7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್ಜಿ, ಕಮ್ಯುಟೇಶನ್, ಇಎಲ್ಎನ್ ಕ್ಯಾಶಮೆಂಟ್ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸ ಸರಿಪಡಿಸಿಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಲಾಗಿದೆ.
ಭಟ್ಕಳ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಲ್ಲಿನ ನಿವೃತ್ತ ಸರ್ಕಾರಿ ನೌಕರರ ಸಂಘದಿಂದ ಗುರುವಾರ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ನಿವೃತ್ತಿ ನೌಕರರಿಗೆ 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್ಜಿ, ಕಮ್ಯುಟೇಶನ್, ಇಎಲ್ಎನ್ ಕ್ಯಾಶಮೆಂಟ್ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸ ಸರಿಪಡಿಸಿಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಲಾಗಿದೆ.
ಸಹಾಯಕ ಆಯುಕ್ತೆ ಡಾ. ನಯನಾ ಅವರು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ವಿ.ಡಿ. ಆಚಾರ್ಯ, ಕಾರ್ಯದರ್ಶಿ ಕೆ.ಆರ್. ನಾಯ್ಕ, ಉಪಾಧ್ಯಕ್ಷ ಬಿ.ಐ. ಶೇಖ್, ಸದಸ್ಯರಾದ ವಿ.ಡಿ. ಮೊಗೇರ, ಜಿ.ಟಿ. ಭಟ್ಟ, ನಂದಯ್ಯ ನಾಯ್ಕ, ವೆಂಕಟೇಶ ದೇವಡಿಗ, ಪರಮೇಶ್ವರಿ ಎನ್., ಶ್ರೀಧರ ಗಣಪತಿ ಹೆಗಡೆ, ಲೋಕಾ ಬಸ್ತ್ಯಾಂವ್, ದಪೇದಾರ್, ಮುಕ್ತಾ ಕೋಟದಮಕ್ಕಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ಮುಂತಾದವರಿದ್ದರು.
ಪ್ರತಿಭಟನಾಕಾರರ ಮೇಲೆ ಕೇಸ್ ದಾಖಲಿಸಿದ್ದಕ್ಕೆ ಆಕ್ರೋಶ
ಹೊನ್ನಾವರ: ಶಿರೂರು ಗುಡ್ಡ ಕುಸಿತದಲ್ಲಿ ಸಂತ್ರಸ್ತರ ಬೇಡಿಕೆ ಈಡೇರಿಕೆಗಾಗಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆ 8 ಜನರ ಮೇಲೆ ಸ್ವಯಂಪ್ರೇರಿತವಾಗಿ ಪೊಲಿಸರು ಪ್ರಕರಣ ದಾಖಲಿಸಿರುವುದನ್ನು ವಾಪಸ್ ಪಡೆಯಬೇಕೆಂದು ಹಿರಿಯ ಸಾಹಿತಿ ಡಾ. ಎನ್.ಆರ್. ನಾಯಕ ಆಗ್ರಹಿಸಿದರು.ಗುರುವಾರ ಪತ್ರಿಕಾಗೊಷ್ಡಿಯಲ್ಲಿ ಮಾತನಾಡಿದ ಅವರು, ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಹಲವರು ಮೃತರಾಗಿದ್ದಾರೆ. ಮೃತಪಟ್ಟವರ ನ್ಯಾಯಕ್ಕಾಗಿ ಹೋರಾಟ ಮಾಡಿದವರ ಮೇಲೆ ಪ್ರಕರಣ ದಾಖಲಿಸಿರುವುದು ಹೋರಾಟದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದರು.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಅಧ್ಯಕ್ಷ ದಾಮೋದರ ನಾಯ್ಕ ಮಾತನಾಡಿ, ಸೆ. 12ರಂದು ಎನ್ಎಚ್ಎಐ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಿ ಶರಾವತಿ ಸರ್ಕಲ್ ಮೂಲಕ ಪಾದಯಾತ್ರೆ ನಡೆಸಿದ್ದೇವು. ಪ್ರತಿಭಟನೆ ಶಾಂತಿಯುತವಾಗಿ ನಡೆದರೂ ಪ್ರಣವಾನಂದ ಸ್ವಾಮೀಜಿ ಸೇರಿದಂತೆ 8 ಜನರ ಮೇಲೆ ಪ್ರಕರಣ ದಾಖಲಿಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಮಾಧವ ಹೆಗಡೆ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ರಾಜ್ಯ ಯುವ ಒಕ್ಕೂಟದ ಅಧ್ಯಕ್ಷ ಸಚಿನ ನಾಯ್ಕ, ಕರ್ನಾಟಕ ಕ್ರಾಂತಿರಂಗದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ, ಕರವೇ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ, ರಾಜೇಶ ನಾಯ್ಕ ಹೊನ್ನಾವರ, ಜಿಲ್ಲಾ ಕಿಸಾನ್ ಸಂಘದ ಉಪಾಧ್ಯಕ್ಷ ಡಿ.ಎಂ. ನಾಯ್ಕ, ತಾಲೂಕು ಅಧ್ಯಕ್ಷ ವಿ.ಐ. ಹೆಗಡೆ, ಶರತ್ ಹೊನ್ನಾವರ, ತಿರುಮಲ ಗೌಡ ದುಗ್ಗೂರು, ಗಣಪತಿ ನಾಯ್ಕ, ಮೋಹನ ನಾಯ್ಕ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.