ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘದ ಕಾರ್ಯಕರ್ತರು ಪಟ್ಟಣದ ತಾಲೂಕು ಆವರಣದಲ್ಲಿ ಕಳೆದ 16 ದಿನಗಳಿಂದ ಅಹೋರಾತ್ರಿ ಧರಣಿ ಸ್ಥಳಕ್ಕೆ ಮಂಗಳವಾರ ಸಂಜೆ ಆಗಮಿಸಿದ ಜಿಲ್ಲಾಧಿಕಾರಿ ಶ್ರೀರೂಪ ಮೊದಲಿಗೆ ರೈತರ ಎರಡು ಬೇಡಿಕೆ ಆಲಿಸಿದರು.
ಪ್ರತಿಭಟನಾಕಾರರು 4ನೇ ಹಂತದ ಕೆರೆಗಳಿಗೆ ನೀರು ಹರಿಸಬೇಕು. ಸಾಗುವಳಿ ಚೀಟಿ ನೀಡಬೇಕು ಎಂದು ಆಗ್ರಹಿಸಿದ ಬಳಿಕ ಜಿಲ್ಲಾಧಿಕಾರಿ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಸಂಬಂಧ ಅತೀ ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷತೆಯಲ್ಲಿ ಸಭೆ ಕರೆದು ತೀರ್ಮಾನ ಮಾಡಲಾಗುತ್ತದೆ ಎಂದರು.ಅಲ್ಲದೆ ಸಾಗುವಳಿ ಚೀಟಿ ಸಂಬಂಧ ಬರುವ ಸೆ.25ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ರೈತರ ಸಭೆ ಕರೆದು ಸಾಗುವಳಿ ಚೀಟಿ ನೀಡುವ ಸಂಬಂಧ ಚರ್ಚಿಸಲಾಗುವುದು.1,2,3 ಹಾಗೂ 4 ನೇ ಹಂತದ ಕೆರೆಗಳಿಗೆ ಒಂದೇ ಸಮಯದಲ್ಲಿ ನೀರು ಹರಿಸಲು 50 ಕೋಟಿ ವೆಚ್ಚದಲ್ಲಿ ಮೋಟರ್ ಹಾಗೂ ಸ್ಪೇರ್ ಸ್ಪಾಟ್ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹುತ್ತೂರು ಕೆರೆಯಿಂದ ಅಮಚವಾಡಿ ಕೆರೆಗೆ ಪೈಪ್ಲೈನ್ ಮೂಲಕ ನೀರು ಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಪ್ರತಿಭಟನಾಕಾರರ ಮನವೊಲಿಯದ ಕಾರಣ ಜಿಲ್ಲಾಧಿಕಾರಿ ಶ್ರೀರೂಪ ವಾಪಸ್ ತೆರಳಿದರು. ಜಿಲ್ಲಾಧಿಕಾರಿ ಜತೆ ತಹಸೀಲ್ದಾರ್ ಎಂ.ಎಸ್.ತನ್ಮಯ್, ಎಸಿಎಫ್ ಕೆ.ಸುರೇಶ್, ಎಎಸ್ಪಿ ಶಶಿಧರ್, ಡಿವೈಎಸ್ಪಿ ಸ್ನೇಹರಾಜ್ ಇದ್ದರು.
ಪ್ರತಿಭಟನಾಕಾರರ ಮನವೊಲಿಸಲು ಜಿಲ್ಲಾಧಿಕಾರಿ ಶ್ರೀರೂಪ ಪ್ರಯತ್ನ ಪಟ್ಟಿದ್ದಾರೆ. ಆದರೆ ರೈತರ ಪ್ರಮುಖ ಬೇಡಿಕೆಗಳಾದ ಕೆರೆಗೆ ನೀರು,ಸಾಗುವಳಿ ಚೀಟಿ ವಿಚಾರ ತಾರ್ಕಿಕ ಅಂತ್ಯ ಕಾಣುವ ತನಕ ಪ್ರತಿಭಟನೆ ನಿಲ್ಲಲ್ಲ,ಸದ್ಯದಲ್ಲೇ ಬೃಹತ್ ಪ್ರತಿಭಟನೆ ನಡೆಸಲು ಜಿಲ್ಲಾ ಹಾಗೂ ತಾಲೂಕು ರೈತಸಂಘದ ಘಟಕಗಳು ನಿರ್ಧರಿಸಿವೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಘೋಷಿಸಿದರು.
ಬೃಹತ್ ಪ್ರತಿಭಟನೆ:
ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ,ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ,ಮುಖಂಡರಾದ ಹೊಸಕೋಟೆ ಬಸವರಾಜು, ನೇತ್ರ, ಮಹೇಶ್ ಕುಮಾರ್, ಶಿವಣ್ಣ, ಮೂಡ್ನಾಕೂಡು ಮಹೇಶ್, ಪ್ರಭು, ಪ್ರವೀಣ್, ನಾಗರಾಜಪ್ಪ, ಬಸಮ್ಮ, ಸೋಮಶೇಖರ್, ಚಿಕ್ಕತಾಯಮ್ಮ, ನೂರಾರು ಮಂದಿ ಇದ್ದರು.
ಗುಂಡ್ಲುಪೇಟೆಯ ಆಲಂಬೂರು 3 ನೇ ಹಂತದ ಕೆರೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ತೆರಕಣಾಂಬಿ ಹುಂಡಿ ಬಳಿ ರೈತರ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಭೇಟಿ ನೀಡಿದ್ದರು.