ಲಕ್ಷ್ಮೇಶ್ವರ ಪಟ್ಟಣದಲ್ಲಿನ ಬಜಾರ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಆಗ್ರಹಿಸಿದರು.
ಲಕ್ಷ್ಮೇಶ್ವರ: ಪಟ್ಟಣದಲ್ಲಿನ ಬಜಾರ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಆಗ್ರಹಿಸಿದರು. ಸಂಘದ ಸದಸ್ಯ ಚಂಬಣ್ಣ ಬಾಳಿಕಾಯಿ ಮಾತನಾಡಿ, ಪಟ್ಟಣದ ಪ್ರಮುಖ ರಸ್ತೆಯಾಗಿರುವ ಬಜಾರ್ ರಸ್ತೆಯು ಕಳೆದ ಎರಡು ತಿಂಗಳಿಂದ ಆರಂಭವಾಗಿದ್ದರೂ ಕೇವಲ ೨೦೦ ಮೀಟರ್ ರಸ್ತೆಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸಾಧ್ಯವಾಗುತ್ತಿಲ್ಲ. ರಸ್ತೆ ಕೆಲಸ ಅಪೂರ್ಣಗೊಂಡಿರುವುದರಿಂದ ಸಾರ್ವಜನಿಕರಿಗೆ ಬಜಾರದಲ್ಲಿ ಸಂಚಾರ ಮಾಡುವುದು ದುಸ್ತರವಾಗಿದೆ. ಅದರಲ್ಲಿಯೂ ಹಿರಿಯ ನಾಗರಿಕರು ಇಲ್ಲಿ ನಡೆದಾಡಲು ಆಗುತ್ತಿಲ್ಲ. ಶುಕ್ರವಾರ ಸಂತೆಗೆ ಬಂದ ವೃದ್ಧ ಮಹಿಳೆಯರು, ಮಕ್ಕಳು ಜಾರಿ ಬೀಳುತ್ತಿದ್ದಾರೆ. ಕಾರಣ ರಸ್ತೆ ಕಾಮಗಾರಿ ಪೂರ್ಣಗೊಳಿಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಹಿರಿಯ ನಾಗರಿಕರ ಸಂಘದ ವತಿಯಿಂದ ಬಜಾರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಯುವ ಮುಖಂಡ ನಾಗರಾಜ ಚಿಂಚಲಿ ಮಾತನಾಡಿ, ರಸ್ತೆ ಕಾಮಗಾರಿಗೆ ಕಳಪೆ ಗುಣಮಟ್ಟದ ಮಣ್ಣನ್ನು ಬಳಸಲಾಗುತ್ತಿದೆ. ಗುತ್ತಿಗೆದಾರರು ಈಗ ರಸ್ತೆ ಹಾಕಿರುವ ಮಣ್ಣನ್ನು ಬದಲಿಸಿ ಕೆಂಪು ಗೊರಸು ಮಣ್ಣನ್ನು ಹಾಕಬೇಕು. ಇಲ್ಲದಿದ್ದರೆ ರಸ್ತೆಯಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದರು.ಈ ವೇಳೆ ಮಂಜುನಾಥ ಮಾಗಡಿ, ಚನ್ನಪ್ಪ ಕೋಲಕಾರ, ಕುಬೇರಪ್ಪ ಮಹಾಂತಶೆಟ್ಟರ, ಎಸ್.ಪಿ. ಪಾಟೀಲ, ಸಿ.ಎಸ್. ಕೋಟಿಮಠ, ಎಸ್.ಜಿ. ತಾಳಿಕೋಟಿಮಠ, ದ್ಯಾಮನಗೌಡ ಪಾಟೀಲ, ನೀಲಪ್ಪ ಕರ್ಜಕಣ್ಣವರ, ನಾಗರಾಜ ಚಿಂಚಲಿ, ಮಂಜುನಾಥ ಮಾಗಡಿ, ಚಂದ್ರಶೇಖರ ಹೂಗಾರ, ಶಕುಂತಲಾ ಅಳಗವಾಡಿ, ಈರಣ್ಣ ಮಡಿವಾಳರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.