ಕುಂದಾಪುರ: ನಗರದ ಬೋರ್ಡ್ ಹೈಸ್ಕೂಲ್ ಪಕ್ಕದಲ್ಲಿರುವ ಪುರಸಭೆಗೆ ಸೇರಿದ ಜಾಗ ಸರ್ವೇ ನಂಬರ್ 141: 1ಸಿ 1ಎ ನೇ ಪ್ರದೇಶದ ಸರ್ಕಾರಿ ಜಾಗವನ್ನು ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಮಂಜೂರು ಮಾಡಿರುವ ಸರ್ಕಾರದ ತೀರ್ಮಾನ ಖಂಡನೀಯ ಎಂದು ಕಮ್ಯುನಿಸ್ಟ್ ಮಾರ್ಕ್ಸವಾದಿ ಪಕ್ಷದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಜಾಗವನ್ನು ಸರಕು ಸಾಗಣೆಯ ಆಟೋ ನಿಲ್ದಾಣವಾಗಿ ಗುರುತಿಸಲು 2000ನೇ ಇಸವಿಯಲ್ಲಿ ಪುರಸಭೆ ಜಿಲ್ಲಾಧಿಕಾರಿಗಳ ಒಪ್ಪಿಗೆಗೆ ಪ್ರಾಸ್ತಾವನೆ ಸಲ್ಲಿಸಿತ್ತು. ಸಾರ್ವಜನಿಕ ಉಪಯೋಗಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಸ್ಥಳ ಇಲ್ಲದಿರುವಾಗ ಇರುವ ಈ ಜಾಗವನ್ನು ರಾಜಕೀಯ ಪಕ್ಷದ ಕಚೇರಿಗೆ ನೀಡುವುದಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ವಾದಿ ಕುಂದಾಪುರ ತಾಲ್ಲೂಕು ಸಮಿತಿಯ ಆಕ್ಷೇಪ ಇದೆ. ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗದಲ್ಲಿ ಸಿಪಿಐಎಂ ಹಿರಿಯ ಮುಖಂಡರಾದ ಪುರಸಭೆ ಮಾಜಿ ಅಧ್ಯಕ್ಷ ವಿ.ನರಸಿಂಹ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಮುಖಂಡರಾದ ಎಚ್.ನರಸಿಂಹ, ತಾಲೂಕು ಕಾರ್ಯದರ್ಶಿ ವಿ.ಚಂದ್ರಶೇಖರ್, ಆಟೋ ಸಂಘದ ಮುಖಂಡರಾದ ರಾಜು ದೇವಾಡಿಗ ಇದ್ದರು.