ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸದ್ಯ ಸೋಮವಾರಪೇಟೆ ತಹಸೀಲ್ದಾರ್ ೨ ತಾಲೂಕುಗಳ ಅರ್ಜಿಯನ್ನು ಪರಿಶೀಲಿಸಿ ವಿಲೇವಾರಿಗೊಳಿಸಬೇಕಾಗಿರುವುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ಇದರಿಂದ ಅರ್ಜಿಗಳು ವಿಲೇವಾರಿಗೊಳ್ಳಲು ವಿಳಂಬವಾಗುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಮಳೆಯಾಗುತ್ತಿದ್ದು, ಮಳೆಯಿಂದಾಗುವ ಅನಾಹುತಗಳು ಸಂಭವಿಸಿದರೆ ಘಟನಾ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಕರ್ತವ್ಯವು ಇವರದ್ದಾಗಿದ್ದು, ಇದರಿಂದ ತಹಸೀಲ್ದಾರ್ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇದರಿಂದಾಗಿ ದಾಖಲೆ ಪತ್ರಗಳನ್ನು ನಿಗದಿತ ಸಮಯದಲ್ಲಿ ನೀಡಲು ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರಿಕೊಂಡಿದ್ದಾರೆ.
ಕೆಲವು ಸಂದರ್ಭಗಳಲ್ಲಿ ತಹಸೀಲ್ದಾರ್ ಅನ್ಯ ಕಾರ್ಯನಿಮಿತ್ತ ಅಥವಾ ಮೇಲಧಿಕಾರಗಳ ವಿಶೇಷ ಸಭೆ, ಸಚಿವರು ಹಾಗೂ ಶಾಸಕರು ಭೇಟಿಯ ಸಂದರ್ಭದಲ್ಲೂ ೨ ತಾಲೂಕುಗಳ ಮೇಲ್ವಿಚಾರಣೆಯನ್ನು ಅವರು ಮಾಡಬೇಕಾದ ಹಿನ್ನೆಲೆಯಲ್ಲಿ ಸೋಮವಾರಪೇಟೆ ಅಥವಾ ಕುಶಾಲನಗರದಲ್ಲಿ ಸಾರ್ವಜನಿಕರಿಗೆ ತಾಲೂಕು ದಂಡಾಧಿಕಾರಿ ಲಭ್ಯವಿಲ್ಲದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತಾಗುತ್ತಿದೆ.ಬೆಳೆಯುತ್ತಿರುವ ಹೋಬಳಿ ಕೇಂದ್ರಗಳಲ್ಲಿ ಕುಶಾಲನಗರ, ಸುಂಟಿಕೊಪ್ಪ, ಹೆಬ್ಬಾಲೆ ನೆಲುಹುದಿಕೇರಿ ಸೇರಿದಂತೆ ಇನ್ನಷ್ಟು ಗ್ರಾಮಗಳು ತಾಲೂಕು ಕೇಂದ್ರದ ಅಧೀನಕ್ಕೆ ಬರುತ್ತಿದ್ದು, ತಹಸೀಲ್ದಾರ್ ಅನ್ಯ ಕೆಲಸದ ನಿಮಿತ್ತ ತೆರಳಿದಾಗ ನೂರಾರು ರು. ವ್ಯಯಿಸಿ ಇಲ್ಲಿಗೆ ಆಗಮಿಸುವ ಬಡ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳು ನೆರವೇರದೆ ಹಿಂತಿರುಗುವ ಪರಿಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.