ವಿಶ್ವಹಿಂದೂ ಪರಿಷತ್, ಬಜರಂಗದಳ ರಾಜ್ಯ ಸರ್ಕಾರಕ್ಕೆ ಆಗ್ರಹ
ಶ್ರೀಗುರು ದತ್ತಾತ್ರೇಯ ಪೀಠ ಮತ್ತು ನಾಗೇನಹಳ್ಳಿಯ ಬಾಬಾಬುಡನ್ ದರ್ಗಾದ ಬಗ್ಗೆ ಸರ್ಕಾರಿ ದಾಖಲೆಗಳ ಪ್ರಕಾರವೇ ವೈಜ್ಞಾನಿಕವಾಗಿ ಉತ್ಖನನ ಮತ್ತು ತನಿಖೆಯಾಗಬೇಕು ಎಂದು ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಘಟನೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ್, ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ತಂತ್ರಜ್ಞರು, ಇತಿಹಾಸ ತಜ್ಞರು ಹಾಗೂ ಪುರಾತತ್ವ ಇಲಾಖೆಯಿಂದ ವೈಜ್ಞಾನಿಕವಾಗಿ ತನಿಖೆಯಾಗಿ ಸರಿಯಾದ ಮಾಹಿತಿ ಬರಂಗವಾಗಬೇಕು ಎಂದು ಬಾಬಾಬುಡನ್ ದರ್ಗಾ ಹೆರಿಟೇಜ್ ಕೌನ್ಸಿಲ್ ಎನ್ನುವ ಸಂಘಟನೆ ಒತ್ತಾಯಿಸಿರುವುದನ್ನು ಸ್ವಾಗತಿಸುತ್ತೇವೆ. ಇದರ ಜೊತೆ ನಾಗೇನಹಳ್ಳಿಯ ಬಾಬಾಬುಡನ್ ದರ್ಗಾದ ಬಗ್ಗೆಯೂ ವೈಜ್ಞಾನಿಕ ತನಿಖೆ ಆಗಬೇಕು ಎಂದು ಆಗ್ರಹಿಸುತ್ತೇವೆ ಎಂದು ತಿಳಿಸಿದರು.ದತ್ತಾತ್ರೇಯ ಗುಹೆಯ ಒಳಭಾಗದಲ್ಲಿ 4 ಗೋರಿಗಳಿವೆ ಎಂದು ಕೆಲವರು ಹೇಳುತ್ತಾರೆ. ಈ ಗೋರಿಗಳ ಬಗ್ಗೆ ವೈಜ್ಞಾನಿಕ ಉತ್ಖನನ ನಡೆದು ತನಿಖೆ ನಡೆಸಿ ನಿಜಾಂಶ ಸ್ಪಷ್ಟವಾಗಬೇಕು ಎಂದು ಒತ್ತಾಯಿಸಿದರು.
-- ಬಾಕ್ಸ್---
ಮಾಣಿಕ್ಯಾಧಾರ ಬಳಿ ಹೊಸದಾಗಿ ಗೋರಿ ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ಮುತ್ತಿನ ಕರೆ ಬಳಿ ಒಂದು ಗೋರಿ ರೀತಿ ನಿರ್ಮಾಣವೊಂದು ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯ ಗ್ರಾಪಂ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಟಿ.ರಂಗನಾಥ್ ಒತ್ತಾಯಿಸಿದರು.