ಲಕ್ಷ್ಮೇಶ್ವರ: ರೈತರು ಬೆಳೆದ ಗೋವಿನಜೋಳವನ್ನು ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಇ- ಟೆಂಡರ್ ಮೂಲಕ ಮಾರಾಟ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಕೃಷಿಕ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಅವರು ತಹಸೀಲ್ದಾರ್ ಮತ್ತು ಎಪಿಎಂಸಿ ಕಾರ್ಯದರ್ಶಿ ರುದ್ರಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಗೋವಿನಜೋಳದ ಸೀಜನ್ ಆರಂಭವಾಗುತ್ತಿದ್ದಂತೆ ಯಾವುದೇ ಪರವಾನಗಿ ಇಲ್ಲದ ಖರೀದಿದಾರರು ನೇರವಾಗಿ ರೈತರ ಮನೆ ಮತ್ತು ಕಣಗಳಿಗೆ ತೆರಳಿ ಖರೀದಿಗೆ ಮುಂದಾಗುತ್ತಾರೆ. ಹೀಗೆ ಖರೀದಿ ಮಾಡುವ ಖರೀದಿದಾರರಿಂದ ರೈತರಿಗೆ ತೂಕದಲ್ಲಿ ಮೋಸ ಆಗುತ್ತಿದೆ. ಅಲ್ಲದೆ ಫಸಲು ಖರೀದಿಸಿದ ನಂತರ ಪೂರ್ಣ ಹಣ ನೀಡದೆ ಸ್ವಲ್ಪ ಹಣ ಕೊಟ್ಟು ಉಳಿದ ಹಣವನ್ನು ಒಂದು ವಾರದಲ್ಲಿ ಕೊಡುವುದಾಗಿ ಹೇಳುತ್ತಾರೆ.ಆದರೆ ವಾರದ ನಂತರ ಅವರು ರೈತರ ಸಂಪರ್ಕ ಸಿಗುವುದೇ ಇಲ್ಲ. ಕಷ್ಟಪಟ್ಟು ಬೆಳೆ ಬೆಳೆದ ರೈತ ವಿನಾಕಾರಣ ತೊಂದರೆ ಅನುಭವಿಸಬೇಕಾಗಿದೆ. ಕಳೆದ ಹಲವಾರು ವರ್ಷಗಳಿಂದ ಇಂಥ ಖರೀದಿದಾರರಿಂದ ರೈತರು ಮೋಸ ಹೋಗಿರುವ ಉಧಾಹರಣೆಗಳು ಸಾಕಷ್ಟಿವೆ.
ಇನ್ನು ಮುಂದೆ ಹೊರಗಡೆ ಗೋವಿನಜೋಳದ ಖರೀದಿಗೆ ಅವಕಾಶ ಕೊಡದೆ ಎಪಿಎಂಸಿಯಲ್ಲೇ ಖರೀದಿ ಆಗುವಂತೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಮೋಸ ಮಾಡುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗಂಗನಗೌಡ ಪಾಟೀಲ, ಬಸವರಾಜ ಸೊರಟೂರ, ಮುತ್ತಪ್ಪ ಮಡಿವಾಳರ, ಸಂಗಯ್ಯ ಹಿರೇಮಠ, ಸೋಮಣ್ಣ ಮೋಡಿ ಮತ್ತಿತರರು ಇದ್ದರು.ವಿಜಯಜ್ಯೋತಿ ಯಾತ್ರೆ ಇಂದು ಜಿಲ್ಲೆಗೆ ಆಗಮನಗದಗ: ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಗೌರವಾರ್ಥ ಪ್ರತಿವರ್ಷ ಅ. 23, 24 ಹಾಗೂ 25ರಂದು ಕಿತ್ತೂರಿನ ಕೋಟೆ ಆವರಣದಲ್ಲಿ ಕಿತ್ತೂರು ಉತ್ಸವವನ್ನು ಆಚರಿಸಲಾಗುತ್ತಿದೆ. ಉತ್ಸವದ ಪೂರ್ವಭಾವಿಯಾಗಿ ವಿಜಯಜ್ಯೋತಿ ಯಾತ್ರೆಯು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸುತ್ತಿದೆ. ಅ. 14ರಂದು ಹಾವೇರಿಯಿಂದ ಮಧ್ಯಾಹ್ನ 3.30ಕ್ಕೆ ಗದಗ ಜಿಲ್ಲೆಗೆ ವಿಜಯಜ್ಯೋತಿಯು ಆಗಮಿಸಲಿದೆ.ನಗರದ ಪ್ರವಾಸಿ ಮಂದಿರದಲ್ಲಿ ವಿಜಯಜ್ಯೋತಿಯ ಪೂಜೆ ನೆರವೇರಲಿದೆ. ವಿಜಯಜ್ಯೋತಿ ಯಾತ್ರೆಯು ಮುಳಗುಂದ ನಾಕಾ ಮಾರ್ಗವಾಗಿ ಚೆನ್ನಮ್ಮ ವೃತ್ತಕ್ಕೆ ತಲುಪುವುದು. ಸಂಜೆ 5ಕ್ಕೆ ವಿಜಯಜ್ಯೋತಿಯ ಯಾತ್ರೆಯ ಬೀಳ್ಕೊಡುಗೆ ಜರುಗಲಿದೆ. ವಿಜಯಜ್ಯೋತಿಯ ಯಾತ್ರೆಯು ಲಕ್ಕುಂಡಿ ಐತಿಹಾಸಿಕ ಸ್ಥಳ, ಕೊಪ್ಪಳ, ವಿಜಯನಗರ ಮಾರ್ಗವಾಗಿ ಹಂಪಿಗೆ ಸಂಚರಿಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.