ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರಿನಲ್ಲಿ ಜನಿಸಿದ ದೇವರ ದಾಸಿಮಯ್ಯ ಅವರು 10ನೇ ಶತಮಾನದಲ್ಲಿಯೇ ಸರಳ ವಚನಗಳನ್ನು ರಚಿಸಿ ಜನಸಾಮಾನ್ಯರನ್ನು ತಿದ್ದಿದರು. ದಾಸಿಮಯ್ಯ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು. ಮೈಸೂರಿನ ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ ಬಿ. ಬಾಲಕೃಷ್ಣಯ್ಯ ಮಾತನಾಡಿ, ವಚನ ಸಾಹಿತ್ಯಕ್ಕೆ ಶ್ರೀಮಂತಿಕೆ ತಂದುಕೊಟ್ಟ ದೇವರ ದಾಸಿಮಯ್ಯ ಅವರು ತಮ್ಮ ಬದುಕಿನುದ್ದಕ್ಕೂ ನುಡಿದಂತೆ ನಡೆದರು. ಆದಿಗುರು ಶಂಕರಾಚಾರ್ಯರ ಅದ್ವೈತ ಸಿದ್ದಾಂತವನ್ನು ಮುಂದುವರೆಸಿದವರು ದೇವರ ದಾಸಿಮಯ್ಯ ಎಂದರೇ ತಪ್ಪಾಗಲಾರದು. ಜಾತಿ, ಲಿಂಗ ತಾರತಮ್ಯ, ಸ್ತ್ರೀಶೋಷಣೆಯನ್ನು ವಿರೋಧಿಸಿದ್ದ ದಾಸಿಮಯ್ಯ ಸಮಾಜ ಸುಧಾರಕರು ಹೌದು ಎಂದರು.
ನೇಯ್ಗೆ ವೃತ್ತಿಯನ್ನು ಮಾಡುತ್ತಿದ್ದ ದೇವರ ದಾಸಿಮಯ್ಯ ತಮ್ಮ ವಚನಗಳಲ್ಲಿ ಕಾಯಕ, ಭಕ್ತಿ, ಜ್ಞಾನ, ಸರಳತೆ, ವೈರಾಗ್ಯ, ಮುಕ್ತಿಗೆ ಪ್ರಾಧಾನ್ಯತೆ ನೀಡಿದ್ದಾರೆ. 12ನೇ ಶತಮಾನದಲ್ಲಿ ಆರಂಭವಾದ ವಚನ ಚಳವಳಿಗಿಂತ ಮೊದಲೇ 10ನೇ ಶತಮಾನದಲ್ಲಿ ಸರಳ ವಚನಗಳನ್ನು ರಚಿಸಿದ ಆದ್ಯ ವಚನಕಾರ ದಾಸಿಮಯ್ಯ ಆಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಮೂಲ ವಚನ ಸಾಹಿತ್ಯವಾಗಿದ್ದು, ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಂಡಿದೆ. ಅದಕ್ಕೆ ಕಾರಣೀಪುರುಷರು ದೇವರ ದಾಸಿಮಯ್ಯ ಎಂದರು.ದೇವರ ದಾಸಿಮಯ್ಯ ವಚನಗಳ ಆದರ್ಶ ಮೌಲ್ಯಗಳನ್ನು ಮಕ್ಕಳಿಗೆ ತುಂಬಬೇಕು. ತಂದೆ-ತಾಯಿಗಳೇ ಮಕ್ಕಳಿಗೆ ಮಾದರಿಯಾಗಬೇಕು. ಶ್ರೀಮಂತಿಕೆಯ ಜೀವನಕ್ಕಿಂತ ಶ್ರೀಮಂತಿಕೆಯ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕಾಗಿದೆ. ಮಹಾನ್ ಸಾಧಕರ ನಡೆನುಡಿಗಳನ್ನು ಅರ್ಥೈಸಬೇಕು. ಮಕ್ಕಳಿಗೆ ಆಸ್ತಿ ಸಂಪಾದನೆ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಆಗಮಾತ್ರ ಮಕ್ಕಳು ಸಮಾಜದ ಸತ್ಪ್ರಜೆಯಾಗಲಿದ್ದಾರೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡಯ್ಯ, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಸಮಾಜದ ಮುಖಂಡರಾದ ಮಧುಸೂಧನ್, ವೆಂಕಟೇಶ್, ಕಾಂತರಾಜು, ಬಸವರಾಜು, ದೋಡ್ಡರಾಯಪೇಟೆ ಗಿರೀಶ್, ಶಿವಕುಮಾರ್, ಇತರರು ಕಾರ್ಯಕ್ರಮದಲ್ಲಿ ಇದ್ದರು. ನಗರದ ಶ್ರೀ ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೆ ನಡೆದ ದೇವರ ದಾಸಿಮಯ್ಯ ಅವರ ಭಾವಚಿತ್ರ ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿದ್ದವು.