ಕಾರವಾರ: ರಸ್ತೆ ಕಾಮಗಾರಿಗಾಗಿ ಕುಮಟಾ- ಶಿರಸಿ ರಾಷ್ಟ್ರೀಯ ಹೆದ್ದಾರಿ ೭೬೬(ಇ) ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಿದ್ದು, ಜಿಲ್ಲಾಡಳಿತ ಸೂಚಿಸಿದ ಪರ್ಯಾಯ ಮಾರ್ಗಗದಲ್ಲಿ ವಾಹನಗಳ ಸಂಚಾರವೇ ದುಸ್ತರವಾಗಿದೆ. ಕುಮಟಾ ಬಡಾಳ ಸಿದ್ದಾಪುರ ರಾಜ್ಯ ಹೆದ್ದಾರಿ, ಅಂಕೋಲಾ ಯಲ್ಲಾಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ, ಅಂಕೋಲಾ ಅಚವೆ ಯಾಣ ಶಿರಸಿ ರಾಜ್ಯ ಹೆದ್ದಾರಿ ಬಹುತೇಕ ಕಡೆ ಗುಂಡಿ ಬಿದ್ದಿದ್ದು, ಅಪಾಯಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯಿದೆ. ಪರ್ಯಾಯ ಮಾರ್ಗಗಳನ್ನು ಸರಿಯಾಗಿ ಗುಂಡಿ ತುಂಬದೇ, ದುರಸ್ತಿ ಮಾಡಿಕೊಳ್ಳದೇ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹದಗೆಟ್ಟ ರಸ್ತೆಯಲ್ಲಿ ವಾಹನ ಓಡಿಸುವುದೇ ಚಾಲಕರಿಗೆ ಸವಾಲಿನ ಕೆಲಸವಾಗಿದೆ.ಕುಮಟಾ ಬಡಾಳ ಸಿದ್ದಾಪುರ ರಾಜ್ಯ ಹೆದ್ದಾರಿ ಗುಂಡಿಗಳಿಂದ ತುಂಬಿದೆ. ಈ ರಸ್ತೆ ತೀರಾ ಕಿರಿದಾಗಿದ್ದು, ಅದರ ನಡುವೆ ರಸ್ತೆ ಅಕ್ಕಪಕ್ಕದಲ್ಲಿ ಗಿಡಗಂಟಿಗಳು ಬೆಳೆದು ರಸ್ತೆಯನ್ನು ಆವರಿಸಿಕೊಂಡಿವೆ. ಇದರಿಂದ ಎದುರಿನಿಂದ ಬರುವ ವಾಹನಗಳೇ ಕಾಣದಷ್ಟು ಸಮಸ್ಯೆ ಉದ್ಭವಿಸಿದೆ. ಸಿದ್ದಾಪುರ ತಾಲೂಕಿನ ದೊಡ್ಮನೆ ಘಟ್ಟದಲ್ಲಿ ಮಳೆಗಾಲದಲ್ಲಿ ಕುಸಿದು ಬಿದ್ದ ಮಣ್ಣು ಹೆದ್ದಾರಿಯಿಂದ ಇನ್ನೂ ಪೂರ್ತಿಯಾಗಿ ತೆಗೆದಿಲ್ಲ. ಚರಂಡಿಗಳು ಮುಚ್ಚಿ ಮಳೆನೀರು ರಸ್ತೆ ಮೇಲೆಯೇ ಹರಿದ ಕಾರಣ ಹಲವೆಡೆ ಕೊರಕಲು ಬಿದ್ದು ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿಯಿದೆ. ಲೋಕೋಪಯೋಗಿ ಇಲಾಖೆ ಸುಪರ್ದಿಯಲ್ಲಿರುವ ಅಂಕೋಲಾ ಅಚವೆ ಯಾಣ ಶಿರಸಿ ರಾಜ್ಯ ಹೆದ್ದಾರಿ ಚನಗಾರ ಹಾಗೂ ಯಾಣದ ಬಳಿ ಹದಗೆಟ್ಟಿದೆ. ಈ ರಸ್ತೆಯಲ್ಲೇ ಕಾರವಾರದಿಂದ ಶಿರಸಿ ಮೂಲಕ ಹೊರ ಜಿಲ್ಲೆಗೆ ತೆರಳುವ ಸಾರಿಗೆ ಸಂಸ್ಥೆ ಬಸ್ ಓಡಿಸಲಾಗುತ್ತಿದೆ. ಕಾರವಾರಕ್ಕೆ ಬರುವ ಅಥವಾ ಕಾರವಾರದಿಂದ ಶಿರಸಿಗೆ ತೆರಳುವ ಬಸ್ಗಳಿಗೆ ಸಿದ್ದಾಪುರ, ಯಲ್ಲಾಪುರ ಮಾರ್ಗದಲ್ಲಿ ಬಂದರೆ ಸಾಕಷ್ಟು ಸುತ್ತುವರಿದಂತಾಗುತ್ತದೆ. ಹೀಗಾಗಿ ಈ ಮಾರ್ಗವೇ ಸಂಚಾರಕ್ಕೆ ಸಮೀಪವಾಗಿದ್ದು, ಇಂಧನ ಹಾಗೂ ಸಮಯ ಎರಡೂ ಉಳಿತಾಯವಾಗಲಿದೆ.