ಮಿರ್ಜಾನದಲ್ಲಿ ಕಾಂಕ್ರೀಟ್ ರಸ್ತೆಗೆ ಹಾನಿ ಮಾಡಿ ಪಿಡಿಒಗೆ ಜೀವಬೆದರಿಕೆ

KannadaprabhaNewsNetwork |  
Published : Aug 29, 2024, 12:49 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಮಿರ್ಜಾನದ ಬಿಜಿಎಸ್ ಶಾಲೆಯ ಹಿಂದುಗಡೆಯ ಕಾಂಕ್ರೀಟ್ ರಸ್ತೆಯನ್ನು ಸ್ಥಳೀಯ ನಿವಾಸಿಗಳಾದ ಅಯ್ಯಪ್ಪ ನಾರಾಯಣ ಮುಕ್ರಿ ಹಾಗೂ ಹೆಗಡೆಯ ಮಂಜು ಬೆಳ್ಳಿ ಮುಕ್ರಿ ಅವರು ಒಡೆದು ಹಾಕಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವಂತೆ ಮಾಡಿದ್ದರು.

ಕುಮಟಾ: ತಾಲೂಕಿನ ಮಿರ್ಜಾನದಲ್ಲಿ ಸರ್ಕಾರದಿಂದ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆಯನ್ನು ಅಡ್ಡಡ್ಡ ಕಡಿದು ಗಟಾರ ನಿರ್ಮಿಸಿಕೊಂಡಿದ್ದಲ್ಲದೇ ಇದನ್ನು ಪ್ರಶ್ನಿಸಿದ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ ಬಗ್ಗೆ ಕುಮಟಾ ಠಾಣೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಪ್ರಭಾರ ಪಿಡಿಒ ವಿಠಲ ಮಾರುತಿ ತಿಗಡಿ ದೂರು ದಾಖಲಿಸಿದ್ದಾರೆ. ಮಿರ್ಜಾನದ ಬಿಜಿಎಸ್ ಶಾಲೆಯ ಹಿಂದುಗಡೆಯ ಕಾಂಕ್ರೀಟ್ ರಸ್ತೆಯನ್ನು ಸ್ಥಳೀಯ ನಿವಾಸಿಗಳಾದ ಅಯ್ಯಪ್ಪ ನಾರಾಯಣ ಮುಕ್ರಿ ಹಾಗೂ ಹೆಗಡೆಯ ಮಂಜು ಬೆಳ್ಳಿ ಮುಕ್ರಿ ಅವರು ಒಡೆದು ಹಾಕಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವಂತೆ ಮಾಡಿದ್ದರು.

ಈ ಬಗ್ಗೆ ಸಾರ್ವಜನಿಕರ ಬೇಡಿಕೆಯಂತೆ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಸಭೆ ಕರೆದು ಚರ್ಚಿಸಲಾಗಿತ್ತು. ಅಧ್ಯಕ್ಷೆ ಜೊಸ್ಟಿನ್ ಡಿಸೋಜಾ, ಉಪಾಧ್ಯಕ್ಷ ಮಂಜುನಾಥ ಹರಿಕಾಂತ, ಸದಸ್ಯರಾದ ಗಣೇಶ ಅಂಬಿಗ, ಫರ್ಸು ಫರ್ನಾಂಡೀಸ್, ನಾಗರಾಜ ನಾಯ್ಕ, ವಿನಾಯಕ ನಾಯ್ಕ, ಪ್ರಭಾರ ಪಿಡಿಒ ವಿಠಲ ಮಾರುತಿ ತಿಗಡಿ ಇತರರು ಸ್ಥಳ ಪರಿಶೀಲನೆಗೆ ತೆರಳಿದ್ದರು. ಆಗ ಅಯ್ಯಪ್ಪ ಮುಕ್ರಿ, ಪೈಪ್ ಹಾಕಿ ರಸ್ತೆ ಮುಚ್ಚಲು ಅಡ್ಡಿಪಡಿಸಿದ್ದಲ್ಲದೇ ಇಲ್ಲಿ ಯಾರೂ ತಿರುಗಾಡುವುದೂ ಬೇಡ. ರಸ್ತೆ ಕಡಿದಿದ್ದನ್ನು ಮುಚ್ಚುವುದೂ ಬೇಡ ಎಂದು ಅವಾಚ್ಯವಾಗಿ ಬೈದಿದ್ದಾರೆ.

ಸರ್ಕಾರಿ ಆಸ್ತಿಗೆ ಹಾನಿ ಮಾಡಿದ್ದಲ್ಲದೇ ಸರ್ಕಾರಿ ಕರ್ತವ್ಯಕ್ಕೂ ಅಡ್ಡಿ ಪಡಿಸಿದ್ದಾರೆ. ಇನ್ನೊಮ್ಮೆ ಇಲ್ಲಿಗೆ ಬಂದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಪ್ರಭಾರ ಪಿಡಿಒ ವಿಠಲ ಮಾರುತಿ ತಿಗಡಿ ದೂರಿನಲ್ಲಿ ತಿಳಿಸಿದ್ದಾರೆ.

ಕಾಂಕ್ರೀಟ್ ರಸ್ತೆ ಕಡಿದ ಆರೋಪಿಗಳಾದ ಅಯ್ಯಪ್ಪ ನಾರಾಯಣ ಮುಕ್ರಿ ಹಾಗೂ ಹೆಗಡೆಯ ಮಂಜು ಬೆಳ್ಳಿ ಮುಕ್ರಿ ವಿರುದ್ಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!