ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ವಿಕಾಸಸೌಧದ ಮುಂದೆ ಎಸ್.ಎಂ.ಕೃಷ್ಣರ ಪ್ರತಿಮೆ ಸ್ಥಾಪಿಸುವಂತೆ ಮುಖ್ಯಮಂತ್ರಿಗೆ ಡಿ.ಸಿ.ತಮ್ಮಣ್ಣ ಪತ್ರ

KannadaprabhaNewsNetwork | Published : Jun 2, 2025 11:51 PM

ಕರ್ನಾಟಕ ಏಕೀಕರಣಕ್ಕೆ ನಾಂದಿಯಾಡಿದ ಧೀಮಂತ ನಾಯಕ ದಿ.ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಡವನ್ನು ಕಟ್ಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೆಂಗಲ್ ಹನುಮಂತಯ್ಯರಂತೆ ಎಸ್‌ಎಂಕೆ ಹೆಸರು ಶಾಶ್ವತವಾಗಿ ರಾಜ್ಯದ ಜನರ ಮನಸ್ಸಿನಲ್ಲಿ ಉಳಿಯಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ವಿಧಾನಸೌಧ, ವಿಕಾಸಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆ ಮುಂಭಾಗ ಮಾಜಿ ಸಿಎಂ ದಿ.ಎಸ್.ಎಂ.ಕೃಷ್ಣರ ಪ್ರತಿಮೆ ಸ್ಥಾಪಿಸುವಂತೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ರಾಜಕೀಯ ಮುತ್ಸುದಿ, ಧೀಮಂತ ನಾಯಕ ರಾಷ್ಟ್ರದಲ್ಲೇ ನಂ.1 ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ದಿ.ಎಸ್.ಎಂ. ಕೃಷ್ಣರವರ ಸಾಧನೆಯ ಕೆಲವು ವಿಚಾರಗಳನ್ನು ಶಾಸಕ ಡಿ.ಸಿ.ತಮ್ಮಣ್ಣ ಅವರು ಪತ್ರದ ಮೂಲಕ ಸಿಎಂಗೆ ಬರೆದಿದ್ದಾರೆ.

ಸಿಎಂ ಆಗಿ ಸ್ತ್ರೀ ಶಕ್ತಿ ಸಂಘಗಳ ಸ್ಥಾಪನೆ, ಸ್ವಚ್ಛ ಗ್ರಾಮ ಯೋಜನೆ, ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ, ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿ, ಕಾವೇರಿ ನೀರಾವರಿ ನಿಗಮ ಸ್ಥಾಪನೆ, ರಾಜ್ಯದ ವಿತ್ತೀಯ ಆರ್ಥಿಕ ನಿರ್ವಹಣೆ ಹಾಗೂ ವಿಧಾನಸೌಧಕ್ಕೆ ಪರ್ಯಾಯವಾಗಿ ವಿಕಾಸ ಸೌಧ ಕಟ್ಟಡ ನಿರ್ಮಾಣ, ಗ್ರಾಮೀಣ ಭಾಗದ ಜನರಿಗೆ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ, ಮುಂತಾದ ಯೋಜನೆಗಳನ್ನು ರೂಪಿಸಿ ಎಸ್‌ಎಂಕೆ ರಾಜ್ಯದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಹೇಳಿದ್ದಾರೆ.

ಕರ್ನಾಟಕ ಏಕೀಕರಣಕ್ಕೆ ನಾಂದಿಯಾಡಿದ ಧೀಮಂತ ನಾಯಕ ದಿ.ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಡವನ್ನು ಕಟ್ಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೆಂಗಲ್ ಹನುಮಂತಯ್ಯರಂತೆ ಎಸ್‌ಎಂಕೆ ಹೆಸರು ಶಾಶ್ವತವಾಗಿ ರಾಜ್ಯದ ಜನರ ಮನಸ್ಸಿನಲ್ಲಿ ಉಳಿಯಬೇಕು ಎಂದು ತಿಳಿಸಿದ್ದಾರೆ.

ಈ ಹಿಂದೆ ಎಸ್.ಎಂ.ಕೃಷ್ಣ, ಪತ್ನಿ ಪ್ರೇಮಕೃಷ್ಣರ ಜೊತೆ ನಾನು ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ವೈ.ಕೆ.ಪುಟ್ಟಸೋಮೇಗೌಡರ ನಿವಾಸಕ್ಕೆ ರಾತ್ರಿ ಭೋಜನಕೂಟಕ್ಕೆ ಹೋಗಿದ್ದಾಗ ವಿಧಾನಸೌಧದ ಪಕ್ಕದಲ್ಲಿ ಮತ್ತೊಂದು ಸೌದ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದ್ದೆ. ವಿಕಾಸಸೌಧ ನಿರ್ಮಾಣದ ಹಿಂದಿರುವ ವಿಚಾರಗಳಿಗೆ ಇನ್ನೂ ಸಾಕ್ಷಿಯಾಗಿ ಪ್ರೇಮಕೃಷ್ಣರು ನಮ್ಮೆದುರಿಗಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ದಿ.ಎಸ್.ಎಂ ಕೃಷ್ಣರ ಆರೆಳೆತ್ತರದ ಪ್ರತಿಮೆ ನಿರ್ಮಾಣ ಮಾಡಿಸಿ ಪ್ರತಿಮೆಯನ್ನು ಪ್ರೇಮಕೃಷ್ಣರ ಸಮ್ಮುಖದಲ್ಲಿ ಅನಾವರಣಗೊಳಿಸಬೇಕು ಎಂದು ಕೋರಿದ್ದಾರೆ.