ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರೇಮಿಗಳ ದಿನ ಯುವಜನತೆಯನ್ನು ದಾರಿ ತಪ್ಪಿಸುತ್ತಿದ್ದು, ಇಡಿ ಕುಟುಂಬವನ್ನೇ ಹಾಳು ಮಾಡುತ್ತಿದೆ ಎಂದು ಜ್ಞಾನಯೋಗಾಶ್ರಮದ ಜ್ಞಾನಾನಂದ ಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಜರುಗಿದ ಮಾತಾ-ಪಿತಾ ಪಾದಪೂಜಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಮಾತಾ-ಪಿತಾ ಪಾದಪೂಜಾ ವಿಧಿ ವಿಧಾನ ತಿಳಿಸಿ ಮಾತನಾಡಿದ ಅವರು, ಮಾತೃದೇವೋಭವ ಪಿತೃದೇವೋಭವ ಅಂದರೇ ನೀವು ದೇವರಂತಹ ತಾಯಿ, ದೇವರಂತಹ ತಂದೆಯಾಗಬೇಕು. ಅಂದಾಗ ಮಕ್ಕಳು ನಿಮ್ಮನ್ನು ದೇವರೆಂದು ತಿಳಿಯುತ್ತಾರೆ ಎಂದರು.ನೀವು ದೇವರಂತೆ ತಂದೆ ತಾಯಿಯಾಗದಿದ್ದರೇ ಮಕ್ಕಳು ನಿಮ್ಮನ್ನು ದೇವರೆಂದು ತಿಳಿಯದೆ ಅಡ್ಡದಾರಿ ಹಿಡಿಯುತ್ತಾರೆ. ಇವತ್ತಿನ ದಿನಕ್ಕೆ ಮಾತಾಪಿತಾ ಪಾದಪೂಜೆ ಸೀಮಿತವಾಗಬಾರದು. ಜೀವನದ ಕೊನೆಯವರೆಗೂ ತಂದೆ-ತಾಯಿಯನ್ನು ಪೂಜಿಸಬೇಕು. ಮನೆಯಲ್ಲಿ ಹಿರಿಯರ ವರ್ತನೆ ಹೇಗೆ ಇರುತ್ತದೆಯೋ ಅಂತಹ ವರ್ತನೆಯನ್ನು ಮಕ್ಕಳು ಕಲಿಯುತ್ತಾರೆ. ಮಕ್ಕಳ ಮುಂದೆ ತಂದೆ-ತಾಯಿಗಳು ಜಗಳವಾಡಬಾರದು. ತಂದೆ-ತಾಯಿಗಳು ಮಗುವಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಒಳ್ಳೆಯ ಸಂಸ್ಕಾರ ಕೊಟ್ಟು ಅವನ ಕೈಯಲ್ಲಿ ಒಂದು ರುಪಾಯಿ ಕೊಟ್ಟರೆ ಮಗು ಆ ಒಂದು ರುಪಾಯಿಯನ್ನು ಒಂದು ಕೋಟಿ ಮಾಡುತ್ತಾನೆ. ಮಗುವಿಗೆ ಸಂಸ್ಕಾರ ನೀಡದೇ ಅವನ ಕೈಯಲ್ಲಿ ಒಂದು ಕೋಟಿ ಕೊಟ್ಟರೇ ಅದನ್ನು ಒಂದೇ ದಿನದಲ್ಲಿ ಹಾಳು ಮಾಡುತ್ತಾನೆ ಎಂದರು.ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಚೇರಮನ್ ಡಾ.ಸುರೇಶ ಬಿರಾದಾರ ಮಾತನಾಡಿ, ಇಂದು ಮಕ್ಕಳು ಪ್ರೀತಿಯ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಅದಕ್ಕಾಗಿ ನಮ್ಮ ಸಂಸ್ಥೆ ಇವತ್ತಿನ ದಿನ ಮಾತಾಪಿತಾ ಪಾದಪೂಜಾ ಕಾರ್ಯಕ್ರಮ ಮಾಡಿ ಅವರಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸುತ್ತಿದೆ ಎಂದು ತಿಳಿಸಿದರು.
ಮಕ್ಕಳು ತಮ್ಮ ತಂದೆ-ತಾಯಿಯರ ಪಾದಪೂಜೆ ಮಾಡಿ ಸಿಹಿ ಹಂಚಿ, ನಮಸ್ಕರಿಸಿ ಆಶೀರ್ವಾದ ಪಡೆದರು. ವಿದ್ಯಾರ್ಥಿಗಳು ತಂದೆ-ತಾಯಿಯವರ ಮಹತ್ವದ ಕುರಿತಾದ ನುಡಿಮುತ್ತುಗಳನ್ನು ಹಾಗೂ ತಂದೆ-ತಾಯಿಗಳ ಮಹತ್ವದ ಕುರಿತಾದ ವಚನಗಳನ್ನು ಹೇಳಿದರು. ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ, ನಿರ್ದೇಶಕಾರದ ಶರತ ಬಿರಾದಾರ, ದಿವ್ಯಾ ಬಿರಾದಾರ, ಪ್ರಾಚಾರ್ಯೆ ಫರಿನಖಾನ, ಶಿಕ್ಷಕರಾದ ಅಲ್ತಾಫ ಪಟೇಲ, ಪ್ರವೀಣ ಗೆಣ್ಣೂರ, ಎ.ಎಚ್.ಸಗರ, ಸರೋಜಾ ಕರಕಳ್ಳಿ, ಸುರೇಖಾ ಪಾಟೀಲ, ಸವಿತಾ ಪಾಟೀಲ, ಮೇಘಾ, ನಿಷ್ಕಲಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶರತ ಮಠ, ಸಾನ್ವಿ ಧೂಳಖೇಡ ನಿರೂಪಿಸಿದರು. ಶಿಕ್ಷಕರಾದ ನಂದಾ ಅಳ್ಳಿಚಂಡಿ ಸ್ವಾಗತಿಸಿದರು. ಪ್ರಶಾಂತ ಪಾಟೀಲ ವಂದಿಸಿದರು.ಮಕ್ಕಳು ಸುಸಂಸ್ಕೃತರಾಗಲು ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ. ಮಕ್ಕಳಿಗೆ ಮೃಗದಂತಹ ಸಂಸ್ಕಾರ ನೀಡಿದರೇ ಅವರು ಮೃಗದ ರೀತಿ ಹಿಂಸೆಗೆ ಇಳಿಯುತ್ತಾರೆ. ಅದಕ್ಕೆ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಬಿತ್ತಲು ಪಾಲಕರ ಸಹಕಾರ ಅಗತ್ಯ. ಮಕ್ಕಳ ಕಾಲೇಜು ಶಿಕ್ಷಣದ ವರೆಗೆ ಪಾಲಕರು ಅವರ ಮೇಲೆ ಲಕ್ಷ ವಹಿಸಬೇಕು. ಮಕ್ಕಳಿಗೆ ಒಳ್ಳೆಯ ತಿಳುವಳಿಕೆ ಕೊಟ್ಟು ಅಡ್ಡದಾರಿ ಹಿಡಿಯದಂತೆ ನೋಡಿಕೊಳ್ಳಬೇಕು.-ಡಾ.ಸುರೇಶ ಬಿರಾದಾರ,
ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಚೇರಮನ್.