ಗಂಗಾಮತ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ವತಿಯಿಂದ ಮುಖ್ಯಮಂತ್ರಿಗೆ ಮನವಿ
ಕನ್ನಡಪ್ರಭ ವಾರ್ತೆ ಕನಕಗಿರಿಅಮಾಯಕ ಯುವತಿ ಅಂಜಲಿ ಅಂಬಿಗೇರ ಕೊಲೆಯನ್ನು ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ, ಪರಿಹಾರ ನೀಡಬೇಕೆಂದು ಆಗ್ರಹಿಸಿ ತಾಲೂಕು ಗಂಗಾಮತ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ನಂತರ ಗಂಗಾಮತ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಟಿ.ಜೆ. ರಾಜಶೇಖರ ಮಾತನಾಡಿ, ನೇಹಾ ಹಿರೇಮಠ ಕೊಲೆ ಮಾಸುವ ಮುನ್ನವೇ ಮತ್ತೊಬ್ಬ ಯುವತಿಯ ಕೊಲೆ ನಡೆದಿರುವುದು ದುರಂತವೇ ಸರಿ. ಕ್ರಿಮಿನಲ್ ಹಿನ್ನೆಲೆಯ ಯುವಕ ಅಂಜಲಿಗೆ ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಪೀಡಿಸುತ್ತಿದ್ದ.ಅಂಜಲಿ ಪ್ರೀತಿ ನಿರಾಕರಿಸಿದಾಗ ನೇಹಾ ಹಿರೇಮಠ ರೀತಿಯಲ್ಲಿ ನಿನ್ನನ್ನು ಕೊಲೆ ಮಾಡುವುದಾಗಿ ಪದೆ ಪದೇ ಹೇಳುತ್ತಿದ್ದನು. ಇದರಿಂದ ಹೆದರಿದ ಕುಟುಂಬದವರು ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಬೇಜಾವಾಬ್ದಾರಿತನದಿಂದ ವರ್ತಿಸಿದ್ದೆ ಅಂಜಲಿ ಸಾವಿಗೆ ಕಾರಣವಾಗಿದೆ. ಈ ರೀತಿಯ ಘಟನೆಯಿಂದ ರಾಜ್ಯದಲ್ಲಿಯೇ ಆತಂಕ ತರಿಸಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಅವರಿಗೆ ಮನೆ ಬಿಡುವಂತೆ ಮಾಲೀಕರು ಸಹ ಒತ್ತಡ ಹೇರಿದ್ದು, ಮನೆ ಕೂಡ ಇಲ್ಲದೆ ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೊಲೆಗೆ ಕಾರಣನಾದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ, ಇಂತಹ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂತ್ರಸ್ಥ ಕುಟುಂಬಕ್ಕೆ ₹೨೫ ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ಸಮಾಜದ ಪ್ರಮುಖರಾದ ಟಿ.ಜೆ. ರಾಮಚಂದ್ರ, ಕೃಷ್ಣ ವದ್ದಿಗೇರಿ, ವಿರೂಪಣ್ಣ ಕಲ್ಲೂರು, ದುರುಗೇಶ ವಾಲೇಕಾರ, ವೀರೇಶ ಗಂಗಾಮತ, ಶಿವಪ್ಪ ಕುಂಡೇರ, ರಾಮು ಕಂಪ್ಲಿ, ಕನಕಪ್ಪ ವಾಲೇಕಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗಂಗಾಮತ ಸಮಾಜದ ಹಿರಿಯರು ಇದ್ದರು.