ಇಂದು ಅಯೋಧ್ಯೆ ರಾಮಮಂದಿರಕ್ಕೆ ಬೆಳ್ಳಿಇಟ್ಟಿಗೆ ಸಮರ್ಪಣೆ................

KannadaprabhaNewsNetwork | Published : Oct 6, 2023 1:11 AM

ಸಮಾರಂಭದಲ್ಲಿ ಹೆಬ್ಬಾಳು ಶ್ರೀ, ಸಂಸದ ಸಿದ್ದೇಶ್ವರ, ಸಿ.ಟಿ.ರವಿ ಭಾಗಿ

ಸಮಾರಂಭದಲ್ಲಿ ಹೆಬ್ಬಾಳು ಶ್ರೀ, ಸಂಸದ ಸಿದ್ದೇಶ್ವರ, ಸಿ.ಟಿ.ರವಿ ಭಾಗಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಬೆಳ್ಳಿಇಟ್ಟಿಗೆ ಸಮರ್ಪಣಾ ಸಮಾರಂಭ ಅ.6 ರಂದು ಇಲ್ಲಿನ ಪಿ.ಬಿ.ರಸ್ತೆಯಲ್ಲಿನ ಅಭಿನವ ರೇಣುಕ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 11 ಗಂಟೆಗೆ ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ಮಾಜಿ ಸಚಿವ ಸಿ.ಟಿ.ರವಿ ಭಾಗವಹಿಸುವರು. ಬಿಜೆಪಿ ಹಿರಿಯ ಮುಖಂಡರಾದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಹರಿಹರ ಶಾಸಕ ಬಿ.ಪಿ.ಹರೀಶ, ಹಿಂದೂ ಸಂಘಟನಾ ಪ್ರಮುಖ ಕೆ.ಬಿ.ಶಂಕರನಾರಾಯಣ, ಹಿಂದೂ ಸಮಾಜ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಹಾಲಿ ಮಾಜಿ ಜನಪ್ರತಿನಿಧಿಗಳು, ಹಿಂದೂ ಸಮಾಜದ ಮುಖಂಡರು, ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸುವರು.

ಬೆಳ್ಳಿಇಟ್ಟಿಗೆ ಪ್ರಥಮ ಪ್ರಯತ್ನ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 1990ರಲ್ಲಿ ರಾಮ ಜ್ಯೋತಿಯಾತ್ರೆ ಸಂದರ್ಭ ದಾವಣಗೆರೆಯಲ್ಲಿ 8 ಮಂದಿ ಹುತಾತ್ಮರಾಗಿ, ಅನೇಕರು ಗಾಯಗೊಂಡಿದ್ದರು. ಇವರೆಲ್ಲರ ಸ್ಮರಣೆಗಾಗಿ 15 ಕೆಜಿ ಬೆಳ್ಳಿಇಟ್ಟಿಗೆಯನ್ನು ಅಯೋಧ್ಯಾ ಶ್ರೀ ರಾಮಮಂದಿರಕ್ಕೆ ರಾಜ್ಯದಲ್ಲೇ ಪ್ರಥಮ ಬಾರಿಗೆ ದಾವಣಗೆರೆಯಿಂದ ಬೆಳ್ಳಿ ಇಟ್ಟಿಗೆಯನ್ನು ತಲುಪಿಸಲಾಗುತ್ತಿದೆ. ದೇಶದ ಪ್ರತಿಯೊಬ್ಬರ ಆಸೆಯ ಪ್ರತೀಕವಾಗಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ 2024ರ ಜ. 22ರಂದು ಉದ್ಘಾಟನೆಗೊಳ್ಳಲಿದೆ. ರಾಮಮಂದಿರ ನಿರ್ಮಾಣ ಹೋರಾಟದಲ್ಲಿ ಸಹಸ್ರಾರು ಮಂದಿ ಶ್ರಮವಹಿಸಿದ್ದಾರೆ.

ಶ್ರೀನಿವಾಸ ದಾಸಕರಿಯಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ,

ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ

ಹಲವು ದಶಕಗಳ ಹೋರಾಟದ ಪ್ರತಿಫಲವಾಗಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. 1990ರಲ್ಲಿ ಅ.6 ರಂದು ಗೋಲಿಬಾರ್ ನಡೆದು ದಾವಣಗೆರೆಯ 8 ಮಂದಿ ಹುತಾತ್ಮರಾದರು. ಅದರ ಜೊತೆಗೆ ನೂರಾರು ಕಾರ್ಯಕರ್ತರು, ಕರಸೇವಕರು ಸಾವು ನೋವುಗಳ ಅನುಭವಿಸಿದರು. ಅವರ ಸ್ಮರಿಸುವ ಕಾರ್ಯಕ್ರಮವನ್ನು ಯಶವಂತರಾವ್ ಜಾಧವ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳ್ಳಿ ಇಟ್ಟಿಗೆಯನ್ನು ರಾಮಮಂದಿರಕ್ಕೆ ಕಳುಹಿಸಲಾಗುತ್ತಿದೆ. ಈ ಕಾರ್ಯ ಎಲ್ಲರೂ ಸಂತೋಷ ಪಡುವ ವಿಷಯ. ದಾವಣಗೆರೆಯಲ್ಲಿ ಈ ಕಾರ್ಯ ಆಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.

ಶಿವನಗೌಡ ಪಾಟೀಲ್ , ಮಹಾನಗರ ಪಾಲಿಕೆ ಮಾಜಿ ಸದಸ್ಯ........