ಕೊಪ್ಪ: ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಕೆಲ ಅಪರಿಚಿತರು ಪತ್ರಕರ್ತರೆಂದು ಪರಿಚಯಿಸಿಕೊಂಡು ಕಾರ್ಯ ಕ್ರಮಗಳ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿವೆ. ಈ ಬೆಳವಣಿಗೆಯಿಂದ ನೈಜ ಪತ್ರಕರ್ತರ ಗೌರವಕ್ಕೆ ಧಕ್ಕೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜಿನೇಶ್ ಇರ್ವತ್ತೂರು ಸಾಮಾಜಿಕ ಜಾಲತಾಣ, ಯೂಟ್ಯೂಬ್ ಚಾನೆಲ್ ಹಾಗೂ ಇತರ ಮಾಧ್ಯಮಗಳ ಹೆಸರಿನಲ್ಲಿ ವಾಹನಗಳಿಗೆ ಪ್ರೆಸ್ ಸ್ಟಿಕರ್ ಅಳವಡಿಸಿ ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ಕೆಲವರು ಪತ್ರಕರ್ತರೆಂದು ಹೇಳುತ್ತಾ ಸಾರ್ವಜನಿಕರು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಹಣ ಸಂಗ್ರಹಿಸುವ ಬಗ್ಗೆ ದೂರು ಬರುತ್ತಿವೆ ಎಂದು ತಿಳಿಸಿದ್ದಾರೆ.
ಇವರು ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೊಂದಾಯಿತ ಪತ್ರಕರ್ತರಲ್ಲ. ಮಾನ್ಯತೆ ಪಡೆದ ಯಾವುದೇ ಪತ್ರಕರ್ತರ ಸಂಘದ ಅಧಿಕೃತ ಸದಸ್ಯರೂ ಅಲ್ಲ. ಅಧಿಕಾರಿಗಳು ಅಧಿಕೃತ ಗುರುತಿನ ಚೀಟಿ ಪರಿಶೀಲಿಸಿ, ನಕಲಿ ವ್ಯಕ್ತಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದುಒತ್ತಾಯಿಸಿದ್ದಾರೆ.ಪೊಲೀಸರು ಸಮಗ್ರ ತನಿಖೆ ನಡೆಸಿ ಪತ್ರಿಕಾ ವೃತ್ತಿಯ ಹೆಸರನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಪತ್ರಿಕೆ ಹಾಗೂ ಸುದ್ದಿ ವಾಹಿನಿ ಗಳನ್ನು ನಡೆಸುವುದು ಅತ್ಯಂತ ಸವಾಲಿನ ಕೆಲಸ. ಸರ್ಕಾರಿ ಮತ್ತು ಖಾಸಗಿ ಜಾಹೀರಾತುಗಳ ಆದಾಯವನ್ನೇ ಅವಲಂಬಿಸಿರುವ ಅನೇಕ ಮಾಧ್ಯಮ ಸಂಸ್ಥೆಗಳು ಆರ್ಥಿಕ ಸಂಕಷ್ಟಎದುರಿಸುತ್ತಿವೆ . ಅಧಿಕೃತ ಗುರುತಿನ ಚೀಟಿ ಪರಿಶೀಲಿಸದೆ ಯಾರಿಗೂ ಹಣ ನೀಡಬಾರದು ಎಂದು ಸಾರ್ವಜನಿಕರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಕೊಪ್ಪ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮನವಿ ಮಾಡಿದೆ.