ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮೂಡುಬಿದಿರೆ ಪುರಸಭೆಯ ಮಾಸಿಕ ಸಭೆ ಗುರುವಾರ ನಡೆದಿದ್ದು, ಭಾರಿ ಮಳೆಯ ನಡುವೆಯೂ ನಗರದ ಕೆಲ ಭಾಗದಲ್ಲಿ ನೀರಿಗೆ ಹಾರಾಕಾರ ಇರುವ ವಿಚಾರ ಬೆಳಕಿಗೆ ಬಂದಿದೆ.ಪುರಸಭಾ ಅಧ್ಯಕ್ಷೆ ಜಯಶ್ರೀ ಅಧ್ಯಕ್ಷತೆ ವಹಿಸಿದ್ದರು. ಸ್ವರಾಜ್ಯ ಮೈದಾನದಿಂದ ಆಳ್ವಾಸ್ ತನಕದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ಮಣ್ಣು ಹಾಕಿ ಮುಚ್ಚಿದ್ದರಿಂದಾಗಿ ಮುಖ್ಯರಸ್ತೆಯೇ ಮಳೆಯ ನೀರು ಹೋಗುವ ಚರಂಡಿಯಾಗಿ ಪರಿವರ್ತನೆಯಾಗಿದೆ. ಆದಷ್ಟು ಶೀಘ್ರ ಚರಂಡಿಯನ್ನು ಬಿಡಿಸಿ ಮಳೆ ನೀರು ಸಾರ್ವಜನಿಕರ ಮೇಲೆ ಎರಚದಂತೆ ಕ್ರಮಕೈಗೊಳ್ಳಬೇಕೆಂದು ಎಲ್ಲ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ಇದಕ್ಕೆ ರಾಜೇಶ್ ನಾಯಕ್, ಸುರೇಶ್ ಪ್ರಭು, ಕೊರಗಪ್ಪ ಹಾಗೂ ಇತ್ಯಾದಿಯರು ಪೂರ್ಣ ಬೆಂಬಲ ಸೂಚಿಸಿ ನಾಲ್ಕಾರು ದಿನಗಳೊಳಗೆ ಕಾಮಗಾರಿ ಮುಗಿಯುವಂತೆ, ಶಾಲೆ ಪ್ರಾರಂಭವಾಗುತ್ತಿರುವುದರಿಂದ ಮತ್ತಷ್ಟು ಶೀಘ್ರ ಕಾಮಗಾರಿ ನಡೆದು ನಡೆದಾಡುವ ಮಕ್ಕಳ ಮೇಲೆ ಕೆಸರು ನೀರು ಹಾರದಂತೆ ಮಾಡಲೇಬೇಕೆಂದು ಕೈಮುಗಿದು ಕೇಳಿಕೊಂಡರು. ಕಳೆದ ಒಂದು ವಾರದಿಂದ ಅವ್ಯಾಹತವಾಗಿ ಮಳೆ ಸುರಿಯುತ್ತಿದ್ದಾಗಿಯೂ ವಿವೇಕಾನಂದ ನಗರ, ಮಂಜುನಾಥ ನಗರಗಳಲ್ಲಿ ಕುಡಿಯುವ ನೀರಿಗಾಗಿ ಜನರು ಒದ್ದಾಡುತ್ತಿದ್ದಾರೆ, ಕನಿಷ್ಠ ಇವತ್ತಾದರೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಕೊರಗಪ್ಪ ಮುಖ್ಯಾಧಿಕಾರಿಯಲ್ಲಿ ಕೇಳಿಕೊಂಡರು. ಪರಿಸ್ಥಿತಿ ಅರ್ಥ ಮಾಡಿಕೊಂಡ ಸದಸ್ಯರೆಲ್ಲರೂ ತಮ್ಮ ಬೆಂಬಲವನ್ನು ಕೊರಗಪ್ಪರಿಗೆ ವ್ಯಕ್ತಪಡಿಸಿದ್ದರು. ಪುರಸಭಾ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಅವರು, ಅಂಗಜಾಲು ಪ್ರದೇಶದಲ್ಲಿ 25 ಮನೆಗೆ ನೀರು ನುಗ್ಗಿದೆ. ಆ ಪ್ರದೇಶದಲ್ಲಿದ್ದ 15 ಅಡಿ ಹೊಂಡವನ್ನು ಮಣ್ಣು ಹಾಕಿ ಮುಚ್ಚಿದ ಕಾರಣ ಈ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ತಕ್ಷಣ ಆ ಹೊಂಡದ ಮಣ್ಣನ್ನು ಜೆಸಿಬಿ ಯಿಂದ ನಿವಾರಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕೆಂದು ಅಧಿಕಾರಿಗಳಲ್ಲಿ ಕೇಳಿಕೊಂಡರು.ಹುಡ್ಕೋ ಕಾಲೋನಿಯಲ್ಲಿ ಪುರಸಭೆಯ ಕುಡಿಯುವ ನೀರಿನ ಟ್ಯಾಂಕಿ ಇದ್ದೂ, ಪುರಸಭೆಯವರು ಜಾಕ್ವಾಲನ್ನು ಸರಿಪಡಿಸದ ಕಾರಣ ಕುಡಿಯಲು ನೀರಿಲ್ಲದಂತಾಗಿದೆ ಎಂದು ಸುರೇಶ್ ಪ್ರಭು ನೇರವಾಗಿ ಆಪಾದಿಸಿದರು. ಇದಕ್ಕೆ ಪೂರಕವಾಗಿ ಕೊರಗಪ್ಪ ಹಾಗೂ ಪಿ ಕೆ ಥೋಮಸ್ ತಮ್ಮ ಬೆಂಬಲವನ್ನು ಸೂಚಿಸಿದರು. ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಸುಮಾರು ಎರಡುವರೆ ಸಾವಿರಕ್ಕೂ ಹೆಚ್ಚು ಮನೆಗಳಿಗೆ ಸ್ವಂತ ಬಾವಿಯಿಲ್ಲ, ಅವರೆಲ್ಲರೂ ಪುರಸಭೆಯ ನೀರಿಗಾಗಿ ಕಾಯುತ್ತಿರುತ್ತಾರೆ ಕಳೆದ ನಾಲ್ಕು ದಿನಗಳಿಂದ ಹುಡ್ಕೋ ಕಾಲೋನಿಯಲ್ಲಿ ನೀರು ಸರಬರಾಜು ಇಲ್ಲದ ಕಾರಣ , ಪದೇಪದೇ ಹೇಳಿದರೂ ಟ್ಯಾಂಕರ್ ನೀರು ಪೂರೈಸದ ಕಾರಣ ಜನರು ವಿಲವಿಲ ಒದ್ದಾಡುತ್ತಿದ್ದಾರೆ. ತಕ್ಷಣ ನೀರನ್ನು ಪೂರೈಸಬೇಕೆಂದು ಕೊರಗಪ್ಪ ಆಗ್ರಹಿಸಿದರು. ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ ಹಾಜರಿದ್ದರು.