿಸಿದರು.ಈ ಪದಗ್ರಹಣ ಸಮಾರಂಭ ಕೇವಲ ಒಂದು ರಾಜಕೀಯ ಕಾರ್ಯಕ್ರಮವಾಗಿರದೆ, ರೈತರು ಮತ್ತು ಹಾಲು ಉತ್ಪಾದಕರ ಪಾಲಿಗೆ ಹೊಸ ಭರವಸೆಯ ಸಂಕೇತ ವಾಗಿರಲಿದೆ.ಇಡೀ ನಾಡಿನಲ್ಲಿ ರೈತಾಪಿ ವಲಯ ಹಾಗೂ ಬೆಂಬಲಿಗರ ವಲಯದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ ಎಂದು ಪಿ.ನಾಗರಾಜು ಹೇಳಿದರು.
30ಕೆಆರ್ ಎಂಎನ್ 5.ಜೆಪಿಜಿ