ಮಳೆಗಾಲದ ಆಪದ್ಬಾಂಧವ ಬಳಂಜಿಗೆ ಬೇಡಿಕೆ ಇಳಿಮುಖ

KannadaprabhaNewsNetwork |  
Published : Jun 20, 2024, 01:02 AM ISTUpdated : Jun 20, 2024, 01:03 AM IST
ಮಡಿಕೇರಿ ನಗರದಲ್ಲಿರುವ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದ ಬಳಿ ಬಳಂಜಿಗಳನ್ನು ಮಾರಾಟಕ್ಕಿತ್ತಿರುವುದು.  | Kannada Prabha

ಸಾರಾಂಶ

ಮಳೆಗಾಲದಲ್ಲಿ ಕೊಡಗಿನ ಜನರಿಗೆ ಬಟ್ಟೆ ಒಣಗಿಸಲು ಆಪದ್ಬಾಂಧವನಾಗಿ ಒದಗುವ ಸಲಕರಣೆ ಬಳಂಜಿ. ಆದರೆ ಈಗೀಗ ಮಳೆ ತೀವ್ರತೆ ಕಡಿಮೆಯಾಗಿರುವ ಜೊತೆಗೆ ಈ ಪಾರಂಪರಿಕೆ ವಸ್ತುವಿಗೆ ಬೇಡಿಕೆಯೂ ಕುಸಿಯುತ್ತಿದೆ. ಬಿದಿರಿನ ದೊಡ್ಡ ಬುಟ್ಟಿ ಇದು. ಅಗ್ಗಿಷ್ಟಿಕೆ ಮೇಲೆ ಮಸಿ ಕೆಂಡ ಹಾಕಿ ಅದರ ಮೇಲೆ ಬಳಂಜಿಯನ್ನು ಕವಚಿ ಮಳೆಗಾಲದಲ್ಲಿ ಒದ್ದೆಯಾದ ಬಟ್ಟೆಗಳನ್ನು ಒಣಗಿಸಲು ಹಳ್ಳಿಗರು ಮಾತ್ರವಲ್ಲ, ಪಟ್ಟಣಿಗರೂ ಬಳಂಜಿಯನ್ನು ಬಳಸುತ್ತಾರೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಮಳೆಗಾಲದಲ್ಲಿ ಕೊಡಗಿನ ಜನರಿಗೆ ಬಟ್ಟೆ ಒಣಗಿಸಲು ಆಪದ್ಬಾಂಧವನಾಗಿ ಒದಗುವ ಸಲಕರಣೆ ಬಳಂಜಿ. ಆದರೆ ಈಗೀಗ ಮಳೆ ತೀವ್ರತೆ ಕಡಿಮೆಯಾಗಿರುವ ಜೊತೆಗೆ ಈ ಪಾರಂಪರಿಕೆ ವಸ್ತುವಿಗೆ ಬೇಡಿಕೆಯೂ ಕುಸಿಯುತ್ತಿದೆ.

ಬಳಂಜಿ ಪದ ಕೊಡಗಿನ ಜನತೆಗೆ ಚಿರಪರಿಚಿತ. ಬಿದಿರಿನ ದೊಡ್ಡ ಬುಟ್ಟಿ ಇದು. ಅಗ್ಗಿಷ್ಟಿಕೆ ಮೇಲೆ ಮಸಿ ಕೆಂಡ ಹಾಕಿ ಅದರ ಮೇಲೆ ಬಳಂಜಿಯನ್ನು ಕವಚಿ ಮಳೆಗಾಲದಲ್ಲಿ ಒದ್ದೆಯಾದ ಬಟ್ಟೆಗಳನ್ನು ಒಣಗಿಸಲು ಹಳ್ಳಿಗರು ಮಾತ್ರವಲ್ಲ, ಪಟ್ಟಣಿಗರೂ ಬಳಂಜಿಯನ್ನು ಬಳಸುತ್ತಾರೆ.

ಮಳೆಗಾಲ ಆರಂಭವಾಯಿತು ಎಂದರೆ ಕುಶಾಲನಗರ ಸಮೀಪದ ಬಸವನಹಳ್ಳಿಯಿಂದ ಬಳಂಜಿ ತಯಾರಿಸಿ ವ್ಯಾಪಾರಸ್ಥರು ಮಡಿಕೇರಿಗೆ ಧಾವಿಸುತ್ತಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಭರ್ಜರಿಯಾಗಿ ಮಾರಾಟವಾಗುವ ಬಳಂಜಿಗಳು ಕೊಡಗಿನ ಜನತೆಗೆ ಇಷ್ಟ.

