ಜನಾರ್ದನ ರೆಡ್ಡಿ, ಶ್ರೀರಾಮುಲು ಸದನದಲ್ಲೇ ನನಗೆ ತೊಡೆ ತಟ್ಟಿದ್ದರು. ಅದೇ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ, ಇಬ್ಬರ ಸೊಕ್ಕನ್ನೂ ಮುರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
ದಾವಣಗೆರೆ : ಜನಾರ್ದನ ರೆಡ್ಡಿ, ಶ್ರೀರಾಮುಲು ಸದನದಲ್ಲೇ ನನಗೆ ತೊಟ್ಟಿದ್ದರು. ಅದೇ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ, ಇಬ್ಬರ ಸೊಕ್ಕನ್ನೂ ಮುರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಕುರುಬ ಸಮಾಜ ಮತ್ತು ಹಿಂದುಳಿದ ವರ್ಗಗಳ ಸಭೆಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ತೊಡೆ ತಟ್ಟಿದಾಗ ಅಂಥವರ ಜಿಲ್ಲೆವರೆಗೂ ಐತಿಹಾಸಿಕ ಪಾದಯಾತ್ರೆ ಕೈಗೊಂಡು, ಆ ಇಬ್ಬರ ಸೊಕ್ಕು ಮುರಿದಿದ್ದಷ್ಟೇ ಅಲ್ಲ, ಕಾಂಗ್ರೆಸ್ ಅಧಿಕಾರಕ್ಕೂ ಬರಲು ಕಾರಣರಾದೆವು ಎಂದರು.
ಪ್ರಧಾನಿ ನರೇಂದ್ರ ಮೋದಿ ಸುಳ್ಳನ್ನೇ ಮಾರುಕಟ್ಟೆ ಮಾಡಿಕೊಂಡು, ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆದಿದ್ದೇ ಸಾಧನೆ ಮಾಡಿಕೊಂಡಿದ್ದಾರೆ. ಹಿಂದುಳಿದವ ದೊಡ್ಡ ಶತೃವೆಂದರೆ ಅದು ಬಿಜೆಪಿ. ಬಿಜೆಪಿಗೆ ಹಿಂದುಳಿದ ವರ್ಗಗಳು ಮತ ಹಾಕುವುದಕ್ಕೆ ಕಾರಣವೇ ಇಲ್ಲ . ಕುರುಬರಿಗೆ ರಾಜ್ಯದಲ್ಲಿ ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲೂ ಟಿಕೆಟ್ ಕೊಟ್ಟಿಲ್ಲ. ನೀವೂ ಸಹ ಬಿಜೆಪಿಗೆ ಒಂದೇ ಒಂದು ಮತವನ್ನೂ ನೀಡಬೇಡಿ ಎಂದು ಅವರು ಹೇಳಿದರು.
ಹಿಂದುಳಿದವರಿಗೆ ಮೀಸಲಾತಿ ಕೊಟ್ಟಾಗ ವಿರೋಧಿಸಿದ್ದೇ ಬಿಜೆಪಿ. ಮಹಿಳೆಯರಿಗೆ ಮೀಸಲಾತಿ ನೀಡಿದಾಗಲೂ ವಿರೋಧ ಮಾಡಿದ್ದು ಬಿಜೆಪಿ. ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಿದಾಗಲೂ ವಿರೋಧಿಸಿದ್ದು ಬಿಜೆಪಿ. ಬಿಜೆಪಿಯ ರಾಮಾಜೋಯಿಸ್ ಮೀಸಲಾತಿ ವಿರುದ್ಧ ಸುಪ್ರೀಂ ಕೋರ್ಟ್ಗೆ ಹೋಗಿದ್ದರು. ಬಿಜೆಪಿ ಸದಾ ಹಿಂದುಳಿದವರು, ಶ್ರಮಿಕರು, ದುಡಿಯುವ ವರ್ಗಗಳ ವಿರೋಧಿಯಾಗಿದೆ ಎಂದು ಅವರು ಆರೋಪಿಸಿದರು.