ನಾಡಿಗೆ ನುಗ್ಗಿದ ಕಾಡಾನೆಗಳಿಂದ ರೈತರ ಬೆಳೆ ಹಾನಿ

KannadaprabhaNewsNetwork | Updated : Nov 02 2024, 01:16 AM IST

ಸಾರಾಂಶ

ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿ ಇರುವ ಸಿರಿಗೆರೆ ಗ್ರಾಮದಲ್ಲಿ ಗುರುವಾರ ರಾತ್ರಿ ಕಾಡಾನೆಗಳು ಭತ್ತ ಬೆಳೆ ನಾಶ ಮಾಡಿರುವುದು.

ಶಾಶ್ವತ ಪರಿಹಾರ ಕಂಡುಕೊಳ್ಳದೆ ಅರಣ್ಯ ಇಲಾಖೆ ತೇಪೆ ಹಾಕುವ ಕೆಲಸ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಕಾಡಾನೆ ಮತ್ತು ಮನುಷ್ಯರ ನಡುವಿನ ಸಂಘರ್ಷಕ್ಕೆ ಕೊನೆಯೇ ಇಲ್ಲದಂತಾಗಿದ್ದು, ಹಲವು ವರ್ಷಗಳ ಸಮಸ್ಯೆಗೆ ಅರಣ್ಯಇಲಾಖೆಯು ಶಾಶ್ವತ ಪರಿಹಾರ ಕಂಡುಕೊಳ್ಳದೆ ತೇಪೆ ಹಾಕುವ ಕೆಲಸ ಮಾಡಿಕೊಂಡೇ ಬಂದಿದೆ. ಅದರ ಪರಿಣಾಮವಾಗಿ, ಒಂದೆಡೆ ಕಾಡಾನೆಗಳ ಸಂತತಿ ಹೆಚ್ಚಾಗಿದ್ಡು, ನಾಡಿಗೆ ನುಗ್ಗಿ ಜೀವಹಾನಿ ಮತ್ತು ಬೆಳೆ ಹಾನಿ ಮಾಡುವುದು ಸಾಮಾನ್ಯವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಕಾಡಾನೆಗಳ ದಾಳಿಯು ಇಲ್ಲಿನ ರೈತರನ್ನು ನಿದ್ದೆಗೆಡಿಸಿದೆ. ತುಂಬಿದ ಕೆರೆ–ಕಟ್ಟೆಗಳು ಹಾಗೂ ನೀರಾವರಿ ಜಮೀನು ಕಾಡಾನೆಗಳಿಗೆ ಒಂದು ರೀತಿಯಲ್ಲಿ ಸ್ವರ್ಗವಾಗಿದೆ.

ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಿಂದ ಬಂದಿರುವ ಆನೆಗಳ ಸಂತತಿ ಹೆಚ್ಚುತ್ತಲೇ ಇದೆ. ಇವುಗಳು ಶಿವಮೊಗ್ಗ ತಾಲೂಕು ಭಾಗದ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು ಈ ಭಾಗದ ರೈತರ ಬೆಳೆಗಳ ಮೇಲೆ ಸತತ ದಾಳಿ ನಡೆಸುತ್ತಿವೆ. ಅದರಲ್ಲೂ ಶಿವಮೊಗ್ಗ ತಾಲೂಕಿನ ಪುರದಾಳು, ಮಲೇಶಂಕರ, ಆಲದೇವರ ಹೊಸೂರು, ಸಿರಿಗೆರೆ, ತಮ್ಮಡಿಹಳ್ಳಿ ಗ್ರಾಮಗಳ ಭಾಗದಲ್ಲಿ ರೈತರ ಬೆಳೆಯನ್ನು ಧ್ವಂಸ ಮಾಡುತ್ತಿರುವ ಆನೆಗಳ ಹಾವಳಿಗೆ ರೈತರು ತತ್ತರಿಸಿದ್ದಾರೆ.

*ಬೆಳೆ ಹಾನಿಗೆ ಬೇಸತ್ತು ವಿಷಕುಡಿಯಲು ಯತ್ನಿಸಿದ ರೈತ:

ಮಲೆನಾಡು ಶಿವಮೊಗ್ಗದಲ್ಲಿ ಕಾಡಾನೆಗಳ ದಾಳಿಯಿಂದ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರುವ ರೈತರು ಪದೇ ಪದೇ ಕಾಡಾನೆಗಳ ದಾಳಿಯಿಂದ ಬೇಸತ್ತು ಬುಧವಾರ ಶಿವಮೊಗ್ಗದ ಡಿಎಫ್ಒ ಕಚೇರಿ ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ರೈತರೊಬ್ಬರು ವಿಷಕುಡಿಯಲು ಮುಂದಾದ ಘಟನೆಯು ನಡೆದಿದೆ.

ಶಿವಮೊಗ್ಗದ ಆಲದೇವರ ಹೊಸರೂ, ಬೇಳೂರು, ಪುರದಾಳು ಹಾಗೂ ಹಾಯ್‌ಹೋಳೆ ಗ್ರಾಮದ ಗ್ರಾಮಸ್ಥರಿಂದ ಪ್ರತಿಭಟನೆ ನಡೆದಿದ್ದು, ಲಕ್ಷಾಂತರ ರುಪಾಯಿ ನಷ್ಟಕ್ಕೆ ಬೇಸತ್ತ ರೈತರು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಡಿಎಫ್ಒ ಪ್ರಸನ್ನ ಪಟಗಾರ್ ಮುಂಭಾಗವೇ ವಿಷದ ಬಾಟಲಿ ಹಿಡಿದು ಕುಡಿಯಲು ರೈತ ಮುಂದಾದಾಗ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ರೈತನನ್ನು ತಡೆದರು.

ಏಕಾಏಕಿ ಕಾಡಾನೆಗಳು ಹೊಲ ಗದ್ದೆಗಳಿಗೆ ನುಗ್ಗಿ ಅಡಕೆ, ಬಾಳೆ, ಕಬ್ಬು ಜೋಳ ಹಾಗೂ ಭತ್ತದ ಬೆಳೆ ನಾಶ ಮಾಡುತ್ತಿವೆ. ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ಕಾಡಾನೆಗಳ ದಾಳಿ ನಡೆಯುತ್ತಲೇ ಇದೆ. ಆನೆಗಳನ್ನು ಕಾಡಿನತ್ತ‌ ಓಡಿಸಿದರೂ ಮತ್ತೆ ಮತ್ತೆ ದಾಳಿ ನಡೆಸುತ್ತಿವೆ. ಕೂಡಲೇ ಕಾಡಾನೆ ಸೆರೆ ಹಿಡಿದು ಬೇರೆಡೆ ಸ್ಥಳಾಂತರ ಮಾಡುವಂತೆ ರೈತರ ಆಗ್ರಹಿಸಿದರು.

ಆಯನೂರು ಹೊಬಳಿ ಗ್ರಾಮಗಳಲ್ಲಿ ಹೆಚ್ಚಿನ ಕಾಡಾನೆ ಹಾವಳಿ

ಕಾಡಾನೆಗಳ ಹಾವಳಿಯಿಂದ ಆಯನೂರು ಹೋಬಳಿ‌ ಸಿರಿಗೆರೆ ರೈತರು ನೊಂದಿದ್ದಾರೆ. ಈಗ ಮೂರ್ನಾಲ್ಕು ದಿನಗಳ ಹಿಂದಷ್ಟೇ ನಾಲ್ಕೈದು ಆನೆಗಳು ಮುಸುಕಿನ ಜೋಳ, ಭತ್ತದ ಗದ್ದೆಗಳಿಗೆ ನುಗ್ಗಿ ಫಸಲು ತುಳಿದು ತಿಂದು ಅಪಾರ ನಷ್ಟ ಉಂಟುಮಾಡಿವೆ. ರೈತರು ಜೀವ ಬಿಗಿಹಿಡಿದು ಕೊಂಡು ನಡುರಾತ್ರಿಯಲ್ಲಿ ತಮ್ಮ ಹೊಲಗಳಲ್ಲಿ ಕಾವಲು‌ ಕಾಯಬೇಕಿದೆ.

Share this article