ಕನ್ನಡಪ್ರಭ ವಾರ್ತೆ ಮೈಸೂರು
ನ.8ರಂದು ನಗರದಲ್ಲಿ ಮೈಸೂರು ಜಿಲ್ಲಾಡಳಿತ ಮತ್ತು ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯುತ್ಸವ ಸಮಿತಿ ವತಿಯಿಂದ ಕನಕದಾಸರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಮಿತಿ ಅಧ್ಯಕ್ಷರು ಮತ್ತು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ತೀರ್ಮಾನಿಸಲಾಯಿತು.
ಪ್ರತಿ ಬಾರಿಯಂತೆ ಈ ಬಾರಿಯು ಕನಕದಾಸರ ಭಾವಚಿತ್ರವುಳ್ಳ ಬೆಳ್ಳಿ ರಥದ ಮೆರವಣಿಗೆ ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ 9 ಗಂಟೆಗೆ ಕಾಗಿನೆಲೆ ಕೆ.ಆರ್. ನಗರ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನಿಧ್ಯದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಸ್ಥಳೀಯ ಶಾಸಕರು, ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು, ಸಮಾಜದ ಗಣ್ಯರು, ಬಂಧುಗಳ ಸಮ್ಮುಖದಲ್ಲಿ ಚಾಲನೆಗೊಳ್ಳಲಿದ್ದು, ಸಮಾಜದ ಇತಿಹಾಸವನ್ನು ಸಾರುವ, ಸರ್ಕಾರದ ಜನಪರ ಯೋಜನೆಗಳನ್ನು ಬಿಂಬಿಸುವ ಸ್ಥಬ್ಧಚಿತ್ರ, 40ಕ್ಕೂ ಹೆಚ್ಚು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಕಲಾತಂಡಗಳು, ಗ್ರಾಮಾಂತರ ಪ್ರದೇಶದಿಂದ ಬರುವ ಕಂಸಾಳೆ, ಗೊರವರ ಕುಣಿತ, ಜಾನಪದ ಕಲಾ ತಂಡ, ಶಾಲಾ ಕಾಲೇಜು ಮಕ್ಕಳು, ಎನ್.ಎಸ್.ಎಸ್, ಎನ್.ಸಿ.ಸಿ, ಅಶ್ವರೋಹಿತ ದಳ ಸಾಗಲಿದ್ದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕೆ.ಆರ್. ವೃತ್ತ, ನಗರ ಪಾಲಿಕೆ ಮುಂಭಾಗದ ರಸ್ತೆ, ಬಸವೇಶ್ವರ ವೃತ್ತ, ಚಾಮರಾಜ ಜೋಡಿ ರಸ್ತೆ, ಶಾಂತಲ ವೃತ್ತ, ನಾರಾಯಣ ಶಾಸ್ತ್ರಿ ರಸ್ತೆ ಮೂಲಕ ದೇವರಾಜ ಅರಸು ರಸ್ತೆ, ಮೆಟ್ರೋ ಪೋಲ್ ಮೂಲಕ ಕಲಾಮಂದಿರ ತಲುಪಲಿದ್ದು ಮಧ್ಯಾಹ್ನ 1ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗಲಿದೆ.ಮರುದಿನ ನ. 9 ರಂದು ಸಂಜೆ 5ಕ್ಕೆ ಕಲಾಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉಪ್ಪುಂದ ರಾಜೇಶ್ ಪಡಿಯಾರ್ ಮತ್ತು ರಶ್ಮಿ ಚಿಕ್ಕಮಗಳೂರು ತಂಡದ ವತಿಯಿಂದ ಕನಕ ಗೀತಾ ಗಾಯನ ಜರುಗಲಿದೆ. ಬಳಿಕ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಮತ್ತು ನೂತನ ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಗೌರವ ಸಮಾರಂಭ ಜರುಗಲಿದೆ.
ಈ ವೇಳೆ ಮಾಜಿ ಸಚಿವ ಎಚ್.ವೈ. ಮೇಟಿ ಅವರ ನಿಧನದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.