ಕೋಲಾರದಲ್ಲಿ ವಿದ್ಯಾರ್ಥಿನಿಯರು ಸಮುದ್ರಪಾಲು ಪ್ರಕರಣ: ವಸತಿ ಶಾಲೆಯ ಪ್ರಾಂಶುಪಾಲೆ ಅಮಾನತು, ಅತಿಥಿ ಶಿಕ್ಷಕರ ವಜಾ

KannadaprabhaNewsNetwork | Published : Dec 12, 2024 12:31 AM

ಸಾರಾಂಶ

ಕೋಲಾರದ ಎಂ.ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿಶಾಲೆಯ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ ಹಾಗೂ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಮೃತರ ಕುಟುಂಬಗಳಿಗೆ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ೫ ಲಕ್ಷ ರು. ಪರಿಹಾರ । ಆಡಳತ ಮಂಡಳಿ ವಿರುದ್ಧ ಪೋಷಕರ ಆಕ್ರೋಶಕನ್ನಡಪ್ರಭ ವಾರ್ತೆ ಕೋಲಾರ

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಪ್ರವಾಸ ತೆರಳಿದ್ದ ವೇಳೆ ಮುಳಬಾಗಿಲು ತಾಲೂಕು ಎಂ.ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿಶಾಲೆಯ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ ಹಾಗೂ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಪ್ರವಾಸದ ವೇಳೆ ಬೇಜವಾಬ್ದಾರಿತನ ವಹಿಸಿದ ಆರೋಪದಲ್ಲಿ ವಸತಿ ಶಾಲೆಯ ಪ್ರಾಂಶುಪಾಲೆ ಶಶಿಕಲಾ ಅವರನ್ನು ಅಮಾನತು ಹಾಗೂ ಆರು ಅತಿಥಿ ಉಪನ್ಯಾಸಕರು ಮತ್ತು ಓರ್ವ ಡಿ ಗ್ರೂಪ್ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಆದೇಶಿಸಿದ್ದಾರೆ. ಮೃತರ ಕುಟುಂಬಗಳಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಐದು ಲಕ್ಷ ರು. ಪರಿಹಾರ ಘೋಷಿಸಲಾಗಿದೆ.

ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯ ಶ್ರಾವಂತಿ, ಗಡ್ಡೂರು ಗ್ರಾಮದ ದೀಕ್ಷಾ, ಹೆಬ್ಬಣಿ ಗ್ರಾಮದ ಲಾವಣ್ಯಾ ಹಾಗೂ ದೊಡ್ಡಘಟ್ಟ ಗ್ರಾಮದ ವಂದನಾ ಮೃತಪಟ್ಟ ವಿದ್ಯಾರ್ಥಿನಿಯರಾಗಿದ್ದಾರೆ. ಸಮುದ್ರ ಪಾಲಾಗಿದ್ದ ವೇಳೆ ರಕ್ಷಿಸಲ್ಪಟ್ಟಿರುವ ಯಶೋಧ, ಲಿಪಿಕಾ ಮತ್ತು ವೀಕ್ಷಣಾ ಎಂಬ ಮೂವರು ವಿದ್ಯಾರ್ಥಿನಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಳಬಾಗಿಲು ತಾಲೂಕು ಎಂ.ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಒಂಬತ್ತನೇ ತರಗತಿಯ ೪೬ ವಿದ್ಯಾರ್ಥಿಗಳು ಪ್ರಾಂಶುಪಾಲರ ನೇತೃತ್ವದಲ್ಲಿ ಬನವಾಸಿ, ಶಿರಸಿ, ಗೋಕರ್ಣ, ಇಡಗುಂಜಿ, ಜೋಗ್‌ಫಾಲ್ಸ್ ಮತ್ತು ಮುರುಡೇಶ್ವರಕ್ಕೆ ಪ್ರವಾಸ ಕೈಗೊಂಡಿದ್ದರು.

