ಕನ್ನಡಪ್ರಭ ವಾರ್ತೆ ಭದ್ರಾವತಿ
ಅಂಬೇಡ್ಕರ್ ವೈಚಾರಿಕಾ ವೇದಿಕೆ ಕರ್ನಾಟಕ (ಎವೈವಿಕೆ) ತಾಲೂಕು ಶಾಖೆ ವತಿಯಿಂದ ಗುರುವಾರ ನಗರದ ಡಾ. ರಾಜಕುಮಾರ್ ರಸ್ತೆ(ಬಿ.ಎಚ್ ರಸ್ತೆ) ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾರಾಷ್ಟ್ರದ ಭೀಮ ನದಿ ತೀರದಲ್ಲಿ ಸುಮಾರು ೨೦೮ ವರ್ಷಗಳ ಹಿಂದೆ ಅಮಾನವೀಯ ಅಸ್ಪೃಶ್ಯತೆ, ಶೋಷಣೆ ವಿರುದ್ಧ ಮೆಹರ್ ವೀರರು ಭೀಮಾ ಕೋರೆಗಾಂವ್ ಯದ್ದ ನಡೆಸಿ ಜಯಶಾಲಿಗಳಾದರು. ಆ ಯುದ್ದದಲ್ಲಿ ೨೨ ಮಂದಿ ಮೆಹರ್ ವೀರರು ಮಡಿದರು. ಅವರ ತ್ಯಾಗ, ಬಲಿದಾನವನ್ನು ಸ್ಮರಿಸಿ, ಅದರಿಂದ ಸ್ಪೂರ್ತಿ ಪಡೆಯಬೇಕೆಂಬ ಉದ್ದೇಶದಿಂದ ವಿಜಯೋತ್ಸವ ದೇಶಾದಾದ್ಯಂತ ಆಚರಿಸಲಾಗುತ್ತಿದೆ. ಇದನ್ನು ಇಂದಿನವರು ಅರಿತುಕೊಳ್ಳಬೇಕಾಗಿದೆ ಎಂದರು.ಶಿಕ್ಷಕ ಲಕ್ಷ್ಮಣ್ ಮಾತನಾಡಿ, ಜಾತಿಯನ್ನೇ ಬಂಡವಾಳ ಮಾಡಿಕೊಂಡಿರುವ ರಾಜಕಾರಣಿಗಳು, ಅಧಿಕಾರಿಗಳು ಜಾತಿ ಇಲ್ಲ, ಬ್ರಾಹ್ಮಣ್ಯ ಇಲ್ಲವೆಂದು ಹೇಳುತ್ತಿರುವಾಗಲೇ, ಮರ್ಯಾದಾ ಹತ್ಯೆಗಳು, ದಲಿತರಿಗೆ ಗ್ರಾಮಗಳಲ್ಲಿ ಬಹಿಷ್ಕಾರ ಹಾಕುವ, ಸ್ಮಶಾನದಲ್ಲಿ ಶವ ಹೂಳಲು ಬಿಡದಿರುವ ಘಟನೆಗಳನ್ನು ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ದೇಶದಲ್ಲಿ ಜಾತಿ ಹೋಗಿದೆಯೇ ಎಂದು ಅವರು ಪ್ರಶ್ನಿಸಿದರು.
ಶಂಕರಘಟ್ಟ ಮಹೇಶ್ ಮಾತನಾಡಿ, ದಲಿತ ಸಂಘಟನೆಗಳು ಛಿದ್ರವಾಗಿರುವುದು ಕೂಡ ದಲಿತರ ಮೇಲೆ ಶೋಷಣೆ ಮುಂದುವರೆಯಲು ಕಾರಣವಾಗಿದೆ. ನಾವು ಬೇರೆಯವರನ್ನು ದೂಷಿಸಿಕೊಂಡು ಕೂರುವುದಲ್ಲ. ದಲಿತ ಸಂಘಟನೆಗಳು ಈ ಸತ್ಯವನ್ನು ಅರಿತು ಎಲ್ಲರೂ ಒಂದಾಗಿ ಒಂದೇ ವೇದಿಕೆಯಡಿ ನಾವು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಅಂಬೇಡ್ಕರ್ ವಿಚಾರಧಾರೆಯಡಿ ಹೋರಾಟ ನಡೆಸಬೇಕಿದೆ ಎಂದರು. ಉಜ್ಜನಿಪುರ ಜಯರಾಂ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.