ಸರ್ಕಾರದ ಯೋಜನೆ ಪಾರದರ್ಶಕವಾಗಿ ತಲುಪಿಸಿ: ಜಿ.ಪಲ್ಲವಿ ಅಧಿಕಾರಿಗಳಿಗೆ ನಿರ್ದೇಶನ

KannadaprabhaNewsNetwork | Updated : Nov 09 2024, 01:14 AM IST

ಅಲೆಮಾರಿಗಳು ಮನೆ, ಸ್ವಯಂ ಉದ್ಯೋಗ, ಒಟ್ಟಾರೆಯಾಗಿ ಜೀವನದಲ್ಲಿ ಭದ್ರತೆ ದೊರೆತು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪ್ರತಿ ಹಂತದಲ್ಲಿ ಸರ್ಕಾರ ಸವಲತ್ತುಗಳನ್ನು ಒದಗಿಸುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಲೆಮಾರಿ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ಎಲ್ಲ ಯೋಜನೆಗಳು ಪಾರದರ್ಶಕ ವಾಗಿ ಜನರಿಗೆ ತಲುಪಬೇಕು ಎಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸ್ಥಳೀಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಗಮದ ವತಿಯಿಂದ ಜಾರಿಯಲ್ಲಿರುವ ವಿವಿಧ ಯೋಜನಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಅವರು ಮಾತನಾಡಿ, ಪ್ರತಿ ಜಿಲ್ಲೆಯಲ್ಲೂ ಪ್ರವಾಸ ಮಾಡಿ ಅಲೆಮಾರಿಗಳ ಸ್ಥಿತಿಗತಿ, ಸಮಸ್ಯೆಗಳಲ್ಲಿ ಪರಿಶೀಲಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಪಾಲಕರು ಆದ್ಯತೆ ನೀಡಬೇಕು. ಅಲೆಮಾರಿಗಳು ಮನೆ, ಸ್ವಯಂ ಉದ್ಯೋಗ, ಒಟ್ಟಾರೆಯಾಗಿ ಜೀವನದಲ್ಲಿ ಭದ್ರತೆ ದೊರೆತು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪ್ರತಿ ಹಂತದಲ್ಲಿ ಸರ್ಕಾರ ಸವಲತ್ತುಗಳನ್ನು ಒದಗಿಸುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಅಲೆಮಾರಿ ಹಾಗೂ ಅರೆ ಅಲೆಮಾರಿಗಳಲ್ಲಿ 46 ಜನಾಂಗದವರಿದ್ದು, ಇವರು ಆರ್ಥಿಕ ಮತ್ತು ಅಭಿವೃದ್ಧಿ ಚಟುವಟಿಕೆ ಕೈಗೊಂಡು ಸ್ಥಿರ ವಾಗಿ ಒಂದು ಕಡೆ ನೆಲೆಸುವಂತೆ ಮಾಡಲು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದಿಂದ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನಿಗಮ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು.

ಸಭೆಯಲ್ಲಿ 2021-22ನೇ ಸಾಲಿನ ವಿವಿಧ ಸಾಲ ಸೌಲಭ್ಯ ಯೋಜನೆಗಳಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಯ್ಕೆಗೊಂಡ ಫಲಾಪೇಕ್ಷಿಗಳಿಗೆ ಅನುದಾನವನ್ನು ಹೊಂದಿಸಿ, ಬಿಡುಗಡೆ ಮಾಡಬೇಕು. ಅಲ್ಲದೆ 2021-22ನೇ ಸಾಲಿನಲ್ಲಿ ಆಯ್ಕೆಗೊಂಡ ನಿವೇಶನ ಇರುವ ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ವಸತಿ ಸೌಕರ್ಯ ಪ್ರಗತಿಯಲ್ಲಿದ್ದು, ಸದರಿ ಯೋಜನೆಗೆ ನಿಗದಿಯಾದ ಘಟಕ ವೆಚ್ಚ 2 ಲಕ್ಷ ರು. ಸಾಕಾಗುತ್ತಿಲ್ಲ, ಈ ಯೋಜನೆ ಪೂರ್ವದಲ್ಲಿ ನಿಗದಿಪಡಿಸಿದಂತೆ ವಸತಿಗಾಗಿ ₹4 ಲಕ್ಷಕ್ಕೆ, ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ರಾಯಚೂರು ನಗರಸಭೆಯ ವ್ಯಾಪ್ತಿಯ ವಾರ್ಡ್-2ರ ವ್ಯಾಪ್ತಿಯ ಸುಮಾರು ವರ್ಷಗಳಿಂದ ಈ ಸಮುದಾಯ ವಾಸಿಸುತ್ತಿದ್ದು, ಕುಟುಂಬಗಳಿಗೆ ಮೂಲ ಸೌಕರ್ಯ ಗಳಾದ ಕುಡಿಯುವ ನೀರು, ವಿದ್ಯುತ್, ಸಿಸಿ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಎಸ್ಸಿಪಿ/ಟಿಎಸ್ಪಿ ಅನುದಾನದಲ್ಲಿ ಅಥವಾ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಅಲೆಮಾರಿ ಖಾತೆಗಳಲ್ಲಿ ಬಳಿಕೆ ಆಗದೆ ಉಳಿದಿರುವ ಅನುದಾನದಲ್ಲಿ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚಿದಾನಂದ, ಅಧ್ಯಕ್ಷ ವಿಶೇಷ ಕರ್ತವ್ಯಾಧಿಕಾರಿ ಆನಂದ, ಜಿಲ್ಲಾ ಅನುಷ್ಠಾನ ಸಮಿತಿಯ ಪರಶುರಾಮ್ ನಕ್ಕುಂಡಿ ಸೇರಿ ಅಧಿಕಾರಿ, ಸಿಬ್ಬಂದಿ ಹಾಗೂ ಅಲೆಮಾರಿ ಸಮುದಾಯದ ಮುಂಖಡರು ಇದ್ದರು.