ಕನ್ನಡಪ್ರಭ ವಾರ್ತೆ ಪಾವಗಡ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಭಾನುವಾರ ಪಾವಗಡಕ್ಕೆ ಆಗಮಿಸಿ ಸರ್ಕಾರದ ಸೌಲಭ್ಯ ಸದ್ಬಳಿಕೆ ಹಾಗೂ ಕುಂದುಕೊರತೆಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದರು.ಬೆಳಿಗ್ಗೆ 11ಗಂಟೆಗೆ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಇಲ್ಲಿನ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಪಟ್ಟಣದ ಶಿರಾ ರಸ್ತೆಯ ಶ್ರೀನಿವಾಸ ಟಾಕೀಸ್ ಬಳಿಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪಡಿತರ ಆಹಾರ ಧಾನ್ಯಗಳ ವಿತರಣೆ ಹಾಗೂ ನ್ಯಾಯಬೆಲೆ ಅಂಗಡಿಯ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.ಈ ವೇಳೆ ಸರ್ಕಾರದಿಂದ ಪೂರೈಕೆ ಆಗುತ್ತಿರುವ 15ಕೆಜಿ ಅಕ್ಕಿ ಹಾಗೂ ಇತರೆ ಆಹಾರ ಧಾನ್ಯಗಳ ವಿತರಣೆ ಕುರಿತು ಪಡಿತರಿಂದ ಮಾಹಿತಿ ಪಡೆದುಕೊಂಡ ಡೀಸಿ, ಸರ್ಕಾರದಿಂದ ಪಡಿತರ ಚೀಟಿಗಳಿಗೆ ಪೂರೈಕೆ ಅಗುವ ಆಹಾರ ಧಾನ್ಯಗಳು ಸಮರ್ಪಕವಾಗಿ ವಿತರಣೆ ಆಗಬೇಕು. ಕಾರ್ಡ್ದಾರರಿಗೆ ಸರ್ಕಾರ ನಿಗದಿಪಡಿಸಿದ್ದ ಅಕ್ಕಿ ರಾಗಿ ಇತರೆ ಆಹಾರ ಧಾನ್ಯಗಳು ಪಡಿತರರಿಗೆ ಸಿಗಬೇಕು. ಇದರಲ್ಲಿ ವ್ಯತ್ಯಾಸ ಕಂಡುಬಂದರೆ ಪಡಿತರ ಚೀಟಿದಾರರ ದೂರಿನ ಮೇರೆಗೆ ಆಹಾರ ಧಾನ್ಯಗಳ ವಿತರಣೆಯ ಸೊಸೈಟಿ ಮಾಲೀಕರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದಾಗಿ ಎಚ್ಚರಿಸಿದರು.ಸರ್ಕಾರದಿಂದ ಇಲ್ಲಿನ ನ್ಯಾಯಬೆಲೆ ಅಂಗಡಿಗೆ ಪೂರೈಕೆಯಾಗುವ ಆಹಾರ ಧಾನ್ಯಗಳ ವಿವರ ಹಾಗೂ ಪಡಿತರ ಚೀಟಿದಾರರ ಸಂಖ್ಯೆ ಕುರಿತು ತಹಸೀಲ್ದಾರ್ ಹಾಗೂ ನ್ಯಾಯಬೆಲೆ ಅಂಗಡಿಯ ಕಾರ್ಯದರ್ಶಿ ರಾಮಕೃಷ್ಣ ಅವರಿಂದ ಮಾಹಿತಿ ಪಡೆದ ಬಳಿಕ ಸರ್ವರ್ ಸಮಸ್ಯೆ ನೆಪ ಹೇಳಿ ವಿತರಣಾ ಕೇಂದ್ರಗಳಲ್ಲಿ ಆಹಾರ ಧಾನ್ಯಗಳ ವಿತರಣೆ ವಿಳಂಬ ಮಾಡಬಾರದು. ವಿತರಣೆ ಸಂದರ್ಭದಲ್ಲಿ ಪ್ರತಿ ದಿನ ಒಂದು ಗಂಟೆ ಮುಂಚಿತವಾಗಿ ನ್ಯಾಯಬೆಲೆ ಅಂಗಡಿಗಳ ಕೇಂದ್ರಗಳನ್ನು ತೆರೆದು ಆಹಾರ ಧಾನ್ಯ ವಿತರಿಸುವ ಮೂಲಕ ಪಡಿತರ ಚೀಟಿದಾರರಿಗೆ ಅನುಕೂಲ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಜಂಟಿ ನಿರ್ದೇಶಕರಾದ ಮಂಟೇಸ್ವಾಮಿಗೆ ಆದೇಶಿಸಿದರು.
