ಗಂಗಾವತಿ: ಎರಡು-ಮೂರು ದಿನದಲ್ಲಿ ಅಂಜನಾದ್ರಿ ಪರ್ವತದಲ್ಲಿ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರ ಸಮನ್ವಯ ಕೊರತೆಯಿಂದ ಸಿದ್ಧತೆಯಲ್ಲಿ ಲೋಪ ಕಂಡುಬರುತ್ತಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಆರೋಪಿಸಿದರು.
ಅಂಜನಾದ್ರಿಗೆ ಲಕ್ಷಗಟ್ಟಲೇ ಭಕ್ತರು, ಮಾಲಾಧಾರಿಗಳು ಆಗಮಿಸಲಿದ್ದಾರೆ. ಭಕ್ತರಿಗೆ ಅನುಕೂಲ ಕಲ್ಪಿಸಿಕೊಡುವ ಜವಾಬ್ದಾರಿ ಜಿಲ್ಲಾ, ತಾಲೂಕು ಆಡಳಿತದ ಮೇಲೆರುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗಂಗಾವತಿ ಶಾಸಕರ ಸಮನ್ವಯ ಕೊರತೆಯಿಂದಾಗಿ ಸಿದ್ಧತೆಯಲ್ಲಿ ಲೋಪ ಕಾಣುತ್ತಿದೆ ಎಂದು ಆರೋಪಿಸಿದರು.ಕಳೆದ 10-15 ವರ್ಷಗಳಿಂದ ಹನುಮಮಾಲೆ ಕಾರ್ಯಕ್ರಮ ನಡೆಯುತ್ತಿದೆ. ಅಂಜನಾದ್ರಿಗೆ ಬರುವ ಭಕ್ತರ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಿದೆ. ಈ ವರ್ಷ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆ ಇದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ, ಕುಡಿಯುವ ನೀರು, ಪಾರ್ಕಿಂಗ್, ಶೌಚಾಲಯ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗುತ್ತದೆ. 15 ದಿನಗಳಿಂದ ವ್ಯವಸ್ಥೆ ಕೈಗೊಳ್ಳಬೇಕು. ಆದರೆ ಇದುವರೆಗೂ ಯಾವುದೇ ವ್ಯವಸ್ಥೆ ಕೈಗೊಂಡಿರುವುದು ಕಾಣುತ್ತಿಲ್ಲ. ಕಾರ್ಯಕ್ರಮ ದಿನದ ಹೊರತುಪಡಿಸಿದರೂ ನಿತ್ಯ ದೂರದಿಂದ ಭಕ್ತರು ಆಗಮಿಸುತ್ತಾರೆ. ಅವರಿಗೆ ಅವಶ್ಯಕ ಸೌಲಭ್ಯ ಒದಗಿಸುವುದು ಜನಪ್ರತಿನಿಧಿಗಳು, ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ ಗಂಗಾವತಿ ಶಾಸಕರು, ಉಸ್ತುವಾರಿ ಸಚಿವರು ಒಟ್ಟಿಗೆ ಸೇರಿ ನಿರ್ವಹಣೆ ಮಾಡಲು ಮುಂದಾಗುತ್ತಿಲ್ಲ. ಭಾನುವಾರ ಸಚಿವರೊಬ್ಬರೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಟೀಕಿಸಿದರು.ಕೂಡಲೇ ಸಚಿವರು, ಜಿಲ್ಲಾಡಳಿತ ಅಂಜನಾದ್ರಿಗೆ ಬರುವ ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಚನ್ನಪ್ಪ ಮಳಗಿ, ಕಾಶಿನಾಥ ಚಿತ್ರಗಾರ, ಶಿವಕುಮಾರ ಅರಿಕೇರಿ, ಮುಖಂಡ ಸಿದ್ದರಾಮಸ್ವಾಮಿ, ಜಿ.ಶ್ರೀಧರ ಕೆಸರಹಟ್ಟಿ, ವೀರಭದ್ರಪ್ಪ ನಾಯಕ, ಹನುಮಂತಪ್ಪ ನಾಯಕ, ನ್ಯಾಯವಾದಿ ಎಚ್.ಸಿ. ಯಾದವ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಹೊಸಮಲಿ, ಮುಖಂಡ ಹನುಮಂತಪ್ಪ ಚೌಡ್ಕಿ, ಟಿ.ಆರ್. ರಾಯಬಾಗಿ, ಗೌರಿಶ ಬಾಗೋಡಿ ಇದ್ದರು.