ಪೌರ ಕಾರ್ಮಿಕರ ನೇರ ನೇಮಕಾತಿಗೆ ಒತ್ತಾಯ

KannadaprabhaNewsNetwork |  
Published : Jun 10, 2025, 09:11 AM IST
ಫೋಟೋ 9ಎಚ್‌ಎಸ್‌ಡಿ4: ಹೊರ ಗುತ್ತಿಗೆ ರದ್ದುಪಡಿಸಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳುವಂತೆ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು. | Kannada Prabha

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹೊರಗುತ್ತಿಗೆ ರದ್ದುಪಡಿಸಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡು ಸರ್ಕಾರ ಸಂಬಳ ನೀಡಬೇಕೆಂದು ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಒತ್ತಾಯಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರಗುತ್ತಿಗೆ ರದ್ದುಪಡಿಸುವಂತೆ 2017ರಿಂದ ಹೋರಾಟ ನಡೆಸುತ್ತಿದ್ದೇವೆ. ಪೌರ ಕಾರ್ಮಿಕರು, ವಾಹನ ಚಾಲಕರು, ಗಟಾರದಲ್ಲಿ ಕೆಲಸ ಮಾಡುವವರು, ಕಸ ವಿಂಗಡಿಸುವವರು ಹೀಗೆ ಹಲವು ಬಗೆಯ ಪೌರ ಕಾರ್ಮಿಕರು ಆರೋಗ್ಯ ಹಾಗೂ ಜೀವನ ಭದ್ರತೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ 39 ಸಾವಿರ ಪೌರಕಾರ್ಮಿಕರಿದ್ದು, 29,300 ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಉಳಿದ ಪೌರ ಕಾರ್ಮಿಕರನ್ನು ಯಾವಾಗ ನೇಮಕ ಮಾಡುತ್ತೀರೆಂಬುದು ಸರ್ಕಾರಕ್ಕೆ ನಮ್ಮ ಪ್ರಶ್ನೆ?

ಬೇರೆ ಜಿಲ್ಲೆಗಳಲ್ಲಿ ಪೌರ ಕಾರ್ಮಿಕರಿಗೆ ಸರ್ಕಾರದಿಂದ ನಿವೇಶನ ವಿತರಿಸಲಾಗಿದೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಪೌರ ಕಾರ್ಮಿಕರಿಗೆ ನಿವೇಶನಗಳು ಸಿಗಬೇಕು. ಕಸ ಗುಡಿಸುವವರು ಹಾಗೂ ಘಟಾರದಲ್ಲಿ ಕೆಲಸ ಮಾಡುವವರನ್ನು ಸರ್ಕಾರ ತುಚ್ಚವಾಗಿ ಕಾಣುತ್ತಿರುವುದು ಸರಿಯಲ್ಲ. ಒಳ ಮೀಸಲಾತಿ ಜಾರಿಯಾಗುವತನಕ ನೇಮಕಾತಿಯನ್ನು ತಡೆಹಿಡಿದಿದ್ದೇವೆ ಎಂಬ ನೆಪ ಹೇಳುವುದು ಬೇಡ. ತುರ್ತಾಗಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂಬುದು ನಮ್ಮ ಬೇಡಿಕೆ ಎಂದರು.

ಕೆ.ಬಿ.ಓಬಳೇಶ್ ಮಾತನಾಡಿ, ಹಿಂದಿನ ಬಿಜೆಪಿ ಈಗಿನ ಕಾಂಗ್ರೆಸ್ ಸರ್ಕಾರಗಳು ನಮ್ಮ ಹೋರಾಟಕ್ಕೆ ಮಣಿದು ಎಲ್ಲಾ ಪೌರ ಕಾರ್ಮಿಕರನ್ನು ಖಾಯಂ ಗೊಳಿಸುವುದಾಗಿ ಭರವಸೆ ಕೊಟ್ಟಿದ್ದವು. ಸಿಎಂ ಸಿದ್ದರಾಮಯ್ಯನವರು ಹೇಳಿದಂತೆ ನಡೆದುಕೊಳ್ಳಲಿ. ಎರಡು ವರ್ಷಗಳಾದರೂ ನಮ್ಮ ಬೇಡಿಕೆ ಈಡೇರಿಲ್ಲ. ಕಸ ವಿಂಗಡಣೆ ಮಾಡುವವರು ಹಾಗೂ ಚರಂಡಿ ಕೆಲಸ ಮಾಡುವವರ ಸ್ಥಿತಿ ನೋಡುವಂತಿಲ್ಲ. ಜಿಲ್ಲೆಯಲ್ಲಿ ಪೌರಕಾರ್ಮಿಕರನ್ನು ಕಸಕ್ಕಿಂತ ಕಡೆಯಾಗಿ ಕಾಣಲಾಗುತ್ತಿದೆ. ರಾಜ್ಯ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕು. 2018ರಿಂದ ಇಲ್ಲಿಯವರೆಗೂ ರಾಜ್ಯದಲ್ಲಿ 148 ಪೌರ ಕಾರ್ಮಿಕರು ನಿಧನರಾಗಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. 1010 ಪೌರ ಕಾರ್ಮಿಕರು ಚಿತ್ರದುರ್ಗ ಜಿಲ್ಲೆಯಲ್ಲಿದ್ದಾರೆ. ನಮ್ಮ ನ್ಯಾಯಯುತವಾದ ಬೇಡಿಕೆಗಳು ಶೀಘ್ರವೇ ಈಡೇರಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಡಿ.ದುರುಗೇಶ್, ಜಗದೀಶ್, ರಾಜಣ್ಣ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!