ಹೊಸಪೇಟೆ: ಈ ಭಾಗದ ರೈಲ್ವೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರಿಗೆ ಶುಕ್ರವಾರ ನಗರದ ರೈಲ್ವೆ ನಿಲ್ದಾಣದದಲ್ಲಿ ಹಗರಿಬೊಮ್ಮನಹಳ್ಳಿ ನಂದಿಪುರ ಮಠದ ಮಹೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಮನವಿಪತ್ರ ಸಲ್ಲಿಸಿದರು.
ಬಳ್ಳಾರಿ- ಹೊಸಪೇಟೆ ಪ್ರದೇಶವು ರಾಜ್ಯದಲ್ಲಿ ಅತ್ಯಂತ ತ್ವರಿತವಾಗಿ ಬೆಳವಣಿಗೆಯಾಗುವ ಕೈಗಾರಿಕಾ ಪ್ರದೇಶವಾಗಿದೆ. ಈ ಮಾರ್ಗದಲ್ಲಿ ಅಧಿಕ ರೈಲುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕಾರಿಗನೂರಿನಲ್ಲಿ ಪ್ರಯಾಣಿಕರ ಗಾಡಿಗಳ ಕೋಚಿಂಗ್ ನಿರ್ವಹಣೆ ಮತ್ತು ದುರಸ್ತಿ ಕಾರ್ಯಾಗಾರವನ್ನು ಸ್ಥಾಪಿಸಬೇಕು.
ಕೊಟ್ಟೂರು- ದಾವಣಗೆರೆ ಮಾರ್ಗವಾಗಿ ಹೊಸಪೇಟೆ- ತುಮಕೂರು ನಡುವೆ ದಿನವಹಿ ಪ್ಯಾಸೆಂಜರ್ ರೈಲನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.ಈ ಹಿಂದೆ ಹುಬ್ಬಳ್ಳಿ- ಗುಂತಕಲ್ ನಡುವೆ(ಗಾಡಿ ಸಂಖ್ಯೆ ೦೭೩೩೭/೦೭೩೩೮) ರೈಲು ಸಂಚಾರವಿತ್ತು. ಆದರೆ ಕಳೆದ ಆರು ತಿಂಗಳಿಂದ ಯಾವುದೇ ಕಾರಣವಿಲ್ಲದೆ ಈ ರೈಲನ್ನು ತೋರಣಗಲ್ಲು ವರೆಗೆ ಮಾತ್ರ ಸಂಚರಿಸುತ್ತಿದೆ. ಇದರಿಂದ ವೈದ್ಯಕೀಯ ಚಿಕಿತ್ಸೆ, ಶಾಲಾ, ಕಾಲೇಜು, ವ್ಯಾಪಾರ- ವಹಿವಾಟು ನಡೆಸಲು ಬಳ್ಳಾರಿ ಕಡೆಗೆ ಹೋಗಲು ತೊಂದರೆಯಾಗುತ್ತದೆ. ಈ ರೈಲನ್ನು ಕೂಡಲೇ ಬಳ್ಳಾರಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡತಿನಿ, ಅರವಿಂದ ಜಾಲಿ, ಪಿ.ಆರ್. ತಿಪ್ಪೇಸ್ವಾಮಿ, ಡಿ. ಪ್ರಭಾಕರ್, ಶಿವಕುಮಾರ್ ಸಾಂಚಿ, ಸತೀಶ್ ಪಾಟೀಲ್, ಉಮಾ ಶಂಕರ್, ಎಚ್.ಎಂ. ಮಂಜುನಾಥ, ಜೆ. ವರುಣ್, ಪಲ್ಲೇದ್ ಸಿದ್ದೇಶ್, ಎಲ್. ರಮೇಶ್, ಬಿ. ಲೋಕೇಶ್, ಬಿ. ವಿಶ್ವನಾಥ, ಬಿ. ಮಂಜುನಾಥ ಮತ್ತಿತರರಿದ್ದರು.