ಸಿರುಗುಪ್ಪ: ನಮ್ಮ ರಾಜ್ಯದಲ್ಲಿರುವ ಅನ್ಯ ಭಾಷಿಕರ ಜತೆ ವ್ಯವಹರಿಸುವಾಗ ಕನ್ನಡವನ್ನೇ ಬಳಸಬೇಕು. ಹೊರಗಡೆ ಬಂದವರಿಗೆ ಕನ್ನಡ ಕಲಿಸುವ ಕೆಲಸವೂ ಕನ್ನಡಿಗರಿಂದಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ನ ತಾಲೂಕು ಘಟಕ ಅಧ್ಯಕ್ಷ ಹಾಗೂ ಹಿರಿಯ ವೈದ್ಯ ಡಾ. ಮಧುಸೂದನ್ ಕಾರಿಗನೂರು ಸಲಹೆ ನೀಡಿದರು.
ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, 5ನೇ ವಾರ್ಡ್ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಲಾಶ್ರೀ ಬಳಗದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕನ್ನಡ ಪ್ರಬಂಧ, ಗೀತ ಗಾಯನ, ಭಾವಗೀತೆ, ಕಾವ್ಯ ಓದುವ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಕರ್ನಾಟಕದಲ್ಲಿ ಅನೇಕ ವರ್ಷಗಳಿಂದ ನೆಲೆಸಿರುವವರು ಕನ್ನಡದಲ್ಲಿ ವ್ಯವಹರಿಸುವುದಿಲ್ಲ. ಅವರು ತಮ್ಮ ಮಾತೃಭಾಷೆಯಲ್ಲಿಯೇ ಮಾತನಾಡುತ್ತಾರೆ. ಆದರೆ, ಕನ್ನಡಿಗರಾದ ನಾವು ಅವರ ಭಾಷೆಯಲ್ಲಿ ಮಾತನಾಡಿ ಸಹಕರಿಸುವುದನ್ನು ಮೈಗೂಡಿಸಿಕೊಂಡಿದ್ದೇವೆ. ಅದಾಗಬಾರದು. ಹೊರ ರಾಜ್ಯಗಳ ಜನರು ಕನ್ನಡ ಕಲಿಯಬೇಕು. ಈ ನೆಲದಲ್ಲಿ ಬದುಕು ಕಟ್ಟಿಕೊಳ್ಳುವವರು ಯಾರೇ ಇರಲಿ; ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದು ಹೇಳಿದರು.
ಹಿರಿಯ ಲೇಖಕ ಶಿವಕುಮಾರ್ ಎಸ್. ಬಳಿಗಾರ್ ಮಾತನಾಡಿ, ಪ್ರತಿಯೊಬ್ಬರೂ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕಾದ ಅಗತ್ಯವಿದೆ. ಮಕ್ಕಳು ಕೇವಲ ಕಂಠಪಾಠಕ್ಕೆ ಸೀಮಿತವಾಗದೆ, ಪಠ್ಯಪುಸ್ತಕ, ಸಾಹಿತ್ಯದ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಭಾಷಾ ಸಾಮರ್ಥ್ಯ, ಜ್ಞಾನದ ಬೌದ್ಧಿಕ ವಿಕಾಸ ಹೊಂದಲು ಸಾಧ್ಯವಾಗುತ್ತದೆ. ಮಾತೃಭಾಷೆಯ ಜ್ಞಾನದ ವಿಕಾಸ ಭವಿಷ್ಯದ ಜೀವನಕ್ಕೆ ನೆರವಾಗುತ್ತದೆ ಎಂದು ಹೇಳಿದರು.ತಾಲೂಕು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜೆ. ಶ್ರೀಧರ, ಕಲಾಶ್ರೀ ಬಳಗದ ಅಧ್ಯಕ್ಷ ವೈ, ಪ್ರಹ್ಲಾದ ರಾವ್, ಶಿಕ್ಷಣ ಸಂಯೋಜಕ ಎಂ. ವೆಂಕಟೇಶ್, ಹಾಸ್ಯ ಕಲಾವಿದ ಜೆ. ನರಸಿಂಹ ಮೂರ್ತಿ, ಮುಖ್ಯಗುರು ಅಯ್ಯಪ್ಪ, ಬಸವನಗೌಡ, ಮಲ್ಲಿಕಾರ್ಜುನ ಸ್ವಾಮಿ, ಶಿಕ್ಷಕಿ ವಾಸುಕಿ ಎಸ್.ಎನ್. ಮತ್ತು ವಿದ್ಯಾರ್ಥಿಗಳು ಇದ್ದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿಜೇತ ವಿದ್ಯಾಥಿಗಳಿಗೆ ಪುಸ್ತಕಗಳ ಬಹುಮಾನ ವಿತರಿಸಲಾಯಿತು.
ಸಿರುಗುಪ್ಪ ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಮ್ಮಿಕೊಂಡಿದ್ದ ಕನ್ನಡ ಪ್ರಬಂಧ, ಗೀತ ಗಾಯನ, ಭಾವಗೀತೆ, ಕಾವ್ಯ ಓದುವ ಸ್ಪರ್ಧೆಗಳಿಗೆ ಕಸಾಪ ತಾಲೂಕು ಅಧ್ಯಕ್ಷ ಡಾ. ಮಧುಸೂದನ್ ಕಾರಿಗನೂರು ಚಾಲನೆ ನೀಡಿದರು.