ಭಟ್ಕಳ ತಾಲೂಕಿನ ಮುರುಡೇಶ್ವರದ ಅರಬ್ಬಿ ಸಮುದ್ರದಲ್ಲಿ ಮಂಗಳವಾರ ಸಂಜೆ ಆಟವಾಡಲು ನೀರಿಗೆ ಇಳಿದಿದ್ದ ವೇಳೆ ಏಳು ಜನ ವಿದ್ಯಾರ್ಥಿನಿಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಮೂವರನ್ನು ಸ್ಥಳದಲ್ಲಿದ್ದವರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸಮುದ್ರ ಪಾಲಾದ ಓರ್ವ ವಿದ್ಯಾರ್ಥಿನಿಯ ಮೃತದೇಹ ಮಂಗಳವಾರವೇ ಸಿಕ್ಕಿದ್ದರೆ, ಇನ್ನುಳಿದ ಮೂವರ ಮೃತದೇಹಗಳು ಬುಧವಾರ ಪತ್ತೆಯಾಗಿವೆ.

ವಿಷಯ ತಿಳಿಯುತ್ತಿದ್ದಂತೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ವಾಹನ ವ್ಯವಸ್ಥೆ ಮಾಡಿ ಮಕ್ಕಳ ಪೊಷಕರನ್ನು ಮುರುಡೇಶ್ವರಕ್ಕೆ ಕಳಿಸುವ ವ್ಯವಸ್ಥೆ ಮಾಡಿದ್ದರು. ಅಲ್ಲದೆ ಬೆಳಗ್ಗೆಯೇ ತಾವೂ ಕೂಡಾ ಮುರುಡೇಶ್ವರಕ್ಕೆ ತೆರಳಿ ಮಕ್ಕಳಿಗೆ ಧೈರ್ಯ ಹೇಳುವ ಕೆಲಸ ಮಾಡಿದ್ದರು, ಘಟನೆ ಕಾರಣರಾದ ಬೇಜವಾಬ್ದಾರಿ ವಹಿಸಿದ್ದ ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ಆತಂಕದಲ್ಲಿ ಸೇರಿರುವ ನೂರಾರು ಪೋಷಕರು, ತಮ್ಮ ತಮ್ಮ ಮಕ್ಕಳನ್ನು ಮಾತನಾಡಿಸಿಕೊಂಡು ತೆರಳುತ್ತಿದ್ದರು, ಅಲ್ಲದೆ ಮುಳಬಾಗಿಲು ತಹಸೀಲ್ದಾರ್ ಗೀತಾ ಸಹ ಭೇಟಿ ನೀಡಿ ಮಾಹಿತಿ ಪಡೆದರಲ್ಲದೆ, ಮೃತರ ಗ್ರಾಮಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಘಟನೆಯಲ್ಲಿ ಮೃತ ಪಟ್ಟ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಸಾಂತ್ವನ ಹೇಳಿದ್ದಾರೆ.

ಮೃತದೇಹಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ಸಂಜೆ ವೇಳೆ ಕೋಲಾರಕ್ಕೆ ಕೊಂಡೊಯ್ಯಲಾಗುತ್ತದೆ.

ಪೋಷಕರ ಆಕ್ರೋಶ:

ವಿಷಯ ತಿಳಿಯುತ್ತಿದ್ದಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ಮಕ್ಕಳ ಪೋಷಕರು ಆತಂಕದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ವಸತಿ ಶಾಲಾ ಶಿಕ್ಷಕರು ಬೇಜವಾಬ್ದಾರಿಯಿಂದ ನಡೆದುಕೊಂಡು ಮಕ್ಕಳ ಜೀವ ತೆಗೆದಿದ್ದಾರೆ ಎಂದು ಪೋಷಕರಾದ ಮಮತ, ಶಂಕರಪ್ಪ ಆಕ್ರೋಶ ಹೊರ ಹಾಕಿದ್ದಾರೆ.

Share this article