ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲ ತಾಲೂಕುಗಳ ತಹಸೀಲ್ದಾರರು, ಇಓಗಳು ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಇಂಜಿನಿಯರ್ಗಳು ಸಮನ್ವಯ ಸಾಧಿಸಿ, ಎಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತಹಸೀಲ್ದಾರ್, ಇಓ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಇತರೆ ಅಧಿಕಾರಿಗಳೊಂದಿಗೆ ಬರ ನಿರ್ವಹಣೆ ಕುರಿತು ಏರ್ಪಡಿಸಲಾಗಿದ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ತಾಲೂಕುಗಳ ಪ್ರಗತಿ ಪರಿಶೀಲಿಸಿದ ಅವರು ತಾಲೂಕುಗಳಲ್ಲಿ ಈಗಾಗಲೇ ಅನುಮೋದನೆ ಪಡೆದಿರುವ ಕುಡಿಯುವ ನೀರು ಸರಬರಾಜು ಟ್ಯಾಂಕರ್ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲು ತಿಳಿಸಲಾಗಿದೆ. ಅಳವಡಿಸದೇ ಇರುವ ಟ್ಯಾಂಕರ್ಗಳಿಗೆ ಜಿಪಿಎಸ್ ಅಳವಡಿಸಬೇಕು. ಪ್ರತಿ 15 ದಿನಗಳಿಗೆ ಒಮ್ಮೆ ತಹಸೀಲ್ದಾರ್, ಇಓ ಮತ್ತು ಎಇಇ ಬಿಲ್ಗಳನ್ನು ದೃಢೀಕರಿಸಿ ಕಳುಹಿಸಿಕೊಡಬೇಕು. ಯಾವುದೇ ಬಿಲ್ಗಳನ್ನು ಬಾಕಿ ಇಟ್ಟುಕೊಳ್ಳಬಾರದು ಎಂದರು.ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಇಂಜಿನಿಯರ್ಗಳು ನೀರು ಸರಬರಾಜು ಸಮರ್ಪಕವಾಗಿ ಆಗುತ್ತಿದೆಯೇ ಎಂದು ಪರಿಶೀಲಿಸಬೇಕು. ಹಾಗೂ ನೀರಿನ ಗುಣಮಟ್ಟ ಪರೀಕ್ಷಿಸಲು ವಾರಕ್ಕೊಮ್ಮೆ ಪರೀಕ್ಷೆ ಮಾಡಿಸಬೇಕೆಂದು ಸೂಚಿಸಿದರು.
ಈಗ ಟ್ಯಾಂಕರ್ಗಳಲ್ಲಿ ನೀರು ಸರಬರಾಜು ಮಾಡಲು ಅನುಮೋದನೆ ಪಡೆದ ಪ್ರದೇಶ ಬಿಟ್ಟು ಬೇರೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ, ಹೆಚ್ಚುವರಿ ನೀರಿನ ಬೇಡಿಕೆ ಇದ್ದರೆ, ಈ ಕೂಡಲೇ ಅವುಗಳನ್ನು ಗುರುತಿಸಿ, ಅನುಮೋದನೆ ಪಡೆದು ಕ್ರಮ ವಹಿಸುವಂತೆ ತಿಳಿಸಿದರು.ಪ್ರಸ್ತುತ ಸೊರಬ, ಸಾಗರ, ತೀರ್ಥಹಳ್ಳಿ ಮತ್ತು ಕೆಲವೆಡೆ ಮಳೆ ಬಂದಿದೆ. ಸಮಸ್ಯೆ ಸ್ವಲ್ಪ ಕಡಿಮೆ ಇರಬಹುದು. ಆದರೆ ಮುಂದಿನ ವಾರದಲ್ಲಿ ಮಳೆ ಬಾರದಿದ್ದರೆ ಮತ್ತೆ ಸಮಸ್ಯೆ ಉದ್ಭವವಾಗಬಹುದು. ಆದ್ದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದಾದ ಪ್ರದೇಶ ಗುರುತಿಸಿ ಈಗಲೇ ಕುಡಿಯುವ ನೀರು ಸರಬರಾಜಿಗೆ ಸಿದ್ಧತೆ ಮಾಡಿಟ್ಟುಕೊಳ್ಳಬೇಕೆಂದು ಸೂಚನೆ ನೀಡಿದರು.
ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ಯಾವುದಾದರೂ ಗ್ರಾಮಗಳಲ್ಲಿ ಕುಡಿಯುವ ನೀರಿನ ಅವಶ್ಯಕತೆ, ಬೇಡಿಕೆ ಇದ್ದಲ್ಲಿ ಗುರುತಿಸಿ ಅನೋದನೆ ಪಡೆದುಕೊಳ್ಳಬೇಕು. ಬಾಕಿ ಇರುವ ಬಿಲ್ಅನ್ನು ಕಳುಹಿಸಿಕೊಡಬೇಕು. ಎಲ್ಲ ಗ್ರಾಪಂಗಳಲ್ಲಿ ಸಾಕಷ್ಟು ಅನುದಾನ ಇರುವುದಿಲ್ಲ. ಆದ್ದರಿಂದ ಎನ್ಡಿಆರ್ಎಫ್ ಅಡಿಯಲ್ಲಿ ಬಿಲ್ ಭರಿಸಲು ಕ್ರಮ ವಹಿಸಬೇಕು ಎಂದರು.ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಅಭಿಯಂತರ ರಾಜೇಂದ್ರ, ಎಲ್ಲ ತಾಲೂಕುಗಳ ತಹಸೀಲ್ದಾರರು, ಇಓಗಳು, ಎಇಇ, ಇತರೆ ಅಧಿಕಾರಿಗಳು ಹಾಜರಿದ್ದರು.
ಮುಂಗಾರು ಸಿದ್ಧತೆಗೆ ಡಿಸಿ ಸೂಚನೆಶಿವಮೊಗ್ಗ: ಪ್ರಸಕ್ತ ಸಾಲಿನ ಮುಂಗಾರು ಮಳೆಗೆ ಸಂಬಂಧಿಸಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕುಗಳ ತಹಸೀಲ್ದಾರರು, ಇಓ ಗಳು, ಮುಖ್ಯಾಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಆರೋಗ್ಯ ಇಲಾಖೆಯವರು ಸೇರಿದಂತೆ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಸಭೆ ನಡೆಸಿ, ಮಳೆಗಾಲದ ಮುನ್ನ ಚರಂಡಿ ಸ್ವಚ್ಚಗೊಳಿಸುವ, ನೀರು ನಿಲ್ಲುವ ಸ್ಥಳಗಳನ್ನು ಗುರುತಿಸುವುದು ಸೇರಿ ಪ್ರವಾಹ ಸಂಭವಿಸಿದರೆ ಅದನ್ನು ನಿರ್ವಹಿಸಲು ಅಗತ್ಯವಾದ ತಂಡ ರಚನೆ, ಪರಿಕರ ಲಭ್ಯತೆ ಸೇರಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ಕಳೆದ 5 ವರ್ಷಗಳಲ್ಲಿ ಮಳೆಯಿಂದ ಸಮಸ್ಯೆ ಎದುರಿಸಿದ ಪ್ರದೇಶ ಪಟ್ಟಿ ಮಾಡಿ, ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಈಗಾಗಲೇ ಡೆಂಗ್ಯು ಪ್ರಕರಣಗಳು ಕಾಣಿಸುತ್ತಿದ್ದು, ಮಳೆಗಾಲದಲ್ಲಿ ಬರಬಹುದಾದ ಕೀಟಜನ್ಯ ಸೋಂಕುಗಳ ವಿರುದ್ಧ ಕ್ರಮ ಕೈಗೊಳ್ಳಲು ಮೇ ತಿಂಗಳಿನಲ್ಲೇ ಸಿದ್ಧತೆ ಮಾಡಿಕೊಳ್ಳಬೇಕು.
ಹಲವೆಡೆ ಮಳೆ, ಗಾಳಿಯಿಂದ ಮರಗಳು ಬೀಳುವ, ಭೂಕುಸಿತ, ಇತರೆ ಪ್ರಕರಣದಿಂದ ಸಾವು-ನೋವು ಸಂಭವಿಸಬಹುದಾಗಿದ್ದು, ಇದನ್ನು ತಪ್ಪಿಸಲು ಆರ್ಎಫ್ಓ, ಅಭಿಯಂತರರು ಮತ್ತು ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಉಪವಿಭಾಗಾಧಿಕಾರಿಗಳು ಸಹ ಈ ಕುರಿತು ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಅಭಿಯಂತರ ರಾಜೇಂದ್ರ, ಎಲ್ಲ ತಾಲೂಕು ತಹಸೀಲ್ದಾರರು, ಇಓಗಳು, ಎಇಇ, ಇತರೆ ಅಧಿಕಾರಿಗಳು ಹಾಜರಿದ್ದರು.