ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಆಗ್ರಹ

KannadaprabhaNewsNetwork |  
Published : Apr 28, 2026, 02:00 AM IST
ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಗೋ ಸಮ್ಮಾನ ಆಹ್ವಾನ ಅಭಿಯಾನ ಸಮಿತಿಯಿಂದ ಬಳ್ಳಾರಿಯಲ್ಲಿ ಸೋಮವಾರ ಮೆರವಣಿಗೆ ನಡೆಸಲಾಯಿತು.  | Kannada Prabha

ಸಾರಾಂಶ

ಕಾನೂನುಬಾಹಿರವಾಗಿ ಜಾನುವಾರುಗಳ ಸಾಗಣೆ, ಮಾರಾಟ ಹಾಗೂ ಹತ್ಯೆಗೆ ಕಟ್ಟುನಿಟ್ಟಿನ ನಿಯಂತ್ರಣ ವಿಧಿಸಿದೆ.

ಬಳ್ಳಾರಿ: ನಗರದ ರಾಘವ ಕಲಾ ಮಂದಿರದಲ್ಲಿ ಗೋ ಸಮ್ಮಾನ ಆಹ್ವಾನ ಅಭಿಯಾನ ಸಮಿತಿಯಿಂದ ಗೋ ಗೌರವ ದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಳ್ಳಾರಿ ಗೋ ಶಾಲಾ ಅಧ್ಯಕ್ಷ ವಿನಯ್ ಮಾತನಾಡಿ, ರಾಜ್ಯದಲ್ಲಿನ ಗೋವುಗಳ ಸಂರಕ್ಷಣೆಗಾಗಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಕಾನೂನುಬಾಹಿರವಾಗಿ ಜಾನುವಾರುಗಳ ಸಾಗಣೆ, ಮಾರಾಟ ಹಾಗೂ ಹತ್ಯೆಗೆ ಕಟ್ಟುನಿಟ್ಟಿನ ನಿಯಂತ್ರಣ ವಿಧಿಸಿದೆ. ಕಾಯ್ದೆಯ ಪ್ರಕಾರ ಗೋವು ಹತ್ಯೆ ಸಂಪೂರ್ಣ ನಿಷೇಧಿಸಲಾಗಿದೆ. ಉಲ್ಲಂಘನೆ ಮಾಡಿದವರಿಗೆ ಜೈಲು ಶಿಕ್ಷೆ ಮತ್ತು ದಂಡದ ವ್ಯವಸ್ಥೆ ಇದೆ. ಜಾನುವಾರುಗಳ ಅಕ್ರಮ ಸಾಗಣೆ, ಮಾಂಸ ಮಾರಾಟ, ಸಂಬಂಧಿತ ಚಟುವಟಿಕೆಗಳ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಗೋವುಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿಲ್ಲ. ಗೋಹತ್ಯೆ ಪ್ರಕರಣಗಳು ನಿರಂತರ ನಡೆಯುತ್ತಿವೆ. ಇದನ್ನು ಕೂಡಲೇ ನಿಯಂತ್ರಿಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ವಹಿಸಬೇಕು. ಸಾರ್ವಜನಿಕರಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತಾಡಿದ ಸಮಿತಿ ಸಂಚಾಲಕ ಗುರುರಾಜ್ ಸಸಿಹಿತ್ಲು, ಗೋಹತ್ಯೆ ನಿಷೇಧ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವು ನಿರಂತರವಾಗಿ ನಡೆಯುತ್ತಿದೆ. ಸಹಿ ಅಭಿಯಾನ ಸೇರಿದಂತೆ ಅನೇಕ ಕಾರ್ಯಕ್ರಮಗಳ ರೂಪುರೇಷೆಗಳನ್ನು ರೂಪಿಸಲಾಗುತ್ತಿದೆ. ಗೋ ಹತ್ಯಾ ನಿಷೇಧವನ್ನು ಬೆಂಬಲಿಸಿ ಬಳ್ಳಾರಿಯಲ್ಲಿ ಸುಮಾರು 26,500 ಜನರ ಸಹಿ ಸಂಗ್ರಹವಾಗಿದೆ. ತಹಸೀಲ್ದಾರ್ ಮೂಲಕ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲ, ಮುಖ್ಯಮಂತ್ರಿಗೆ ಕಳುಹಿಸಲಾಗುವುದು. ನಿಗದಿತ ಸಮಯದೊಳಗೆ ಸಕಾರಾತ್ಮಕ ಸ್ಪಂದನೆ ಸಿಗದಿದ್ದಲ್ಲಿ ಮುಂದಿನ ಹಂತದ ಹೋರಾಟಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಎಚ್‌.ಹನುಮಂತಪ್ಪ, ಕೆ.ಎಸ್. ದಿವಾಕರ್, ಶ್ರೇಷ್ಠ ಇಂಟರ್‌ನ್ಯಾಷನಲ್ ಸ್ಕೂಲ್ ನ ಸ್ಥಾಪಕ ಬ್ರಹ್ಮಯ್ಯ ನಾಯ್ಡು, ಬಳ್ಳಾರಿಯ ಶೃಂಗೇರಿ ಶಾರದಾ ಮಠದ ಧರ್ಮದರ್ಶಿ ಬಿಕೆಬಿಎನ್‌ ಮೂರ್ತಿ, ಸೂರಜ್ ಮಾಲ್ ಅತಿಥಿಗಳಾಗಿ ಭಾಗವಹಿಸಿದ್ದರು. ಶರಣು, ಕಣೇಕಲ್ ಎರಿಸ್ವಾಮಿ ಹಾಗೂ ಮಹೇಶಗೌಡ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಜರುಗಿದ ಮೆರವಣಿಗೆಗೆ ಸೋಮಸಮುದ್ರದ ಕೊಟ್ಟೂರುಸ್ವಾಮಿ ಮಠದ ಸಿದ್ಧಲಿಂಗಯ್ಯ ಸ್ವಾಮೀಜಿ ಗೋಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳ ಮೂಲಕ ಹೊರಟ ಮೆರವಣಿಗೆಯಲ್ಲಿ ಬಿಜೆಪಿಯ ನೂರಾರು ಕಾರ್ಯಕರ್ತರು ಹಾಗೂ ಗೋ ಸಂರಕ್ಷಣಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ. ಅಂಬೇಡ್ಕರ್‌ ಸಮಾನತೆ ನೀಡಿದ ಮಹಾ ನಾಯಕ: ರಾಘವೇಂದ್ರ ಹಿಟ್ನಾಳ
ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ: ಶಿವರಾಜ ತಂಗಡಗಿ