ತಾಲೂಕಿನ ನಾಗಲಮಡಿಕೆ ಹೋಬಳಿಯ ಶ್ರೀ ರಂಗಪುರ ತಾಂಡಕ್ಕೆ ಭೇಟಿ ನೀಡಿ ಅಲ್ಲಿನ ಮಾದರಿ ಅಂಗನವಾಡಿ ಕೇಂದ್ರದ ಪರಿಶೀಲನೆ ನಡೆಸಿ ಮಕ್ಕಳ ಸಂಖ್ಯೆಯ ಹಾಗೂ ಪೌಷ್ಟಿಕ ಆಹಾರ ಪದಾರ್ಥಗಳ ವಿತರಣೆ ಮತ್ತು ಆರೋಗ್ಯ ಇತರೆ ಮೂಲಭೂತ ಸೌಲಭ್ಯ ಕುರಿತು ಪರಿಶೀಲನೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಯ ಸೌಲಭ್ಯ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣ ಮಹಿಳೆಯರಿಗೆ ತಲುಪುತ್ತಿದೆಯಾ ಎಂಬುವರ ಕುರಿತು ಮಹಿಳೆಯರಿಂದ ಮಾಹಿತಿ ಪಡೆದ ಬಳಿಕ ಗೃಹಲಕ್ಷ್ಮೀ ಹಣ ತಲುಪುವ ಬಗ್ಗೆ ಅನೇಕ ಮಂದಿ ಮಹಿಳೆಯರು ತೃಪ್ತಿದಾಯಕ ವಿಚಾರ ಕೇಳಿಬಂದಿದ್ದು ಎರಡು ಮೂರು ತಿಂಗಳ ವಿಳಂಬದ ಬದಲಿಗೆ ಪ್ರತಿ ತಿಂಗಳು ಖಾತೆಗೆ ಯೋಜನೆಯ ಹಣ ಸಿಕ್ಕಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಗಡಿ ಪ್ರದೇಶವಾದ ತಾಲೂಕಿನ ರಾಪ್ಟೆ ಗ್ರಾಮದ ಹೊರವಲಯದಲ್ಲಿ ಹೊಸದಾಗಿ ಗುರ್ತಿಸಲಾದ ಸೋಲಾರ್ ಪಾರ್ಕ್ಗಳ ಜಮೀನು ವೀಕ್ಷಣೆ ನಡೆಸಿ ಅಲ್ಲಿ ಸೌರಶಕ್ತಿ ಘಟಕಗಳಿಗೆ ಜಮೀನು ನೀಡಿದ ರೈತರೊಂದಿಗೆ ಚರ್ಚಿಸಿ ಸಮಸ್ಯೆ ಅಲಿಸಿದರು. ತಿರುಮಣಿಯ ಕೆಎಸ್ಪಿಡಿಸಿಎಲ್ ಕಚೇರಿಗೆ ತೆರಳಿ ಸೋಲಾರ್ ಪಾರ್ಕ್ಗಳ ನಿರ್ವಹಣೆ ಹಾಗೂ ಸಮಸ್ಯೆ ಕುರಿತು ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ಇದೇ ವೇಳೆ ತಹಸೀಲ್ದಾರ್ ಡಿ.ಎನ್.ವರದರಾಜ್ ಕರ್ನಾಟಕ ರಾಜ್ಯ ಸೋಲಾರ್ ಅಭಿವೃದ್ಧಿ ನಿಗಮದ ಕಚೇರಿಯ ಎಇಇ ಮಹೇಶ್,ಸಿಪಿಡಿಒ ಸುನಿತಾ,ಕಂದಾಯ ಇಲಾಖೆಯ ನಿರೀಕ್ಷಕರಾದ ಕಿರಣ್ಕುಮಾರ್,ನಾಗಲಮಡಿಕೆ ಹೋಬಳಿಯ ಆರ್ಐ ನಾರಾಯಣಪ್ಪ ಹಾಗೂ ಇತರೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.