ಕನ್ನಡಪ್ರಭ ವಾರ್ತೆ ತುರುವೇಕೆರೆ
ಕಾರ್ಪೋರೇಟ್ ಕಂಪನಿಗಳಿಗೆ ಸಾವಿರಾರು ಹೆಕ್ಟೆರ್ ಭೂಮಿಯನ್ನು ಕಡಿಮೆ ಬೆಲೆಗೆ ನೀಡುವ ಸರ್ಕಾರಗಳು ಬಗರ್ ಹುಕುಂ ಸಾಗುವಳಿ ಮಾಡಿದ ಜಮೀನನ್ನು ರೈತರಿಗೆ ಮುಂಜೂರು ಮಾಡಿಕೊಡಲು ಮೀನಮೇಷ ಏಣಿಸುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತಸಂಘ (ಕೆ ಪಿ ಆರ್ ಎಸ್) ಜಿಲ್ಲಾಧ್ಯಕ್ಷ ಚನ್ನಬಸವಯ್ಯ ಆರೋಪಿಸಿದರು. ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕು ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್) ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಬಡ, ಕೂಲಿ ಕಾರ್ಮಿಕರು, ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಾವಿರಾರು ಜನರು ಸುಮಾರು ೪೦-೫೦ ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಹಲವಾರು ಸಾಗುವಳಿದಾರರು ಲಕ್ಷಾಂತರ ರು.ಗಳನ್ನು ಖರ್ಚು ಮಾಡಿ ಕೊಳವೆ ಬಾವಿ ತೆಗೆಸಿ ವಿದ್ಯುತ್ ಸಂಪರ್ಕ ಪಡೆದು ತೋಟಗಳನ್ನು ಮಾಡಿಕೊಂಡು ಕೃಷಿ ಜೀವನ ನಡೆಸುತ್ತಿದ್ದಾರೆ. ಸಾಗುವಳಿಯ ಸಕ್ರಮ ಚೀಟಿಗಳು ಸಿಕ್ಕಿದರೂ ರೈತರು ಸ್ವಾಧೀನದಲ್ಲಿದ್ದರೂ ಕಂದಾಯ ಇಲಾಖೆ ಪಹಣಿ ಇತ್ಯಾದಿ ದಾಖಲಾತಿಯಲ್ಲಿ ಅರಣ್ಯ ಭೂಮಿ, ಗೋಮಾಳ, ಗೈರಾಣು ಭೂಮಿ, ಅಮೃತ ಕಾವಲ್, ಕುದುರೆ ಕಾವಲ್, ಈಚಲವನ, ಹುಲ್ಲುಗಾವಲು ಎಂದು ಪಹಣಿಯಲ್ಲಿ ಇತ್ತೀಚೆಗೆ ದಾಖಲಾಗಿದೆ. ಈ ಕಾರಣದಿಂದ ರೈತರಿಗೆ ಭೂಮಿಯನ್ನು ಸಕ್ರಮ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಾವಿರಾರು ರೈತರ ಜೀವನದ ಪ್ರಶ್ನೆಯಾಗಿದೆ. ಉಳಿಮೆದಾರ ರೈತರಿಗೆ ಭೂಮಿ ನೀಡಲು ಸರ್ಕಾರ ಹಿಂದೇಟು ಹಾಕಿ ಸಾವಿರಾರು ಎಕರೆಗಳಷ್ಟು ಸರ್ಕಾರಿ ಭೂಮಿಗಳನ್ನು ದೊಡ್ಡ ದೊಡ್ಡ ಕಾರ್ಫೋರೇಟ್ ಕಂಪನಿಗಳಿಗೆ ನೀಡುತ್ತಿವೆ. ರಾಜ್ಯ ಸರ್ಕಾರ ಕೂಡಲೇ ದೊಡ್ಡ ಕಂಪನಿಗಳಿಗೆ ಭೂಮಿ ನೀಡುವುದನ್ನು ನಿಲ್ಲಿಸಬೇಕು. ಕೂಡಲೇ ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ ಮಾಡಿ ಬಗರ್ಹುಕುಂನಲ್ಲಿ ಸಾಗುವಳಿ ಮಾಡಿದ ರೈತರಿಗೆ ತಮ್ಮ ಭೂಮಿಯನ್ನು ಸಕ್ರಮ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯ ನಂತರ ರಾಜ್ಯ ಸರ್ಕಾರಕ್ಕೆ ತಹಸೀಲ್ದಾರ್ ಎ.ಎನ್ ಕುಂ.ಇ ಅಹಮದ್ ಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಅಜ್ಜಪ್ಪ, ಜಿಲ್ಲಾ ಉಪಾಧ್ಯಕ್ಷೆ ರಾಜಮ್ಮ, ತಾಲೂಕು ಅಧ್ಯಕ್ಷ ಭೋಜರಾಜು, ತಾಲೂಕು ಕಾರ್ಯದರ್ಶಿ ಪ್ರಕಾಶ್, ಸಹ ಕಾರ್ಯದರ್ಶಿ ಪರಮೇಶ್ ಮುಖಂಡರಾದ ನಾಗರಾಜು, ಬಾಣಸಂದ್ರ ಮುರುಳಿ, ಪುಷ್ಪ, ನಾಗರತ್ನಮ್ಮ ಹಾಗೂ ಸಾಗುವಳಿದಾದರು ಸೇರಿದಂತೆ ರೈತರು ಇದ್ದರು.