ಸಕಲೇಶಪುರದಲ್ಲಿ ಜೂನ್‌ 13ಕ್ಕೆ ಬಸವೇಶ್ವರರ ಪುತ್ಥಳಿ ಲೋಕಾರ್ಪಣೆ

KannadaprabhaNewsNetwork |  
Published : Jun 11, 2024, 01:34 AM IST
10ಎಚ್ಎಸ್ಎನ್3 : ಸಕಲೇಶಪುರ ಪಟ್ಟಣದಲ್ಲಿ ಬಸವೇಶ್ವರ ಪುತ್ಥಳಿ ಲೋಕಾರ್ಪಣೆ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಲೆನಾಡು ವೀರಶೈವ ಸಮಾಜದ ಮುಖಂಡರು ಮಾತನಾಡಿದರು. | Kannada Prabha

ಸಾರಾಂಶ

ವಿಶ್ವ ಗುರು ಬಸವೇಶ್ವರರ ಕಂಚಿನ ಪ್ರತಿಮೆಯ ಅನಾವರಣದ ಐತಿಹಾಸಿಕ ಕಾರ್ಯಕ್ರಮ ಗುರುವಾರ ಪಟ್ಟಣದಲ್ಲಿ ನಡೆಯಲಿದೆ ಎಂದು ವೀರಶೈವ ಸಮಾಜದ ಮುಖಂಡ ಯಡೇಹಳ್ಳಿ ಮಂಜುನಾಥ್ ಹೇಳಿದರು. ಸಕಲೇಶಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಉದ್ಘಾಟನಾ ಕಾರ್ಯಕ್ರಮ । ವೀರಶೈವ ಸಮಾಜದ ಮುಖಂಡ ಯಡೇಹಳ್ಳಿ ಮಂಜುನಾಥ್ ಮಾಹಿತಿ । 1 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಸಮಾನತೆಯ ಹರಿಕಾರ, ಸಾಂಸ್ಕೃತಿಕ ನಾಯಕ, ವಿಶ್ವ ಗುರು ಬಸವೇಶ್ವರರ ಕಂಚಿನ ಪ್ರತಿಮೆಯ ಅನಾವರಣದ ಐತಿಹಾಸಿಕ ಕಾರ್ಯಕ್ರಮ ಗುರುವಾರ ಪಟ್ಟಣದಲ್ಲಿ ನಡೆಯಲಿದೆ ಎಂದು ವೀರಶೈವ ಸಮಾಜದ ಮುಖಂಡ ಯಡೇಹಳ್ಳಿ ಮಂಜುನಾಥ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹಲವು ದಶಕಗಳ ಹೋರಾಟದ ಫಲವಾಗಿ ಪಟ್ಟಣದಲ್ಲಿ ಮಲೆನಾಡು ವೀರಶೈವ ಸಮಾಜದ ವತಿಯಿಂದ ಎಲ್ಲಾ ಸಮಾಜದವರು ಹಾಗೂ ಸಂಘ ಸಂಸ್ಥೆಗಳ ನೆರವಿನಿಂದ ಸುಮಾರು ೧ ಕೋಟೆ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎರಡು ಸಾವಿರ ಕೆಜಿ ತೂಕದ ಅಶ್ವಾರೂಢ ಬಸವೇಶ್ವರರ ಮೂರ್ತಿಯನ್ನು ಜೂ.13 ರಂದು ಲೋಕಾರ್ಪಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಗುರುವಾರ ಬೆಳಿಗ್ಗೆ 9 ಗಂಟೆಗೆ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಬಸವೇಶ್ವರ ಪುತ್ಥಳಿವರೆಗೆ ನಗರದ ರಾಜಬೀದಿಯಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಬೃಹತ್ ಮೆರವಣಿಗೆ ಮಾಡಲಾಗುವುದು. ಮಧ್ಯಾಹ್ನ ೧೨ ಗಂಟೆಗೆ ಬಸವೇಶ್ವರ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಮಧ್ಯಾಹ್ನ ೧.೩೦ಕ್ಕೆ ಬ್ಯಾಕರವಳ್ಳಿ ಗುರುವೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಬೃಹತ್ ಧಾರ್ಮಿಕ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿ, ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿ, ಬೇಲೂರು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ, ತೆಂಕಲಗೋಡು ಬೃಹನ್ಮಠದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿ ಆಶೀರ್ವಚನ ನೀಡಲಿದ್ದು ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್ ದೇವರಾಜು (ದಿವಾನ್) ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ,ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮಾಜಿ ಲೋಕಸಭಾ ಸದಸ್ಯ ಜಿ.ಎಸ್ ಬಸವರಾಜು, ಶಾಸಕ ಸಿಮೆಂಟ್ ಮಂಜು, ಬೇಲೂರು ಶಾಸಕ ಎಚ್.ಕೆ ಸುರೇಶ್, ಸೇರಿದಂತೆ ಇನ್ನು ಅನೇಕ ಹಾಲಿ ಹಾಗೂ ಮಾಜಿ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮಧ್ಯಾಹ್ನ ೧೨.೩೦ರ ನಂತರ ನಿರಂತರವಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಸಮಾಜ ಸೇವಕ ಪುನೀತ್ ಬನ್ನಹಳ್ಳಿರವರು ಬಸವೇಶ್ವರ ಪುತ್ಥಳಿ ನಿರ್ಮಾಣದ ಹಾಗೂ ಧಾರ್ಮಿಕ ಕಾರ್ಯಕ್ರಮದ ವಿಶೇಷ ದಾಸೋಹ ದಾನಿಗಳು ಆಗಿರುತ್ತಾರೆ. ಹೀಗಾಗಿ ಇವರಿಗೆ ವಿಶೇಷ ಗುರುರಕ್ಷೆ ನೀಡಲಾಗುವುದು. ಹಾಸನದ ಕಡೆಯಿಂದ ಬರುವ ವಾಹನಗಳನ್ನು ಶ್ರೀನಿವಾಸ ಕಲ್ಯಾಣ ಮಂಟಪದ ಆವರಣದಲ್ಲಿ, ಹಾನುಬಾಳ್, ಮಾರನಹಳ್ಳಿ, ಹೆತ್ತೂರು ಕಡೆಯಿಂದ ಬರುವ ವಾಹನಗಳನ್ನು ಟಾಟಾ ಕಾಫಿ ಜಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. ಗಣ್ಯರ ವಾಹನಗಳ ನಿಲುಗಡೆಗೆ ಹಳೇ ಮಾಧ್ಯಮಿಕ ಪಾಠ ಶಾಲೆಯ ಆವರಣದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಜನಾಂಗದ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು.

ವೀರಶೈವ ಸಮಾಜದ ಮುಖಂಡರಾದ ಹುರುಡಿ ಅರುಕುಮಾರ್, ನರೇಶ್ ಎ.ವಿ., ಮಠಸಾಗರ ಶ್ರೀಧರ್, ಲೋಹಿತ್ ಜಂಬರ್ಡಿ, ಶಶಿಕುಮಾರ್, ಸಂಗಪ್ಪ, ನಾಗರ ಹಿತೇಶ್, ಶಶಿಕಲಾ ಲೋಕೇಶ್, ವಿಜಯ ಧನ್ಯಕುಮಾರ್ ಹಾಜರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