ಕನ್ನಡಪ್ರಭವಾರ್ತೆ ಪುತ್ತೂರು
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿರುವ ಅಯ್ಯಪ್ಪ ಗುಡಿ, ನವಗ್ರಹ ಗುಡಿ, ನಾಗನ ಸಾನಿಧ್ಯ ಸ್ಥಳಾಂತರಗೊಳಿಸುವ ಬಗ್ಗೆ ದೈವಜ್ಞರ ಮೂಲಕ ಪ್ರಶ್ನಾಚಿಂತನೆ ಇರಿಸಿ ಆ ಪ್ರಕಾರ ಮುಂದಿನ ತೀರ್ಮಾನ ಕೈಗೊಳ್ಳಲು ದೇವಾಲಯದ ಅಭಿವೃದ್ಧಿ ಸಂಬಂಧಿತ ಸಭೆಯಲ್ಲಿ ನಿರ್ಧರಿಸಲಾಗಿದೆ.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ಶನಿವಾರ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಸಭೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಶಾಸಕರು ದೇವಾಲಯದ ಬ್ರಹ್ಮಕಲಶಕ್ಕೆ ಸಮಯ ಬಂದಿದ್ದು ಅದಕ್ಕಿಂತ ಮೊದಲು ಮಾಸ್ಟರ್ ಪ್ಲ್ಯಾನ್ ಕಾರ್ಯಗತಗೊಳಿಸಬೇಕು. 2 ವರ್ಷದೊಳಗೆ ಬ್ರಹ್ಮಕಲಶಕ್ಕೆ ಅಣಿಯಾಗಲು ಜೀರ್ಣೋದ್ಧಾರಕ್ಕೆ ಪೂರಕವಾಗಿ 20 ಜನರ ಸಮಿತಿ ಮಾಡಿದ್ದು ಅದು ಧಾರ್ಮಿಕ ದತ್ತಿ ಇಲಾಖೆಯಲ್ಲಿ ಇದೆ. ಆ ಪಟ್ಟಿಯನ್ನು ಅಂತಿಮಗೊಳಿಸಿ ಸಮಿತಿಯ ಸದಸ್ಯರ ಮನೆಗೆ ಪಟ್ಟಿ ರವಾನೆ ಆಗಬೇಕು ಎಂದರು.ಇದು ದೇವಾಲಯದ ವ್ಯವಸ್ಥಾಪನ ಸಮಿತಿ ತಕ್ಷಣಕ್ಕೆ ಮಾಡಬೇಕಾದ ಕೆಲಸ. ಜು.6 ರಂದು ಜೀರ್ಣೋದ್ಧಾರ ಸಮಿತಿ ಸಭೆಯನ್ನು ಕರೆಯಬೇಕು. ಜೀರ್ಣೋದ್ದಾರ ಕಾರ್ಯಕ್ಕಾಗಿ ರು. 20 ಕೋಟಿ ಹಣ ಸಂಗ್ರಹಿಸುವ ಅಗತ್ಯವಿದೆ. ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂದಿಸಿದ ಎಂಜಿನಿಯರ್ಗಳು ದೇವಾಲಯಕ್ಕೆ ಬಂದಿದ್ದು ಮಾಸ್ಟರ್ ಪ್ಲ್ಯಾನ್ ಅವರ ಬಳಿ ಇದೆ. ಅಲ್ಲಿಂದ 15 ದಿವಸದೊಳಗೆ ತರಿಸಿ ಆ ಬಳಿಕ ಅದನ್ನು ಸರ್ಕಾರಕ್ಕೆ ಕಳುಹಿಸಬೇಕು. ಈಗಾಗಲೇ ಪ್ರಕ್ರಿಯೆ ತಡವಾಗಿದ್ದು ವ್ಯವಸ್ಥಾಪನ ಸಮಿತಿ ಇದಕ್ಕೆ ವೇಗ ನೀಡಬೇಕು ಎಂದು ತಿಳಿಸಿದರು. ಕೆರೆ ಅಭಿವೃದ್ಧಿಗೆ ರು. 5.70 ಕೋಟಿ ಅನುದಾನದೇವಳದ ಕೆರೆ ಅಭಿವೃದ್ಧಿಗೆ ಒಟ್ಟು ರು. 5.70ಕೋಟಿ ಅನುದಾನವಿದ್ದು ಅದರಲ್ಲಿ ಮಾದರಿ ಪುಷ್ಕರಿಣಿ ನಿರ್ಮಾಣ ಮಾಡಬೇಕು. ಕೆರೆ ಆಯನ ಸ್ಥಳ ಬಿಟ್ಟು ಉಳಿದೆಡೆ ಕಾರಂಜಿ ನಿರ್ಮಾಣ ಆಗಬೇಕು. ಕೆರೆ ಸುತ್ತಲಿನ ಪರಿಸರ ಸಮತ್ತಟ್ಟು ಮಾಡಲಾಗಿದ್ದು ಅಲ್ಲಿಗೆ ಗ್ರಾನೈಟ್ ಅಳವಡಿಸಬೇಕು. ಅಲ್ಲಿ ಹರಿಕಥೆ, ಭಜನೆ ಸಹಿತ ವಿವಿಧ ಚಟುವಟಿಕೆಗಳು ನಡೆಯಬೇಕು. ಡ್ರೈನೇಜ್ ನಿರ್ಮಾಣಕ್ಕಾಗಿ ರು.16 ಕೋಟಿ ರು..ವೆಚ್ಚ ಆಗಲಿದ್ದು, ಇದಕೋಸ್ಕರ ಜಿಡೆಕಲ್ಲು ಬಳಿ ಮುಖ್ಯ ವೆಟ್ ನಿರ್ಮಾಣವಾಗಲಿದೆ. ಇನ್ನೊಂದೆಡೆ ದೇವಾಲಯದ ಶಿವನ ಮೂರ್ತಿ ಇರುವ ಜಾಗದಲ್ಲಿ ಖಾಸಗಿ ಜಾಗ ಖರೀದಿಸಿ ವೆಟ್ವೆಲ್ ನಿರ್ಮಾಣ ಮಾಡಲು ಜಾಗ ಖರೀದಿ, ಆ ಜಾಗ ಸೂಕ್ತವೇ ಎನ್ನುವ ಬಗ್ಗೆ ತೀರ್ಮಾನ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ, ವಿನಯ ಸುವರ್ಣ, ನಳಿನಿ ಶೆಟ್ಟಿ, ಕೃಷ್ಣವೇಣಿ, ಸುಭಾಷ್ ರೈ, ಈಶ್ವರ್ ಬೆಡೆಕರ್, ಅರ್ಚಕ ವಸಂತ ಕುಮಾರ್ ಕೆದಿಲಾಯ, ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಇದ್ದರು.