ಮೈನಿಂಗ್ ಸ್ಟಾಕ್‌ಯಾರ್ಡ್ ಸ್ಥಳಾಂತರಕ್ಕೆ ಒತ್ತಾಯ

KannadaprabhaNewsNetwork |  
Published : Jul 18, 2025, 12:45 AM IST
ಪೋಟೋ೧೭ಸಿಎಲ್‌ಕೆ೧ ಚಳ್ಳಕೆರೆ ನಗರದ ಪಾವಗಡ ರಸ್ತೆಯ ರೈಲ್ವೆ ಮೈನಿಂಗ್ ಯಾರ್ಡ್ ಬಳಿ ಬಿಜೆಪಿ ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು. ಸಂಸದ ಗೋವಿಂದ ಎಂ.ಕಾರಜೋಳ ಭಾಗವಹಿಸಿದ್ದರು. | Kannada Prabha

ಸಾರಾಂಶ

ಚಳ್ಳಕೆರೆ ನಗರದ ಪಾವಗಡ ರಸ್ತೆಯ ರೈಲ್ವೆ ಮೈನಿಂಗ್ ಯಾರ್ಡ್ ಬಳಿ ಬಿಜೆಪಿ ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು. ಸಂಸದ ಗೋವಿಂದ ಎಂ.ಕಾರಜೋಳ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಗರದ ಪಾವಗಡ ರಸ್ತೆಯ ರೈಲ್ವೆ ನಿಲ್ದಾಣದ ಬಳಿ ಇತ್ತೀಚಿಗಷ್ಟೇ ಮೈನಿಂಗ್ ಕಂಪನಿಯ ಸ್ಟಾಕ್‌ಯಾರ್ಡ್ ಪ್ರಾರಂಭಿಸಿ ಪ್ರತಿನಿತ್ಯ ನೂರಾರು ಟನ್ ಮೈನಿಂಗ್‌ನ್ನು ಹೆಗ್ಗೆರೆಯ ಖಾಸಗಿ ಫ್ಯಾಕ್ಟರಿಗೆ ಸರಬರಾಜು ಮಾಡುತ್ತಿದ್ದು, ರೈಲ್ವೆ ವ್ಯಾಗಿನ್‌ಗಳಲ್ಲಿ ಬಂದ ಮೈನಿಂಗನ್ನು ಟಿಪ್ಪರ್ ಲಾರಿಗಳಿಗೆ ಲೋಡ್ ಮಾಡಿ ಸರಬರಾಜು ಮಾಡುತ್ತಿರುವುದರಿಂದ ಪ್ರತಿನಿತ್ಯ ಸುತ್ತಮುತ್ತಲ ಸಾವಿರಾರು ನಿವಾಸಿಗಳು ಅನಗತ್ಯವಾಗಿ ಮೈನಿಂಗ್ ಧೂಳನ್ನು ಸೇವಿಸಬೇಕಾದ ಸಂದರ್ಭ ಒದಗಿದೆ. ಪ್ರದೇಶದ ಸುತ್ತಮುತ್ತ ಶಾಲೆಗಳಿದ್ದು, ಮೈನಿಂಗ್ ಯಾರ್ಡ್‌ನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಕಳೆದ ನಾಲ್ಕು ದಿನಗಳ ಹಿಂದೆ ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಮಹಿಳೆಯರು ಸಾರ್ವಜನಿಕರು ತೊಂದರೆ ಬಗ್ಗೆ ಮನವಿ ನೀಡಿದ್ದರು. ಮನವಿ ಸ್ವೀಕರಿಸಿದ ಗೋವಿಂದ ಕಾರಜೋಳ ಇಂದು ನೇರವಾಗಿ ಅವರೇ ಆಗಮಿಸಿ ಜನರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಜನಪರ ಕಾಳಜಿಯುಳ್ಳ ಸಂಸದರಲ್ಲಿ ಹಿರಿಯರಾದ ಗೋವಿಂದ ಕಾರಜೋಳ ಸಹ ಒಬ್ಬರಾಗಿದ್ದಾರೆ. ಇಲ್ಲಿನ ಪರಿಸ್ಥಿತಿಯ ಬಗ್ಗೆ ಈಗಾಗಲೇ ಸಂಸದರಿಗೆ ಸಂಪೂರ್ಣ ಮಾಹಿತಿ ಇದ್ದು ಈ ಭಾಗದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ನಾನು ಸಹ ನಿಮ್ಮೆಲ್ಲರ ಪರವಾಗಿ ಮನವಿ ಮಾಡುತ್ತೇನೆಂದರು.

ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಈ ಭಾಗದ ಜನರ ಅಭಿಪ್ರಾಯ ಪಡೆದು ಸಂಬಂಧಪಟ್ಟ ಅಧಿಕಾರಿಗಳು ಮೈನಿಂಗ್ ಸ್ಟಾಕ್‌ಯಾರ್ಡನ್ನು ಆರಂಭಿಸಬೇಕಿತ್ತು. ಆದರೆ ಯಾರ ಗಮನಕ್ಕೂ ತಾರದೆ ಮುಂದಿನ ಆಗುಹೋಗುಗಳ ಬಗ್ಗೆ ಚಿಂತನೆ ನಡೆಸದೆ ಮೈನಿಂಗ್ ಯಾರ್ಡ್ ಆರಂಭಿಸಿದ್ದಾರೆ ಎಂದರು.

