ಹುಬ್ಬಳ್ಳಿ:
ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡು ಬಿಜೆಪಿ ಶಿಸ್ತು ಸಮಿತಿಗೆ ರಾಜೀನಾಮೆ ನೀಡಿದ್ದ ಲಿಂಗರಾಜ ಪಾಟೀಲ ಅವರನ್ನು ಬಿಜೆಪಿ ಮುಖಂಡರು ಸಮಾಧಾನ ಪಡಿಸಿದ್ದಾರೆ. ಮುಂದೆ ಅವಕಾಶ ಸಿಕ್ಕೇ ಸಿಗುತ್ತವೆ. ಸ್ವಲ್ಪ ತಾಳ್ಮೆಯಿಂದಿರಿ ಎಂದು ಸಮಾಧಾನ ಪಡಿಸಿದ್ದಾರೆ.ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹುಬ್ಬಳ್ಳಿಗೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಲಿಂಗರಾಜ ಪಾಟೀಲ ಅವರನ್ನು ಭೇಟಿ ಮಾಡಿ ಸಮಾಧಾನದಿಂದ ಇರಿ. ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಪಕ್ಷದಲ್ಲಿ ಮುಂದೆ ಒಳ್ಳೆಯ ಅವಕಾಶ ದೊರೆಯಲಿವೆ ಎಂದು ಭರವಸೆ ನೀಡಿದರು. ಅಲ್ಲದೇ, ಸಿಹಿ ತಿನಿಸುವ ಮೂಲಕ ಸಮಾಧಾನಪಡಿಸಿದರು.
ಇದಕ್ಕೂ ಮುನ್ನ ಲಿಂಗರಾಜ ಪಾಟೀಲ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ ಸಮಾಧಾನ ಪಡಿಸಿದರು. ಸಚಿವರು, ಮುಂದೆ ಅವಕಾಶಗಳು ಬರಲಿವೆ. ಚಿಂತೆ ಮಾಡಬೇಡಿ. ಪಕ್ಷ ಸ್ಥಾನಮಾನ ಕೊಟ್ಟೆ ಕೊಡುತ್ತದೆ ಎಂದು ಭರವಸೆ ನೀಡಿದರು.ಈ ವೇಳೆ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮುಖಂಡರಾದ ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ವೀರೇಶ ಸಂಗಳದ ಸೇರಿದಂತೆ ಹಲವರಿದ್ದರು.
ಟಿಕೆಟ್ ತಪ್ಪಿದ್ದರಿಂದ ಬೇಸರಗೊಂಡು ಶಿಸ್ತು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಟಿಕೆಟ್ ಮರುಪರಿಶೀಲಿಸಲು ಒಂದು ವಾರ ಗಡವು ನೀಡಿದ್ದರು. ಇದೀಗ ಇಬ್ಬರು ನಾಯಕರು ಸಮಾಧಾನಪಡಿಸಿದ್ದು ಸಂಕನೂರ ಪರವಾಗಿ ಲಿಂಗರಾಜ ಪಾಟೀಲ ಕೆಲಸ ಮಾಡುವುದು ಬಹುತೇಕ ನಿಶ್ಚಿತವಾದಂತಾಗಿದೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇಬ್ಬರು ಮಾತನಾಡಿಸಿದ್ದಾರೆ. ಮುಂದೆ ಅವಕಾಶ ಸಿಗುತ್ತವೆ ಎಂದು ಭರವಸೆ ನೀಡಿದ್ದಾರೆ.
ಲಿಂಗರಾಜ ಪಾಟೀಲ, ಬಿಜೆಪಿ ಹಿರಿಯ ಮುಖಂಡ