ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಜಗಳೂರು ತಹಸೀಲ್ದಾರ್ ಕಚೇರಿಗೆ ಡಿಸಿ ಗಂಗಾಧರ ಸ್ವಾಮಿ ದಿಢೀರ್‌ ಭೇಟಿ

KannadaprabhaNewsNetwork | Published : Jul 21, 2024 1:18 AM

ದಾವಣಗೆರೆ ನೂತನ ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರ ಸ್ವಾಮಿ ಶನಿವಾರ ತಾಲ್ಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿ, ಪ್ರತಿ ಕೊಠಡಿಗಳ ಆಡಳಿತ ವ್ಯವಸ್ಥೆಯನ್ನು ಪರಿಶೀಲಿಸಿದರು. ಫಸಲ್‌ ವಿಮಾ, ಬರ ಪರಿಹಾರ ಕುರಿತು ಜನರಿಂದ ದೂರುಗಳು ಬಂದಿರುವುದಾಗಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಜಗಳೂರು

ದಾವಣಗೆರೆ ನೂತನ ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರ ಸ್ವಾಮಿ ಶನಿವಾರ ತಾಲ್ಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿ, ಪ್ರತಿ ಕೊಠಡಿಗಳ ಆಡಳಿತ ವ್ಯವಸ್ಥೆಯನ್ನು ಪರಿಶೀಲಿಸಿದರು. ಫಸಲ್‌ ವಿಮಾ, ಬರ ಪರಿಹಾರ ಕುರಿತು ಜನರಿಂದ ದೂರುಗಳು ಬಂದಿರುವುದಾಗಿ ಹೇಳಿದರು.

ಬೆಳಗ್ಗೆ 10-30ಕ್ಕೆ ಸರಿಯಾಗಿ ಭೇಟಿ ನೀಡಿದ ಅವರು, ತಹಸೀಲ್ದಾರ್ ಕಚೇರಿ, ಭೂಮಿ ಕೇಂದ್ರ, ಸಬ್ ರಿಜಿಸ್ಟ್ರಾರ್ ಕಚೇರಿ, ಸರ್ವೆ ಕಚೇರಿ, ದಾಖಲೆಗಳ ವಿಭಾಗ, ಆಹಾರ ಶಾಖೆ, ಚುನಾವಣಾ ಕಚೇರಿ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ೧೫ ದಿನಗಳಿಂದಷ್ಟೇ ಜಿಲ್ಲಾಧಿಕಾರಿಯಾಗಿ ದಾವಣಗೆರೆ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದೇನೆ. ತಾಲೂಕು ಕಚೇರಿಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡುವುದು ಸಾಮಾನ್ಯ. ಜಗಳೂರು ತಾಲೂಕಿನ ೮ ಗ್ರಾ.ಪಂ.ಗಳಲ್ಲಿ ಫಸಲ್ ಬಿಮಾ ಯೋಜನೆ ಬಂದಿಲ್ಲ ಎಂದು ಕೆಲ ರೈತರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಶೀಘ್ರವೇ ಅಧಿಕಾರಿಗಳ ಜೊತೆ ಸಭೆ ನಡೆಸಿ, ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಅನೇಕ ಕಡೆ ಬರ ಪರಿಹಾರ ಹಣ ಬಂದಿಲ್ಲ ಎಂಬ ದೂರುಗಳೂ ಬಂದಿವೆ. ಪೂರ್ವ ಮುಂಗಾರು ಸುರಿದ ಪರಿಣಾಮ ತೋಟಗಾರಿಕೆ ಬೆಳೆಗಳ ನಷ್ಟದ ಬಗ್ಗೆ ಮಾಹಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಶೀಘ್ರವೇ ಎನ್‌ಡಿಆರ್‌ಎಫ್‌ ನಿಯಮಗಳ ಅನುಸಾರ ಪರಿಹಾರ ವಿತರಣೆಗೆ ಸೂಚನೆ ನೀಡಲಾಗುವುದು ಎಂದರು.

ಕಚೇರಿಯ ನಿರ್ವಹಣೆಯನ್ನು ತಹಸೀಲ್ದಾರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಭೇಟಿ ವೇಳೆ ಕಂಡುಬಂದಿದೆ. ರೈತರು ಸೇರಿದಂತೆ ಜನರ ಸಮಸ್ಯೆಗಳನ್ನು ಸಕಾಲದಲ್ಲಿ ಪರಿಹಾರ ಕಲ್ಪಿಸಬೇಕೆಂದು ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೆ ಸೂಚಿಸಿದರು.

ಈ ಸಂದರ್ಭ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಗ್ರೇಡ್-೨ ತಹಸೀಲ್ದಾರ್ ಮಂಜಾನಂದ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.

- - - -೨೦ಜೆಎಲ್ಆರ್ಚಿತ್ರ2:

ಜಗಳೂರು ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರ ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.