ಕಡೆಪಕ್ಷ ಈ ಭಾಗದ ತಾಲೂಕು ಮಟ್ಟದ ಅಧಿಕಾರಿಗಳಾದರೂ ಭೇಟಿ ನೀಡಿ ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕಿತ್ತು. ಆದರೆ, ಇಲ್ಲಿಯೂ ಸಹ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಹಿಂದೇಟು ಹಾಕಿದ್ದಾರೆ. ಇಂದಿನ ಪ್ರತಿಭಟನೆಯಲ್ಲಿ ಪುಟ್ಟಮಕ್ಕಳು, ತಾಯಂದಿರು, ವೃದ್ಧರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿನಿತ್ಯ ಅವರು ಅನುಭವಿಸುತ್ತಿರುವ ನೋವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನು ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತೊಮ್ಮೆ ಭೇಟಿ ನೀಡಿ ಕೂಡಲೇ ಮೈನಿಂಗ್‌ ಯಾರ್ಡ್‌ನ ಸ್ಥಳವನ್ನು ಬದಲಾಯಿಸಬೇಕಿದೆ. ಸಾರ್ವಜನಿಕರು ಸಹ ಶಾಂತಿ ರೀತಿಯಿಂದ ಸಹಕರಿಸಿ ಮೈನಿಂಗ್ ಯಾರ್ಡ್ ಬೇರೆಡೆ ಸ್ಥಳಾಂತರಕ್ಕೆ ನಾನು ತ್ವರಿತ ಕ್ರಮ ಕೈಗೊಳ್ಳುತ್ತೇನೆ. ಸಾರ್ವಜನಿರಿಗೆ ತೊಂದರೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸರಿಯಲ್ಲ. ನಿಮ್ಮ ಹೋರಾಟಕ್ಕೆ ನಾನು ಸದಾ ಸ್ಪಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮತ್ತೊಮ್ಮೆ ಎದುರಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಪ್ರತಿನಿತ್ಯ ಸಾವಿರಾರು ಜನರು, ಮಕ್ಕಳು ಮೈನಿಂಗ್ ಧೂಳಿನಿಂದ ರೋಗಗ್ರಸ್ತಾರಗುವ ಸಂಭವ ಎದುರಾಗಿದೆ. ಆದರೆ, ಈ ಬಗ್ಗೆ ಸ್ಥಳಿಯ ಅಧಿಕಾರಿಗಳು ಮೌನವಹಿಸಲು ಕಾರಣವೇನು. ಜನರ ಸಂಕಷ್ಟಗಳಿಗೆ ನೆರವಾಗದ ಜನರ ಸಮಸ್ಯೆಗಳನ್ನೇ ಆಲಿಸದ ಸ್ಥಿತಿ ಉಂಟಾಗಿರುವುದು ವಿಷಾದನೀಯ. ಇತ್ತೀಚಿನ ದಿನಗಳಲ್ಲಿ ಜಿಲ್ಲಾ, ತಾಲೂಕು ಆಡಳಿತ ಜನರ ಸಮಸ್ಯೆಯ ಬಗ್ಗೆ ಉದಾಸೀನ ವಹಿಸುತ್ತಿರುವ ಘಟನೆಗಳು ಮರುಕಳಿಸುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಗಂಭಿರ ಚಿಂತನೆ ನಡೆಸಬೇಕಿದೆ. ಜನರ ವಿರುದ್ಧ ಹೋರಾಡುವ ಸ್ಥಿತಿ ಎಂದಿಗೂ ಆಡಳಿತಕ್ಕೆ ಬರಬಾರದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಮಾಜಿ ಜಿಲ್ಲಾಧ್ಯಕ್ಷ ಎ.ಮುರುಳಿಯಾದವ್, ಸೂರನಹಳ್ಳಿ ಶ್ರೀನಿವಾಸ್, ತಾಲೂಕು ಅದ್ಯಕ್ಷ ಬಿ.ಎಂ.ಸುರೇಶ್, ಮಾಜಿ ಕಾರ್ಯದರ್ಶಿ ಜಯಪಾಲಯ್ಯ, ಸೋಮಶೇಖರ ಮಂಡಿಮಠ, ಎ.ಮಂಜುನಾಥ, ಮೋಹನ್, ಚನ್ನಗಾನಹಳ್ಳಿ ಮಲ್ಲೇಶ್, ಟಿ.ಮಂಜುನಾಥ, ಹೊನ್ನೂರು ಗೋವಿಂದಪ್ಪ, ದೇವರಾಜರೆಡ್ಡಿ, ರಂಗಸ್ವಾಮಿ, ದಿನೇಶ್‌ರೆಡ್ಡಿ, ಕಾಲುವೇಹಳ್ಳಿ ರಂಗಸ್ವಾಮಿ, ಶಿವಣ್ಣ, ಟಿ.ತಿಮ್ಮಪ್ಪ, ಎಂವೈಟಿ ಸ್ವಾಮಿ, ಬಿ.ಎಸ್.ಶಿವಪುತ್ರಪ್ಪ, ಎ.ವಿಜಯೇಂದ್ರ, ಡಿ.ಎಂ.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು