ಕನ್ನಡಪ್ರಭ ವಾರ್ತೆ ಬೆಳಗಾವಿ
ತಾಯಿ ನನಗೆ ಜನ್ಮ ನೀಡಿದ್ದರೂ, ರಾಜಕೀಯ ಬದುಕಿಗೆ ಜನ್ಮ ನೀಡಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನತೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಮರಿಸಿದರು.ತಮ್ಮ ಜನ್ಮದಿನದ ಅಂಗವಾಗಿ ಬೆನಕನಹಳ್ಳಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರು ತಮಗೆ ಬೆಂಬಲ ನೀಡಿ ಬೆಳೆಸಿದ ಕಾರಣವೇ ರಾಜ್ಯದಲ್ಲಿ ಮಂತ್ರಿಯಾಗುವ ಅವಕಾಶ ದೊರಕಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಜನಸೇವೆಯನ್ನು ಮನೆಯ ಮಗಳಾಗಿ ನಿಷ್ಠೆಯಿಂದ ನಿರ್ವಹಿಸುತ್ತಿರುವೆ. ಹಿರಿಯರು ಮತ್ತು ಗುರುಗಳ ಮಾರ್ಗದರ್ಶನವೇ ತಮ್ಮ ಬದುಕಿನ ಆಧಾರವೆಂದು ತಿಳಿಸಿದ ಸಚಿವೆ, ತಂದೆ-ತಾಯಿಯರ ಗೌರವವೇ ಭಾರತೀಯ ಸಂಸ್ಕೃತಿಯ ಮೂಲ ಮೌಲ್ಯ. ಹಿರಿಯ ನಾಗರಿಕರಿಗೆ ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಪ್ರಯತ್ನ ಮುಂದುವರಿಯುತ್ತದೆ. ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರು ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಶಕ್ತಿಯಾಗಿದ್ದಾರೆ ಎಂದರು.ಹಿರಿಯ ನಾಗರಿಕರು ಎಂದರೆ ಕೇವಲ ವಯಸ್ಸಾದವರಲ್ಲ, ನೀವು ನಮ್ಮ ಸಮಾಜದ ಅನುಭವದ ಪುಸ್ತಕಗಳು. ನೀವು ನಡೆದು ಬಂದ ದಾರಿಯೇ ನಮಗೆ ದಿಕ್ಕು ತೋರಿಸುವ ನಕ್ಷೆ. ನೀವು ಅನುಭವಿಸಿದ ಸಂಕಷ್ಟಗಳೇ ನಮಗೆ ಬಲವಾದ ಪಾಠಗಳು. ನಾವು ಇಂದು ನಿಂತಿರುವ ಈ ನೆಲವನ್ನು ಗಟ್ಟಿ ಮಾಡಿದವರು ನೀವು. ನಾವು ಇಂದು ಮಾತನಾಡುತ್ತಿರುವ ಸ್ವಾತಂತ್ರ್ಯ, ಸೌಕರ್ಯ, ಅವಕಾಶಗಳ ಹಿಂದೆ ನಿಮ್ಮ ತ್ಯಾಗ ಇದೆ. ಅದಕ್ಕಾಗಿ ನನ್ನ ಜನ್ಮದಿನವನ್ನು ವೈಯಕ್ತಿಕ ಸಂಭ್ರಮವಾಗಿ ಅಲ್ಲ, ಹಿರಿಯರ ಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ನಿರ್ಧರಿಸಿದೆ ಎಂದು ಹೇಳಿದರು.ಸಚಿವೆಯೊಬ್ಬರು ತಮ್ಮ ಅಧಿಕಾರ ಅವಧಿಯಲ್ಲಿ ಹಿರಿಯ ನಾಗರಿಕರೊಂದಿಗೆ ಜನ್ಮದಿನ ಆಚರಿಸಿರುವುದು ಅಪರೂಪದ ಘಟನೆ. ಹಿರಿಯರು, ಯುವಕರು ಸೇರಿದಂತೆ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸಾರ್ಥಕತೆಯನ್ನು ಮೆರೆಯುತ್ತಿದ್ದಾರೆ. ಮಂತ್ರಿಯಾಗಿ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಹೇಳಿದರು.ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಗುಣವೇ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಜನಪ್ರಿಯತೆ ತಂದಿದೆ. ಜನ ಸಾಮಾನ್ಯರಿಗೆ ಸ್ಪಂದಿಸುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಇಷ್ಟು ಜನಪ್ರಿಯತೆ ಪಡೆಯುವ ಮಂತ್ರಿಗಳು, ಶಾಸಕರು ಸಿಗುವುದು ಬಹಳ ಕಡಿಮೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಪ್ರಶಂಸಿದರು.ಗುರು ಹಿರಿಯರನ್ನು ಸನ್ಮಾನಿಸುವ ಮೂಲಕ ಸಚಿವೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಯಾರೇ ಒಳ್ಳೆಯ ಕಾರ್ಯ ಮಾಡುವಾಗ ಬೆನ್ನುತಟ್ಟುವುದು ನಮ್ಮ ಕರ್ತವ್ಯ. ಜನರ ಕಣ್ಣೀರು ಒರೆಸುವ ಸಲುವಾಗಿ ಕಿತ್ತೂರು ರಾಣಿ ಚನ್ನಮ್ಮ, ಲಕ್ಷ್ಮೀ ಹೆಬ್ಬಾಳಕರ್ ಮೂಲಕ ಮತ್ತೆ ಹುಟ್ಟಿ ಬಂದಿದ್ದಾರೆ ಎನಿಸುತ್ತದೆ. ಅವರಿಗೆ ಶುಭವಾಗಲಿ ಎಂದು ಆಶೀರ್ವದಿಸಿದರು.
ಶತಾಯುಷಿಗಳ ಗೌರವ ಸನ್ಮಾನ
ಜನ್ಮದಿನದ ಅಂಗವಾಗಿ 8 ಮಂದಿ ಶತಾಯುಷಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಹಿರಿಯ ನಾಗರಿಕರಿಗೆ ಕ್ರೀಡಾ ಸ್ಪರ್ಧೆಗಳು ನಡೆದವು. ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಈ ವೇಳೆ ತಾರಿಹಾಳದ ಅಡವಿಸಿದ್ದೇಶ್ವರ ಸ್ವಾಮೀಜಿ, ಮೈಸೂರಿನ ನಿರಂಜನದೇವರು, ಲಕ್ಷ್ಮೀ ಹೆಬ್ಬಾಳಕರ್ ಅವರ ತಾಯಿ ಗಿರಿಜಾ ಹಟ್ಟಿಹೊಳಿ, ಯುವ ಮುಖಂಡ ಮೃಣಾಲ್ ಹೆಬ್ಬಾಳಕರ್, ಕಾಡಾ ಅಧ್ಯಕ್ಷ ಯುವರಾಜ್ ಕದಂ, ಮುಖಂಡರಾದ ಸುರೇಶ್ ಇಟಗಿ, ಬಾಳು ದೆಸೂರಕರ್, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ಗಾಯಿತ್ರಿ ಪಾಟೀಲ್, ಶಿವಾಜಿ ಬೊಕಡೆ, ಬಾಗಣ್ಣ ನರೋಟಿ, ಜಯವಂತ ಬಾಳೆಕುಂದ್ರಿ ಮೊದಲಾದವರು ಉಪಸ್ಥಿತರಿದ್ದರು.ಅದ್ಧೂರಿ ಕಾರ್ಯಕ್ರಮ: ಬೆನಕನಹಳ್ಳಿಯ ಗಾರ್ಡನ್ ಕೋರ್ಟ್ ಹೊಟೇಲ್ ಎದುರಿನ ಬೃಹತ್ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಿತು. ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕುಳಿತಲ್ಲೇ ಕೈ ಎತ್ತಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಆಶೀರ್ವದಿಸಿದರು. ಹಿರಿಯರಿಗಾಗಿ ಇಂತಹ ಅಪರೂಪದ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಭಾಗವಹಿಸಿದ್ದವರು ಸಚಿವರನ್ನು ಮುಕ್ತ ಮನಸ್ಸಿನಿಂದ ಪ್ರಶಂಸಿಸಿದರು.--------ಕೋಟ್ಹಿರಿಯರು ಕೇವಲ ವಯಸ್ಸಾದವರು ಅಲ್ಲ, ಸಮಾಜದ ಅನುಭವದ ಗ್ರಂಥಗಳು ಎಂದು ವರ್ಣಿಸಿದ ಅವರು, ತಮ್ಮ ಜನ್ಮದಿನವನ್ನು ವೈಯಕ್ತಿಕ ಆಚರಣೆಯಾಗಿ ಅಲ್ಲದೆ ಹಿರಿಯರ ಸೇವೆಗೆ ಸಮರ್ಪಿಸುವುದೇ ತಮಗೆ ಸಂತೋಷ ನೀಡುತ್ತದೆ. ಹಿರಿಯರನ್ನು ಗೌರವಿಸುವ ಸಮಾಜವೇ ನಿಜವಾದ ಅಭಿವೃದ್ಧಿಯ ಸಮಾಜ. ಇಂದು ನಾವು ತಂತ್ರಜ್ಞಾನದಲ್ಲಿ ಮುಂದೆ ಹೋಗುತ್ತಿದ್ದೇವೆ. ಆದರೆ, ಮೌಲ್ಯಗಳಲ್ಲಿ ಹಿಂದೆ ಹೋಗಬಾರದು. ಆ ಮೌಲ್ಯಗಳ ಜೀವಂತ ರೂಪವೇ ಹಿರಿಯ ನಾಗರಿಕರು. ನಾನು ಜನಪ್ರತಿನಿಧಿಯಾಗಿ, ಸಚಿವೆಯಾಗಿ ಏನೇ ಸಾಧಿಸಿದ್ದರೂ, ಅದರ ಹಿಂದೆ ಹಿರಿಯರ ಮಾರ್ಗದರ್ಶನ, ಆಶೀರ್ವಾದ ಮತ್ತು ಸಂಸ್ಕಾರ ಇದೆ.ಲಕ್ಷ್ಮೀ ಹೆಬ್ಬಾಳಕರ, ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