ಪ್ರಧಾನಿ ಮೋದಿ ಪ್ರಯತ್ನಕ್ಕೆ ಸೋಲು: ಅಶ್ವಿನಿ ಶಂಕರ್

KannadaprabhaNewsNetwork |  
Published : Apr 19, 2026, 01:15 AM IST
ಸಿಕೆಬಿ-2 ಸುದ್ದಿಗೋಷ್ಟಿಯಲ್ಲಿ ಅಶ್ವಿನಿ ಶಂಕರ್ ಮಾತನಾಡಿದರು | Kannada Prabha

ಸಾರಾಂಶ

ನಾರಿ ಶಕ್ತಿ ವಂದನಾ ಕಾಯ್ದೆಗೆ ಸೋಲುಂಟಾಗಿರುವುದು ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯ ಕರಾಳ ದಿನವಾಗಿದೆ. ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ನೈಜ ಉದ್ದೇಶವನ್ನು ಸ್ವಾತಂತ್ರ್ಯಾನಂತರದಿಂದಲೂ ಮೆಟ್ಟಿ ನಿಲ್ಲುವುದು.

ಇದು ಕಾಂಗ್ರೆಸ್ ಮಹಿಳೆಯರಿಗೆ ಮಾಡಿದ ಅಪಮಾನ । ಸ್ವಾತಂತ್ರ್ಯ ಹತ್ತಿಕ್ಕುವುದು ಕಾಂಗ್ರೆಸ್‌ನ ಸಂಸ್ಕೃತಿ: ಆರೋಪ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಮಾಡಿದ ಯಶಸ್ವಿ ಪ್ರಯತ್ನಕ್ಕೆ ನಿನ್ನೆ ಲೋಕಸಭೆಯಲ್ಲಿ ಸೋಲಾಗಿದೆ. ಇದು ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಮಾಡಿದ ಅಪಮಾನವಾಗಿದೆ ಎಂದು ಬಿಜೆಪಿ ರಾಜ್ಯ ಓಬಿಸಿ ಉಪಾಧ್ಯಕ್ಷೆ ಹಾಗೂ ರಾಜ್ಯ ವಕ್ತಾರರಾದ ಅಶ್ವಿನಿ ಶಂಕರ್ ತಿಳಿಸಿದರು.

ನಗರದ ಉತ್ತರ ಬಡಾವಣೆಯ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಾರಿ ಶಕ್ತಿ ವಂದನಾ ಕಾಯ್ದೆಗೆ ಸೋಲುಂಟಾಗಿರುವುದು ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯ ಕರಾಳ ದಿನವಾಗಿದೆ. ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ನೈಜ ಉದ್ದೇಶವನ್ನು ಸ್ವಾತಂತ್ರ್ಯಾನಂತರದಿಂದಲೂ ಮೆಟ್ಟಿ ನಿಲ್ಲುವುದು, ಸರ್ವಾಧಿಕಾರ ಮೆರೆಯುವುದು, ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವುದು ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ. ಲಕ್ಷಾಂತರ ಜನರ ತ್ಯಾಗ-ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು, ಅದನ್ನು ಸ್ಟೇಚ್ಛಾಚಾರದಿಂದ ಕಾಂಗ್ರೆಸ್ ಬಳಸಿಕೊಂಡಿದೆ ಎಂದರು.

ಸದ್ಯ ದೇಶದ ರಾಜಕೀಯ ಭೂಪಟದಲ್ಲಿ ಅಸ್ತಿತ್ವಕ್ಕಾಗಿ ತಿಣುಕಾಡುತ್ತಿರುವ ಕಾಂಗ್ರೆಸ್ ಪಕ್ಷವು ತನ್ನದೇ ಮನಸ್ಥಿತಿಯ ಇತರ ಪಕ್ಷಗಳನ್ನು ಕಟ್ಟಿಕೊಂಡು ಇಂಡಿ ಕೂಟದ ಹೆಸರಿನಲ್ಲಿ ಸ್ತ್ರೀಕುಲದ ಹಕ್ಕನ್ನು ಲೋಕಸಭೆಯಲ್ಲಿ ಹಿಂಡಿದೆ. ದುರ್ಯೋಧನ, ದುಶ್ಯಾಸನ, ರಾವಣರ ಸಂಸ್ಕೃತಿ ನೆನಪಿಸುವ ರೀತಿಯಲ್ಲಿ ಸಂಸತ್‌ನಲ್ಲಿ ನಡೆದುಕೊಂಡು ಡಾ. ಅಂಬೇಡ್ಕರ್ ಅವರ ಮಹದಾಶಯ, ಅಣ್ಣ ಬಸವಣ್ಣ ಅವರು ಪ್ರತಿಪಾದಿಸಿದ ಲಿಂಗ ಸಮಾನತೆಯನ್ನು ಹತ್ತಿಕ್ಕಲು ಯತ್ನಿಸಿವೆ. ಮ ಹಿಳಾ ರಾಜಕೀಯ ಪ್ರಾತಿನಿಧ್ಯಕ್ಕೆ ಅವಕಾಶ ನೀಡಿದ್ದರೆ ಅದನ್ನು ಸುವರ್ಣಾಕ್ಷರದಲ್ಲಿ ಬರೆದಿಡಬಹುದಿತ್ತು.

