ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಆರೋಪ ಮಾಡಿರುವ ದೂರುದಾರ ಹೆಣದ ಮೇಲಿನ ಚಿನ್ನ ಕದಿಯುತ್ತಿದ್ದ. ಅಲ್ಲದೇ ಇಲ್ಲಿ ಸಾವಿರಾರು ಶವಗಳನ್ನು ಹೂಳಲು ಈ ನೆಲದಲ್ಲಿ ಮಹಾಭಾರತ ಅಥವಾ 2ನೇ ಮಹಾಯುದ್ಧ ನಡೆದಿಲ್ಲ ಎಂದು ಧರ್ಮಸ್ಥಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವ ಗೌಡ ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೂರು ನೀಡಿದ ಅನಾಮಿಕ ಯಾರು ಅನ್ನುವುದು ಧರ್ಮಸ್ಥಳದ ಜನರಿಗೆ ಗೊತ್ತಿದೆ. ಈ ವ್ಯಕ್ತಿ ನಟೋರಿಯಸ್ ಆಗಿದ್ದು, ಹೆಣಗಳ ಮೇಲಿದ್ದ ಚಿನ್ನ, ಹಣ ಕದಿಯುತ್ತಿದ್ದ. ಹೊಳೆಯಲ್ಲಿ ಅನಾಥ ಶವಗಳು ಸಿಕ್ಕರೆ ನುಗ್ಗಿ ಹೊಳೆಯಿಂದ ಚಿನ್ನ ತೆಗೆಯುತ್ತಿದ್ದ. ಆತ ಧರ್ಮಸ್ಥಳದಿಂದ ಓಡಿ ಹೋಗಿಲ್ಲ. ಆತ ಮಾಡಿದ ದುಷ್ಕೃತ್ಯಗಳಿಗೆ ಆತನನ್ನು ಕ್ಷೇತ್ರದಿಂದ ಹೊರ ಹಾಕಲಾಗಿತ್ತು. ಈ ಹಿಂದೆ ಇಲ್ಲಿ ಹೆಣಗಳನ್ನು ಕಾನೂನು ಪ್ರಕಾರವೇ ಹೂಳಲಾಗಿದ್ದು, ಪೋಸ್ಟ್ ಮಾರ್ಟಮ್, ಶವ ಹೂಳುವ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆದಿವೆ. ಶವ ಹೂಳದ ಪ್ರಕರಣಗಳಲ್ಲಿ ಮೃತರ ವಿಳಾಸ ದೊರಕಿದಾಗ ಅಲ್ಲಿಗೆ ಹೆಣವನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಪರಿಚಿತರು ಮೃತಪಟ್ಟಾಗ ಇಲ್ಲಿಯೇ ಯುಡಿಆರ್ ಕೇಸ್ (ಅಸಹಜ ಸಾವು ಪ್ರಕರಣ) ದಾಖಲಿಸಿ ಹೂಳುವ ವ್ಯವಸ್ಥೆ ಇದ್ದು, ಇದು ಕಾನೂನು ಪ್ರಕಾರವೇ ಆಗುತ್ತದೆ. ಯಾರೋ ಅನಾಮಿಕ ಬಂದು ಇಲ್ಲಿ ಸಾವಿರಾರು ಜನರು ಸತ್ತಿದ್ದು, ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎನ್ನುವುದಕ್ಕೆ ಇಲ್ಲಿ ಮಹಾಯುದ್ಧ ಆಗಿರಲಿಲ್ಲ. ದೂರು ನೀಡಿರುವ ಈ ಅನಾಮಿಕ ವ್ಯಕ್ತಿ ತಾನು ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದಾಗಿ ಹೇಳಿದ್ದು, ಈತ ಯಾರು ಅನ್ನುವುದು ನಮಗೆ ಗೊತ್ತಿದೆ. ಆದರೆ, ನಾವು ಆತನ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದಾರೆ.
ಆತ ಪೊಲೀಸರಿಗೆ ಬರೆದ ಪತ್ರವಿದೆ:
ಸುಮಾರು ವರ್ಷಗಳ ಹಿಂದೆ ‘ಒಂದು ಅನಾಮಿಕ ಹೆಣ ಇದೆ. ಅದನ್ನು ಹೂಳಬೇಕು’ ಎಂದು ಆತನೇ ಪೊಲೀಸರಿಗೆ ಬರೆದ ಪತ್ರ ನನ್ನಲ್ಲಿದೆ. ಮಾಧ್ಯಮಗಳು ಬಯಸಿದರೆ ಈ ಪತ್ರವನ್ನು ಕೊಡುತ್ತೇನೆ. ಆ ಅನಾಮಿಕ ವ್ಯಕ್ತಿ ಇಲ್ಲಿಯವರೆಗೂ ಸುಳ್ಳನ್ನೇ ಹೇಳಿದ್ದಾನೆ. ಮೊದಲಿಗೆ ಪೊಲೀಸರು ಪರಿಚಯ ಇದ್ದಿರಲಿಲ್ಲ ಅಂದ. ನಂತರ ತನ್ನಿಂದ ಒತ್ತಾಯಪೂರ್ಕವಾಗಿ ಈ ಕೆಲಸ ಮಾಡಿಸಿದ್ದಾರೆ ಅಂದ. ಬಳಿಕ ಧರ್ಮಸ್ಥಳದಿಂದ ನಾನು ಪ್ರಾಣಭಯದಿಂದ ಓಡಿ ಹೋದೆ ಎಂದಿದ್ದಾನೆ. ಈಗಲೇ ಧರ್ಮಸ್ಥಳಕ್ಕೆ ಹೋಗಿ ರೆಕಾರ್ಡ್ ತೆಗೆದರೆ 2014ರಲ್ಲೇ ಆತನ ಎಲ್ಲಾ ಸಂಬಳ ಚುಕ್ತಾ ಮಾಡಿ, ಅವನಿಗೆ ಕೊಡಬೇಕಿದ್ದ ಎಲ್ಲವನ್ನೂ ಕೊಟ್ಟು ಕಳುಹಿಸಿರುವುದು ತಿಳಿಯುತ್ತದೆ ಎಂದು ಕೇಶವ ಗೌಡ ಹೇಳಿದ್ದಾರೆ.