ಮೋಟೆಬೆನ್ನೂರು ಬಳಿ ಕತ್ತು ಸೀಳಿ ನೃತ್ಯ ತರಬೇತಿದಾರನ ಹತ್ಯೆ

KannadaprabhaNewsNetwork |  
Published : Aug 26, 2025, 01:05 AM IST
ಮ | Kannada Prabha

ಸಾರಾಂಶ

ಮಾಕನೂರಿಗೆ ಬಂದಿದ್ದ ಸ್ಥಳದ ಮಾಹಿತಿ ಆತನ ಮೊಬೈಲ್‌ ಲೋಕೇಶನ್‌ನಿಂದ ಗೊತ್ತಾಗಿದೆ. ಆದರೆ ಆತ ಮಾಕನೂರಿಗೆ ಯಾಕೆ ಬಂದಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.

ಬ್ಯಾಡಗಿ: ಯುವಕನೊಬ್ಬನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಮೇಲೆ ಸೋಮವಾರ ಬೆಳಗಿನ ಜಾವ ನಡೆದಿದೆ.

ಕೊಲೆಯಾದ ಯುವಕನನ್ನು ಚಿತ್ರದುರ್ಗ ನಗರದ ನಿವಾಸಿ ಟಿ. ಲಿಂಗೇಶ (33) ಎಂದು ಗುರುತಿಸಲಾಗಿದೆ.

ಇವರು ವೃತ್ತಿಯಲ್ಲಿ ನೃತ್ಯ ತರಬೇತುದಾರನಾಗಿದ್ದರು. ಅಲ್ಲದೇ ಬೋಡಾ ಎಂಬ ವ್ಯಕ್ತಿಯ ಜತೆ ಚಿತ್ರದುರ್ಗದಲ್ಲಿ ಕಲರ್ಸ್ ಕೆಫೆ ನಡೆಸುತ್ತಿದ್ದ. ಆ. 24ರಂದು ಸಂಜೆ 4 ಗಂಟೆಗೆ ಸ್ನೇಹಿತ ಬೋಡಾ ಅವರ ಜನ್ಮದಿನಾಚರಣೆ ಮಾಡಲು ಹೋಗುತ್ತೇನೆ ಎಂದು ಮನೆಯವರಿಗೆ ತಿಳಿಸಿ ತಂದೆಯ ಬಳಿಯಿದ್ದ ಬಂಗಾರದ ಚೈನ್ ಪಡೆದು ಚಿತ್ರದುರ್ಗದಿಂದ ಹೋಗಿದ್ದ. ಬ್ಯಾಡಗಿ ತಾಲೂಕಿನ ಮಾಕನೂರ ಬಳಿ ಭಾನುವಾರ ರಾತ್ರಿ ಮತ್ತೆ ಮನೆಯವರಿಗೆ ಕರೆ ಮಾಡಿ ಒಂದು ಗಂಟೆಯೊಳಗೆ ಮನೆಗೆ ಬರುತ್ತೇನೆ ಎಂದು ತಿಳಿಸಿದ್ದಾನೆ. ಮಾಕನೂರಿಗೆ ಬಂದಿದ್ದ ಸ್ಥಳದ ಮಾಹಿತಿ ಆತನ ಮೊಬೈಲ್‌ ಲೋಕೇಶನ್‌ನಿಂದ ಗೊತ್ತಾಗಿದೆ. ಆದರೆ ಆತ ಮಾಕನೂರಿಗೆ ಯಾಕೆ ಬಂದಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.

ಶವವಾಗಿ ಪತ್ತೆ: ಮೇಲ್ನೋಟಕ್ಕೆ ಅಪಘಾತ ಎಂಬಂತೆ ಕಂಡುಬಂದಿತಾದರೂ ಬಳಿಕ ಹತ್ಯೆಗೆ ಬಳಸಲಾದ ಚಾಕು ಸ್ಥಳದಲ್ಲಿ ಪತ್ತೆಯಾಗಿದ್ದು, ಲಿಂಗೇಶನನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪಿಎಸ್ಐ ಭಾರತಿ ಕುರಿ ಅವರು ಸ್ಥಳ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ಮೃತದೇಹ ಸಾಗಿಸಿದ್ದಾರೆ.

ಹಿರಿಯ ಅಧಿಕಾರಿಗಳ ಭೇಟಿ: ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಯಶೋದಾ ವಂಟಗೋಡಿ, ಅಡಿಷನಲ್ ಎಸ್ಪಿ ಲಕ್ಷಣ ಶಿರಕೋಳ, ಡಿವೈಎಸ್‌ಪಿ ಎಂ.ಎಸ್. ಪಾಟೀಲ ಇನ್ನಿತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಹತ್ಯೆ ಕುರಿತು ಯಾವುದೇ ಸುಳಿವು ಸಿಗದ ಹಿನ್ನೆಲೆ ಕೊಲೆ ಪ್ರಕರಣವೆಂದು ದೂರು ದಾಖಲಿಸಿಕೊಂಡಿರುವ ಬ್ಯಾಡಗಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವೈರತ್ವ ಇರಲಿಲ್ಲ: ಮಗನ ಸಾವಿನ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವನೊಬ್ಬ ಸ್ನೇಹಜೀವಿ. ಯಾರ ಜತೆಯೂ ವೈರತ್ವ ಇರಲಿಲ್ಲ. ಆದರೆ ಇದೀಗ ಕೊಲೆಯಾಗಿದ್ದಾನೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಗೆಳೆಯನ ಜನ್ಮದಿನ ಆಚರಿಸಲು ಹೊರಟಿದ್ದೇನೆ ಎಂದು ಹೇಳಿ ಹೋದವನು ಶವವಾಗಿದ್ದಾನೆ. ಆದರೆ ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬುದು ತಿಳಿದಿಲ್ಲ. ಹತ್ಯೆಗೆ ಕಾರಣವಾದವರನ್ನು ಪೊಲೀಸರು ಪತ್ತೆ ಹಚ್ಚಿ ಮಗನ ಸಾವಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ಲಿಂಗೇಶನ ತಂದೆ, ತಾಯಿಗಳಾದ ತೇಜಪ್ಪ- ಕವಿತಾ ತಿಳಿಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