ಇದು ಕೇವಲ ಬಿಜೆಪಿ ಮತ್ತು ಮಿತ್ರಪಕ್ಷಗಳ ಪ್ರಯತ್ನವಲ್ಲ. ಎಲ್ಲ ಪಕ್ಷಗಳ ಪ್ರಯತ್ನ ಇದರ ಹಿಂದಿದೆ ಎಂದು ಬಿಂಬಿಸಬಹುದಿತ್ತು. ಆದರೆ, ನಿನ್ನೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಮಹಿಳಾ ವಿರೋಧಿ ಧೋರಣೆ ಅನಾವರಣಗೊಂಡಿದೆ. ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ಅವರ ಮಿತ್ರ ಪಕ್ಷಗಳದು ಮಹಿಳೆಯರ ವಿಚಾರದಲ್ಲಿ ಕೇವಲ ಮೊಸಳೆ ಕಣ್ಣೀರು ಮಾತ್ರ ಅಭಿವೃದ್ಧಿಶೀಲ ರಾಷ್ಟ್ರದ ಪ್ರಯತ್ನದಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯ ಚಿಂತನೆಗೆ ಧಕ್ಕೆ ತಂದಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲೆ ರಾಮಚಂದ್ರಗೌಡ ಮಾತನಾಡಿ, ಬಿಜೆಪಿಗೆ ರಾಷ್ಟ್ರ ನಿರ್ಮಾಣದ ಚಿಂತನೆ ಇದೆ. ಕಾಂಗ್ರೆಸ್ ಪಕ್ಷವು ಸುಮಾರು ಆರೂವರೆ ದಶಕಗಳ ಕಾಲ ದೇಶದ ಆಡಳಿತದಲ್ಲಿ ಇದ್ದಾಗ ಒಬಿಸಿ ಸಮುದಾಯಕ್ಕೆ ಅನ್ಯಾಯ ಮಾಡಿತ್ತು. ಮಂಡಲ್ ವರದಿ ಜಾರಿ ಮಾಡಲು ಹಿಂಜರಿಕೆ ತೋರಿದ ಇವರದು ತೋರಿಕೆಯ ಒಬಿಸಿ ಪ್ರೀತಿ ಎಂಬುದು ಜನರಿಗೆ ಗೊತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲಮ್ಮ, ಜಿಲ್ಲಾ ಉಪಾಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್‍.ಎಸ್. ಮುರುಳಿಧರ್, ಮಧು ಸೂರ್ಯನಾರಾಯಣ ರೆಡ್ಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ನರ್ಮದಾ ರೆಡ್ಡಿ, ಮಾಜಿ ಶಾಸಕ ಎಂ.ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಆವಲಕೊಂಡರಾಯಪ್ಪ, ಬಾಲ ಕುಂಟೆ ಗಂಗಾಧರಪ್ಪ, ರಾಷ್ಟ್ರೀಯ ಪರಿಷತ್ ಸದಸ್ಯ ಲಕ್ಷ್ಮೀನಾರಾಯಣ ಗುಪ್ತಾ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗಂಗರೇ ಕಾಲುವೆ ಪ್ರಸಾದ್, ಮಾಜಿ ಅಧ್ಯಕ್ಷ ಕಾಳೇಗೌಡ, ಜಿಲ್ಲಾ ಮಾಧ್ಯಮ ಸಂಚಾಲಕ ವಿ ಮಧುಚಂದ್ರ, ಅನು ಆನಂದ್ ಇದ್ದರು.

ಸಿಕೆಬಿ-2 ಸುದ್ದಿಗೋಷ್ಟಿಯಲ್ಲಿ ಅಶ್ವಿನಿ ಶಂಕರ್ ಮಾತನಾಡಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಅವಕಾಶ ಕಸಿದುಕೊಂಡ ಕಾಂಗ್ರೆಸ್
ರಸ್ತೆ ಅಪಘಾತಗಳ ಸ್ಥಳ ಗುರುತಿಸಲು ಸೂಚನೆ