ಬೇಲೂರಲ್ಲಿ ಎಲ್‌ಇಡಿ ಪರದೆ ಮೂಲಕ ಬಾಲರಾಮನ ದರ್ಶನ

KannadaprabhaNewsNetwork | Published : Jan 23, 2024 1:46 AM

ಬೇಲೂರು ಪಟ್ಟಣದ ಶ್ರೀ ಚನ್ನಕೇಶವ ದೇವಾಲಯದ ಮುಂಭಾಗ ಹಾಕಿಸಿದ್ದ ಶಾಮಿಯಾನದಲ್ಲಿ ಎಲ್‌ಇಡಿ ಪರದೆ ಮುಖಾಂತರ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀಬಾಲ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಸಾರ್ವಜನಿಕರು ಹಾಗೂ ಪ್ರವಾಸಿಗರು ವೀಕ್ಷಣೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿತ್ತು.

ಶ್ರೀ ಚನ್ನಕೇಶವ ದೇವಾಲಯದ ಮುಂಭಾಗ ಶಾಮಿಯಾನ ಹಾಕಿ ವ್ಯವಸ್ಥೆಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಶ್ರೀ ಚನ್ನಕೇಶವ ದೇವಾಲಯದ ಮುಂಭಾಗ ಹಾಕಿಸಿದ್ದ ಶಾಮಿಯಾನದಲ್ಲಿ ಎಲ್‌ಇಡಿ ಪರದೆ ಮುಖಾಂತರ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀಬಾಲ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಸಾರ್ವಜನಿಕರು ಹಾಗೂ ಪ್ರವಾಸಿಗರು ವೀಕ್ಷಣೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿತ್ತು.

ಪಟ್ಟಣದ ಶ್ರೀ ಚನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಬಾಂಧವರು ಭಾನುವಾರ ರಾತ್ರಿಯಿಂದ ಬೃಹತ್ ಮಟ್ಟದ ಶ್ರೀ ರಾಮನ ಫ್ಲೆಕ್ಸ್ ಅಳವಡಿಸಿ ಆಕರ್ಷಕ ರಂಗೋಲಿ ಬಿಡಿಸಿದ್ದರು. ಹಿಂದೂ ಯುವಕರ ತಂಡದ ಮುಖಂಡರು ದೇವಾಲಯದ ಮುಂಭಾಗ ಶಾಮಿಯಾನ ಹಾಕಿಸಿ ಎಲ್‌ಇಡಿ ಟಿವಿ ಪರದೆ ಅಳವಡಿಸಿದ್ದು ಶ್ರೀ ರಾಮನ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀರಾಮ ಮಂದಿರದಲ್ಲಿ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ಬಾಲ ರಾಮನಿಗೆ ಪೂಜೆ ಸಲ್ಲಿಸುವುದನ್ನು ವೀಕ್ಷಿಸಿ ಕಣ್ತುಂಬಿಕೊಂಡರು. ಹಿಂದೂ ಭಕ್ತರು ಶ್ರೀರಾಮನನ್ನು ನೆನೆದು ಜೈ ಜೈ ಶ್ರೀರಾಮ ಎಂದು ಘೋಷಣೆ ಕೂಗಿದರು.

ಶಾಸಕ ಹುಲ್ಲಳ್ಳಿ ಸುರೇಶ್ ಕುಟುಂಬ ಸೇರಿದಂತೆ ರಾಮನ ಭಕ್ತರು ಕಾರ್ಯಕ್ರಮವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಶಾಸಕ ಎಚ್‌.ಕೆ. ಸುರೇಶ್ ಮಾತನಾಡಿ 500 ವರ್ಷಗಳ ಇತಿಹಾಸ ತಾಳಿದ ಶ್ರೀರಾಮ ಮಂದಿರ ನಿರ್ಮಾಣದ ಕನಸು ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಮಸ್ತ ಹಿಂದೂ ಶ್ರೀರಾಮ ಭಕ್ತರ ಹೋರಾಟದ ಫಲವಾಗಿ ಪ್ರತಿಷ್ಠಾಪನೆ ಆಗಿದೆ ಎಂದರು.

ಪುರಸಭೆಯ ಅಧ್ಯಕ್ಷೆ ತೀರ್ಥ ಕುಮಾರಿ ವೆಂಕಟೇಶ್ ಮಾತನಾಡಿ, ಶ್ರೀರಾಮ ಎಂದರೆ ಮರ್ಯಾದೆ ಪುರುಷೋತ್ತಮ ಎಂದು ಹೆಸರಾಗಿದ್ದು ಪ್ರತಿಯೊಬ್ಬರೂ ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಸಂಘದವರು ಸ್ಥಳದಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಲಾಡು, ಚಿತ್ರಾನ್ನ, ಮೊಸರನ್ನ ಸೇರಿದಂತೆ ಇತರೆ ಖಾದ್ಯವನ್ನು ಹಂಚಿದರು. ಪಟ್ಟಣದಲ್ಲಿರುವ ಹನುಮ ಮತ್ತು ಶ್ರೀ ರಾಮನ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಲ್ಪಟ್ಟಿತು. ಯಾವುದೇ ಗಲಭೆ ಗೊಂದಲಗಳಿಗೆ ಆಸ್ಪದ ನೀಡದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಪಟ್ಟಣದ ಶ್ರೀ ಚನ್ನಕೇಶವ ದೇವಾಲಯದ ಮುಂಭಾಗ ಎಲ್‌ಇಡಿ ಪರದೆ ಮೂಲಕ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ವೀಕ್ಷಿಸಿದರು.