ನಗರಕ್ಕೆ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಆದೇಶ ವಾಪಸ್ಸಿಗೆ ಒತ್ತಾಯ
ರಾಯಚೂರು: ನಗರಕ್ಕೆ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡುವ ಆದೇಶವನ್ನು ನಗರಸಭೆ ಪೌರಾಯುಕ್ತರು ತಕ್ಷಣ ವಾಪಸ್ಸು ಪಡೆಯಬೇಕು, ಇಲ್ಲವಾದಲ್ಲಿ ನಗರಸಭೆ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಎಚ್ಚರಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷ್ಣಾ ನದಿ ಮತ್ತು ತುಂಗಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆಯಿದ್ದರು ಸಹ ಪೌರಾಯುಕ್ತರು ಏಕಾಏಕಿ ಆದೇಶ ಹೊರಡಿಸಿರುವುದು ಖಂಡನೀಯ ವಿಷಯವಾಗಿದೆ. ನಗರಸಭೆ ಅಧ್ಯಕ್ಷರ, ಉಪಾಧ್ಯಕ್ಷರ ಚುನಾವಣೆ ನಡೆಯಬೇಕಿದೆ ಆದರೆ ನಗರಸಭೆ ಸದಸ್ಯರು ಇನ್ನೂ ಅಧಿಕಾರದಲ್ಲಿದ್ದಾರೆ. ಅವರನ್ನು ವಿಶ್ವಾಸಕ್ಕೆ ಪಡೆಯದೆ, ಚರ್ಚಿಸದೆ ತಾವೇ ನಿರ್ಣಯ ಕೈಗೊಂಡಿದ್ದಾರೆ. ನಗರಕ್ಕೆ ನೀರು ಸರಬರಾಜು ಆಗುವ ಜಲಾಶಯದಲ್ಲಿ ನೀರಿನ ಸಂಗ್ರಹ ಮಾಡಲಾಗುತ್ತಿದೆ. ಯಾವುದೆ ತುರ್ತು ಸಂದರ್ಭವಿಲ್ಲದಿರುವಾಗ ಕುಡಿಯುವ ನೀರಿನ ಸರಬರಾಜಲ್ಲಿ ವ್ಯತ್ಯಯ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ನಗರಸಭೆ ಸದಸ್ಯರು ಕೇವಲ ಇ-ಖಾತಾ, ಮುಟೇಷನ್ ಗಾಗಿ ಜನರಿಂದ ಆಯ್ಕೆಯಾಗಿಲ್ಲ. ನಗರದ ನೈರ್ಮಲ್ಯ, ಕುಡಿಯುವ ನೀರು ಸರಬರಾಜು ಬಗ್ಗೆ ಅವರು ಧ್ವನಿ ಎತ್ತಬೇಕು. ನಗರಸಭೆ ಹಿರಿಯ ಸದಸ್ಯ ಜಯಣ್ಣ ಅವರು ಈ ಬಗ್ಗೆ ಹೇಳಿಕೆ ನೀಡಿ ಪೌರಾಯುಕ್ತರ ನಡೆಯನ್ನು ಖಂಡಿಸಿದ್ದು ಸ್ವಾಗತಾರ್ಹ ಎಂದರು.
ನೀರಿನ ವಿಷಯದಲ್ಲಿ ಯಾರು ರಾಜಕೀಯ ಮಾಡಬಾರದು. ನಗರಸಭೆ ಕಸ ವಿಲೇವಾರಿಯಲ್ಲಿಯೂ ಎಡವಿದೆ ಅದನ್ನು ಸರಿಪಡಿಸಿಕೊಳ್ಳಬೇಕು. ನಗರಸಭೆ ಆಡಳಿತ ಹಳಿಗೆ ಬಾರದಿದ್ದರೆ ಹೋರಾಟ ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಬಿ.ಗೋವಿಂದ, ನಾಗರಾಜ, ಶಶಿರಾಜ, ನರಸರೆಡ್ಡಿ, ಎ.ಚಂದ್ರಶೇಖರ, ಜಿ.ನರಸರೆಡ್ಡಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.