ಈ ವರ್ಷವೂ ಮಳೆಗಾಲ ಆರಂಭವಾಗುತ್ತಿದ್ದಂತೆ ಬಿದಿರಿನಿಂದ ತಯಾರಿಸಿದ ಬಳಂಜಿಗಳನ್ನು ಹೊತ್ತು ವ್ಯಾಪಾರಸ್ಥರು ಮಡಿಕೇರಿ ನಗರಕ್ಕೆ ಆಗಮಿಸಿದ್ದಾರೆ. ಮಡಿಕೇರಿಯ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದ ಬಳಿ ತಿರುವಿನಲ್ಲಿ ಬಳಂಜಿಗಳನ್ನು ಮಾರಾಟಕ್ಕಿಟ್ಟು ಗಿರಾಕಿಗಳ ನಿರೀಕ್ಷೆಯಲ್ಲಿ ಬಳಂಜಿ ತಯಾರಿಕರು ಕಾದು ಕುಳಿತಿರುತ್ತಾರೆ, ಶುಕ್ರವಾರದ ಸಂತೆಯ ದಿನ ಮಹದೇವ ಪೇಟೆಯಲ್ಲೂ ಬಳಂಜಿಗಳು ಲಭ್ಯ.

ಮಳೆ ಬಿರುಸು ಇಳಿಮುಖ:

ಈಗ ಕೊಡಗಿನಲ್ಲಿ ಮೊದಲಿನಂತೆ ಮಳೆಯ ಬಿರುಸು ಕಡಿಮೆಯಾಗಿದೆ. ಧಾರಾಕಾರ ಮಳೆ ಸುರಿದಾಗ ಸೂರ್ಯನ ಬಿಸಿಲೇ ಕಾಣದಿದ್ದಾಗ ಬಳಂಜಿಗಳು ಬಟ್ಟೆ ಒಣಗಿಸಲು ನೆರವಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಸುರಿಯುವ ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ಬಳಂಜಿಗಳಿಗೆ ಬೇಡಿಕೆ ತಗ್ಗಿದೆ.

ಮೂರು ಗಾತ್ರದ ಬಳಂಜಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಸಣ್ಣ ಗಾತ್ರದ ಬಳಂಜಿಗಳಿಗೆ 350 ರಿಂದ 500 ರು.ದರವಿದೆ. ಮಧ್ಯಮ ಗಾತ್ರದ ಬಳಂಜಿಗಳಿಗೆ 500 ರೂ.ದರವಿದೆ. ದೊಡ್ಡವು 800 ರು.ಗಳಿಗೆ ಬಿಕರಿಯಾಗುತ್ತಿವೆ.

ಧಾರಾಕಾರವಾಗಿ ಸುರಿಯುವ ಮಳೆ, ಮಂಜು ಮುಸುಕಿದ ವಾತಾವರಣ, ಸದಾ ತೇವದಿಂದ ಕೂಡಿರುವ ಬಟ್ಟೆಗಳು ಒಣಗಲು ಬಳಂಜಿಗಳು ಬೇಕು. ಆದರೆ ಈಗ ಅಂತಹ ವಾತಾವರಣವೇ ಇಲ್ಲ. ಹಾಗಾಗಿ ಬಳಂಜಿ ಕೊಳ್ಳುವವರು ದೂರವಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಳಂಜಿ ತಯಾರಕರು ಕಣ್ಮರೆಯಾದರೂ ಆಶ್ಚರ್ಯವಿಲ್ಲ.

...............

ಸುರಿವ ಮಳೆಯ ಪ್ರಮಾಣ ಮಾತ್ರವಲ್ಲ. ವಾಶಿಂಗ್ ಮಿಷನ್ ಅಂತಹ ವಿದ್ಯುತ್ ಉಪಕರಣಗಳು ಬಂದ ಬಳಿಕ ಬಳಂಜಿಗಳಿಗೆ ಬೇಡಿಕೆ ವಿಪರೀತವಾಗಿ ತಗ್ಗಿವೆ. ವರ್ಷಗಳು ಉರುಳಿದಂತೆ ಜನಮಾನಸದಿಂದ ಬಳಂಜಿಗಳು ದೂರವಾಗುತ್ತಿವೆ. ಬಿದಿರು ದುಬಾರಿಯಾಗಿದೆ. ಕೆಲಸವೂ ಅಧಿಕ ತಯಾರಿಸಿದ ಬಳಂಜಿಗಳಿಗೆ ಬೇಡಿಕೆ ತಗ್ಗಿದೆ.

-ಗೋಪಾಲ್‌, ಬಳಂಜಿ ತಯಾರಕ.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