ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

30ರಂದು ಬೀದರ್‌ನಲ್ಲಿ ಪ್ರಥಮ ಜಿಲ್ಲಾ ದಾಸ ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Dec 28, 2023 1:47 AM

ಕಸಾಪದಿಂದ ಆಯೋಜನೆ, ಸಾಹಿತಿ ಬಿಎಂ ಅಮರವಾಡಿ ಸರ್ವಾಧ್ಯಕ್ಷತೆ, ನಗರದ ಪತ್ರಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಪ್ರಥಮ ಜಿಲ್ಲಾ ದಾಸ ಸಾಹಿತ್ಯ ಸಮ್ಮೇಳನವನ್ನು ಇದೇ ಡಿ.30ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8ಕ್ಕೆ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಧ್ವಜಾರೋಹಣ ನೆರವೇರಿಸುವರು. ನಾಡಧ್ವಜವನ್ನು ಡಾ. ಎಸ್‌ಎಸ್‌ ಸಿದ್ದಾರೆಡ್ಡಿ ಫೌಂಡೇಶನ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ ನೆರವೇರಿಸುವರು. ಪರಿಷತ್ತಿನ ಧ್ಜಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ನೆರವೇರಿಸುವರು.

ಬೆಳಗ್ಗೆ 8.30ಕ್ಕೆ ವಿ.ಕೆ ಇಂಟರ್‌ನ್ಯಾಶನಲ್‌ ಶಾಲೆಯಿಂದ ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ಕನ್ನಡ ಮಾತೆ ಭುವನೇಶ್ವರಿಯ ಮೆರವಣಿಗೆ ನಡೆಯಲಿದ್ದು, ಪೌರಾಡಳಿತ ಸಚಿವ ರಹೀಮ್‌ ಖಾನ್‌ ಮೆರವಣಿಗೆ ಉದ್ಘಾಟಿಸುವರು. ಬಸವ ತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವೈಜಿನಾಥ ಕಮಠಾಣೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಖಿಲಾಂಡೇಶ್ವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂಧೆ, ವಿವಿಧ ಸಂಸ್ಥೆಯ ಪ್ರಮುಖರು ಭಾಗವಹಿಸುವರು ಎಂದು ತಿಳಿಸಿದರು.

11ಗಂಟೆಗೆ ಸಮ್ಮೇಳನ ಉದ್ಘಾಟನೆ: ಮೆರವಣಿಗೆಯು ಶಾಲೆಯಿಂದ ಆರಂಭಗೊಂಡು ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಭಗತಸಿಂಗ್‌ ವೃತ್ತ, ಡಾ. ಅಂಬೇಡ್ಕರ್‌ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ,ದ ಮೂಲಕ ರಂಗಮಂದಿರಕ್ಕೆ ತಲುಪುದು. ಬೆಳಗ್ಗೆ 11ಕ್ಕೆ ಸಮ್ಮೇಳನ ಉದ್ಘಾಟನೆ ನಡೆಯಲಿದ್ದು, ಡಾ. ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ನೇತೃತ್ವವನ್ನು ಡಾ. ಶಿವಾನಂದ ಸ್ವಾಮಿಗಳು ವಹಿಸುವರು. ಸಾನಿಧ್ಯವನ್ನು ತಿಂಥಣಿ ಕನಕ ಗುರುಪೀಠದ ಸಿದ್ದರಾಮನಂದಪುರಿ ಸ್ವಾಮಿಗಳು ವಹಿಸುವರು. ಬೆಂಗಳೂರಿನ ಖ್ಯಾತ ಸಾಹಿತಿ ಕಾ.ತ ಚಿಕ್ಕಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು. ಸಮ್ಮೇಳನಾಧ್ಯಕ್ಷರಾಗಿ ಬಿಎಂ ಅಮರವಾಡಿ ಉಪಸ್ಥಿತರಿದ್ದು ಮಾತನಾಡುವರು ಎಂದು ವಿವರಿಸಿದರು.

ಚಿತ್ರಕಲಾ ಪ್ರದರ್ಶನ, ಸ್ಮರಣ ಸಂಚಿಕೆ ಬಿಡುಗಡೆ: ಪರಿಷತ್ತಿನ ಧ್ವಜವನ್ನು ಜಿಲ್ಲಾಧ್ಯಕ್ಷ ಸುರೇಶ ಚನ್ನಶಟ್ಟಿ ಹಸ್ತಾಂತರ ಮಾಡುವರು. ಮಾಜಿ ಸಚಿವ ಎಚ್‌ಎಂ ರೇವಣ್ಣ ಅವರು ದಾಸ ಸಂಭ್ರಮ ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಕೇಂದ್ರ ಸಚಿವ ಭಗವಂತ ಖೂಬಾ ಕೃತಿ ಬಿಡುಗಡೆ ಮಾಡುವರು. ಸಚಿವ ರಹೀಮ್‌ ಖಾನ್‌ ಪುಸ್ತಕ ಮಳಿಗೆ ಉದ್ಘಾಟಿಸುವರು. ಶಾಸಕ ಪ್ರಭು ಚವ್ಹಾಣ್‌ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಪಂಡಿತರಾವ್ ಚಿದ್ರಿ ಅವರನ್ನು ಸನ್ಮಾನಿಸಲಾಗುವುದು.

ಮುಖ್ಯ ಅತಿಥಿಯಾಗಿ ಜಿಲ್ಲೆಯ ಎಲ್ಲಾ ಶಾಸಕರು, ಎಂಎಲ್‌ಸಿಗಳು, ವಿವಿಧ ಜನಪ್ರತಿನಿಧಿಗಳು, ವಿವಿಧ ಸಮಾಜದ ಗಣ್ಯರು ಭಾಗವಹಿಸುವರು.

ಮಧ್ಯಾಹ್ನ 1.30ಕ್ಕೆ ಸಮ್ಮೇಳನಾಧ್ಯಕ್ಷರ ಜೀವನ ಸಾಧನೆ ಕುರಿತು ವಿಶೇಷ ಉಪನ್ಯಾಸವನ್ನು ಶಿವಲಿಂಗ ಹೇಡೆ ನೀಡುವರು. ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿಂದ್ರ ಲಂಜವಾಡಕರ್‌ ಅಧ್ಯಕ್ಷತೆ ವಹಿಸುವರು.

ಮಧ್ಯಾಹ್ನ 2.3ಕ್ಕೆ ಗೋಷ್ಠಿ -1 ನಡೆಯಲಿದ್ದು, ಬೆಂಗಳೂರಿನ ಹಿರಿಯ ಸಾಹಿತಿ ಡಾ. ಸುಬ್ರಮಣ್ಯ ಸ್ವಾಮಿ ಸೇರಿದಂತೆ ಇನ್ನಿತರರು ಭಾಗವಹಿಸುವರು.

ಸಂಜೆ 4ಕ್ಕೆ ಗೋಷ್ಠಿ -2 ಕಾವ್ಯ ವಾಚನ ಜರುಗುವುದು. ವಿವಿಧ ಕವಿಗಳು ಭಾಗವಹಿಸುವರು. ಸಂಜೆ 6.15ಕ್ಕೆ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ನಡೆಯಲಿದ್ದು ಟಿಎಂ ಮಚ್ಚೆ ಗೊತ್ತುವಳಿ ಮಂಡಿಸುವರು.

ಸಂಜೆ 6.30ಕ್ಕೆ ಸಮಾರೋಪ ಹಾಗೂ ಸನ್ಮಾನ ಸಮಾರಂಭ ನಡೆಯಲಿದ್ದು ಸಿದ್ದರಾಮ ಶರಣ ಬೆಲ್ದಾಳ ಸಾನಿಧ್ಯ ವಹಿಸುವರು. ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸುವರು. ಸಮಾರೋಪ ಭಾಷಣವನ್ನು ಕಲಬುರಗಿಯ ಡಾ. ಸ್ವಾಮಿರಾವ್‌ ಕುಲಕರ್ಣಿ ಮಾಡುವರು. ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸುವರು ನಂತರ ರೇಖಾ ಅಪ್ಪಾರಾವ ಸೌದಿ ಅವರಿಂದ ದಾಸರ ಪದಗಳು, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸನ್ಮಾನ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಂಡಿತ ಚಿದ್ರಿ, ಮಾಳಪ್ಪ ಅಡಸಾರೆ, ಶಿವಶಂಕರ ಟೋಕರೆ, ಪೀರಪ್ಪ ಔರಾದೆ, ಸಂತೋಷ ಜೋಳದಾಪಕೆ, ಟಿಎಂ ಮಚ್ಚೆ, ಸಂಜುಕುಮಾರ ಆಲೂರೆ ಇದ್ದರು.