ಬಳ್ಳಾರಿ: ರಾಜ್ಯದ ಪ್ರಮುಖ ರೈಲ್ವೆ ಯೋಜನೆಯಾದ ಬಳ್ಳಾರಿ- ಸಿರುಗುಪ್ಪ- ಸಿಂಧನೂರು -ಲಿಂಗಸುಗೂರು ನೂತನ ರೈಲ್ವೆ ಮಾರ್ಗ ನಿರ್ಮಾಣದ ಕೆಲಸ ಆರಂಭಿಸುವಂತೆ ಕೋರಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ನೇತೃತ್ವದ ನಿಯೋಗ ಕೇಂದ್ರ ರೈಲ್ವೆಯ ರಾಜ್ಯ ಮಂತ್ರಿ ವಿ.ಸೋಮಣ್ಣ, ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ್ ಶೆಟ್ಟರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಕಳೆದ 30 ವರ್ಷಗಳಿಂದ ಬಳ್ಳಾರಿ ಜನತೆ ಉದಯ ರೈಲಿನ ಬೇಡಿಕೆ ಇಡುತ್ತಿದ್ದೇವೆ. ಬಳ್ಳಾರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೊಲ್ಲಾಪುರ -ಮುನಗೂರು -ಎಕ್ಸ್ಪ್ರೆಸ್ ರೈಲು ರೈಲ್ವೆ ಬಜೆಟಿನಲ್ಲಿ ಘೋಷಣೆಯಾಗಿ ಲೋಕಸಭೆಯಿಂದ ಅನುಮೋದನೆ ಪಡೆದ ರೈಲಾಗಿತ್ತು. ಕಳೆದ ಒಂದು ವರ್ಷದಿಂದ ಈ ರೈಲು ನಿಲುಗಡೆ ಆಗಿದೆ. ಶಿವಮೊಗ್ಗ- ಚೆನ್ನೈ ಬೈ ವೀಕ್ಲಿ ರೈಲುಗಳು ನಿಲುಗಡೆ ಯಾಗಿದ್ದು, ಈ ರೈಲುಗಳನ್ನು ಪುನಾರಾರಂಭಿಸಬೇಕು. ಬಳ್ಳಾರಿ ರೈಲ್ವೆ ನಿಲ್ದಾಣದ ಆಧುನಿಕರಣ ಬೇಗನೆ ಪೂರ್ಣಗೊಳ್ಳಬೇಕು. ಜೊತೆಗೆ ರಸಗೊಬ್ಬರಗಳ ಡೌನ್ಲೋಡಿಂಗ್ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎಂದು ಹೋರಾಟ ಸಮಿತಿಯ ಮುಖಂಡರು ಸಚಿವರಲ್ಲಿ ಕೇಳಿಕೊಂಡರು.
ನಿಯೋಗದಲ್ಲಿ ಡಿಆರ್ಯುಸಿಸಿ ಸದಸ್ಯ ಕೆ.ಎಂ.ಕೊಟ್ರೇಶ್, ತಾಲೂಕು ಸಮಿತಿ ಅಧ್ಯಕ್ಷ ಪಿ.ಯೋಗರಾಜ್, ಗೋನಾಳ್ ರಾಜಶೇಖರಗೌಡ, ದಮ್ಮೂರು ಶೇಖರ್, ಪಲ್ಲೇದ ಪಂಪಾಪತಿ, ಸಿರುಗುಪ್ಪ ನಗರಸಭೆ ಮಾಜಿ ಸದಸ್ಯ ನಟರಾಜ್, ಮಂಜುನಾಥ ಮಹಾದೇವ, ಚಾಗಿ ಸುಬ್ಬಯ್ಯ, ಕುಂಟನಹಾಳು ಮಲ್ಲಿಕಾರ್ಜುನ ಸೇರಿದಂತೆ 25ಕ್ಕೂ ಹೆಚ್ಚು ಜನರು ನಿಯೋಗದಲ್ಲಿದ್ದರು.