- ವಸತಿಗಾಗಿ ಹಣ ಆರೋಪ ಬಿ.ಆರ್.ಪಾಟೀಲರು ಸಮರ್ಥಿಸಿರೋದು ಭ್ರಷ್ಟಾಚಾರಕ್ಕೆ ಸಾಕ್ಷಿ
ಕನ್ನಡಪ್ರಭ ವಾರ್ತೆ ದಾವಣಗೆರೆ ಕಾಂಗ್ರೆಸ್ ಶಾಸಕರಾದ ಬಿ.ಆರ್.ಪಾಟೀಲ, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ ಆರೋಪಗಳ ಭಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಓಡಿರಬಹುದು ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ವ್ಯಂಗ್ಯವಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಆರೋಪಗಳಿಗೆ ಬೆಂಬಲ ಕೊಡುವಂತಹ ಅನೇಕ ಶಾಸಕರು ಕಾಂಗ್ರೆಸ್ಸಿನಲ್ಲೇ ಇದ್ದಾರೆ. ನಮ್ಮ ಆರೋಪಗಳಿಗೆ ಪುಷ್ಠಿ ನೀಡುವಂತೆ ಇದೀಗ ಆಡಳಿತ ಪಕ್ಷಕ್ಕೆ ಸ್ವಪಕ್ಷೀಯರಿಂದಲೇ ಆರೋಪಗಳ ಸುರಿಮಳೆಯಾಗುತ್ತಿದೆ ಎಂದರು.ವಸತಿ ಯೋಜನೆಗೆ ತಮ್ಮ ಗಮನಕ್ಕೆ ಬಾರದೇ, ಒಬ್ಬ ಗ್ರಾಪಂ ಅಧ್ಯಕ್ಷ 900ರಿಂದ 1 ಸಾವಿರ ಮನೆಗಳನ್ನು ಕಮೀಷನ್ ಕೊಟ್ಟು ರಾಜೀವ್ ಗಾಂಧಿ ವಸತಿ ನಿಗಮದಿಂದ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆಂದು, ತಮ್ಮ ಪತ್ರಕ್ಕೆ ಬೆಲೆಯೇ ಇಲ್ಲವೆಂದು ಸ್ವತಃ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ ಆರೋಪಿಸಿದ್ದಾರೆ. ವಸತಿಗಾಗಿ ಹಣ ಆರೋಪವನ್ನು ಪಾಟೀಲರು ಸಮರ್ಥಿಸಿಕೊಂಡಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದರು.
ಶಾಸಕರಾದವರಿಗೆ ಕಾರು ಖರೀದಿಸಲು ಸರ್ಕಾರ ಸಾಲ ಕೊಡುತ್ತದೆ. ಆದರೆ, ಈ ಹಿಂದೆ ನಾವು ಶಾಸಕರಾಗಿದ್ದಾಗ ಹಾಕಿದ್ದ ಅರ್ಜಿಗೆ ಈಗ ನಾಲ್ವರು ಶಾಸಕರಿಗೆ ಸಾಲ ನೀಡಿದ್ದಾರೆ. ದಾಖಲೆ ಬಜೆಟ್ ಮಂಡಿಸಿದ್ದಾಗಿ ಬೀಗುತ್ತಿದ್ದ ಸಿಎಂ ಸಿದ್ದರಾಮಯ್ಯ ಇವರೇನಾ? ರಾಜ್ಯಾದ್ಯಂತ ಶೇ.60 ಕಮಿಷನ್ನ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟವೂ ಆರಂಭವಾಗಲಿದೆ. ಸ್ವಪಕ್ಷೀಯರೇ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಒಬ್ಬೊಬ್ಬರಾಗಿ ಧ್ವನಿ ಎತ್ತುತ್ತಿದ್ದಾರೆ ಎಂದರು.
(ಬಾಕ್ಸ್) * ಅಮಿತ್ ಶಾ ದಾವಣಗೆರೆ ಸಂಸದರನ್ನೇನೂ ಹೊಗಳಿಲ್ಲ: ಹರೀಶ
ದಾವಣಗೆರೆ ಸಂಸದರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಗಳಿಲ್ಲ. ಬದಲಾಗಿ 3 ದಶಕದಿಂದ ಬಿಜೆಪಿಯ ಭದ್ರಕೋಟೆ ಆಗಿದ್ದ ದಾವಣಗೆರೆ ಕ್ಷೇತ್ರವನ್ನು ನೀವು ಹಾಳು ಮಾಡಿದ್ದೀರಿ ಅಂತಾ ನಮ್ಮದೇ ಪಕ್ಷದ ಕೆಲವರಿಗೆ ಚಾಟಿ ಬೀಸಿದರು ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ ಸ್ಪಷ್ಟಪಡಿಸಿದರು.
- - -